ಡಿ.ಆರ್.ನಾಗರಾಜ್ ಕೊನೆಯ ಕೃತಿ ‘ಸಂಸ್ಕೃತಿ ಕಥನ’ ಬಿಡುಗಡೆ
ಬೆಂಗಳೂರು : ಕನ್ನಡದ ಶ್ರೇಷ್ಠ ವಿಮರ್ಶಕರಲ್ಲೊಬ್ಬರಾದ ‘ಶಕ್ತಿ ಶಾರದೆಯ ಮೇಳ’ದ ಲೇಖಕ ದಿವಂಗತ ಡಿ.ಆರ್.ನಾಗರಾಜ್ ಅವರ ಅಪ್ರಕಟಿತ ಲೇಖನಗಳ ಸಂಗ್ರಹ ‘ಸಂಸ್ಕೃತಿ ಕಥನ’ ಕೃತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಹೊರತಂದಿದೆ.
ಕನ್ನಡ ಪುಸ್ತಕ ಪ್ರಾಧಿಕಾರ, ಡಿ.ಆರ್.ನಾಗರಾಜ್ ಸಾಹಿತ್ಯ ಸಂಸ್ಕೃತಿ ಟ್ರಸ್ಟ್ ಹಾಗೂ ರುಜುವಾತು ವೇದಿಕೆ ಆ.16 ರ ಶುಕ್ರವಾರ ಜಂಟಿಯಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಚ್.ಶ್ರೀನಿವಾಸ್ ‘ಸಂಸ್ಕೃತಿ ಕಥನ’ ಪುಸ್ತಕವನ್ನು ಬಿಡುಗಡೆ ಮಾಡಿದರು.
ಅಲ್ಪ ಜೀವಿತಾವಧಿಯಲ್ಲಿ ನಾಗರಾಜ್ರ ಸಾಹಿತ್ಯಿಕ ಸಾಧನೆ ಮಹತ್ತರವಾದುದು. ಸಮಗ್ರ ಸಾಮಾಜಿಕ ನೆಲೆಗೆ ಸ್ಪಂದಿಸುವಂತಿದ್ದ ಅವರ ಚಿಂತನಾ ಚೌಕಟ್ಟು ಸೂಕ್ಷ್ಮತೆಗಳಿಂದ ಕೂಡಿತ್ತು . ಸಾಹಿತ್ಯಿಕವಾಗಿ ಮಾತ್ರವಲ್ಲ - ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ನೆಲೆಗಳಲ್ಲೂ ನಾಗರಾಜ್ ಅವರ ಚಿಂತನೆ ಕೂಡಿತ್ತು ಎಂದು ಶ್ರೀನಿವಾಸ್ ಹೇಳಿದರು.
ಸಮಕಾಲೀನ ಸಾಂಸ್ಕೃತಿಕ ಸಂದರ್ಭದಲ್ಲಿ ನಾಗರಾಜ್ ಅವರ ಅಪ್ರಕಟಿತ ಬರಹಗಳ ಸಂಕಲನ ಪ್ರಕಟಿಸುವ ಮಹತ್ವದ ಹೊಣೆಗಾರಿಕೆ. ಇಂಥ ಹೊಣೆಗಾರಿಕೆಯನ್ನು ನಿರ್ವಹಿಸಿದ ಪುಸ್ತಕ ಪ್ರಾಧಿಕಾರ ಅಭಿನಂದನೀಯ ಎಂದು ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಸಂಸ್ಕೃತಿ ಕಥನ ಕೃತಿಯ ಸಂಪಾದಕಾರದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಬೆಂಗಳೂರು ವಿವಿ ಪ್ರಸಾರಾಂಗ ನಿರ್ದೇಶಕ ಡಾ.ಬಸವರಾಜ ಕಲ್ಗುಡಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)