ವಿಶೇಷ ಲೇಖನ: ರಂಗಭೂಮಿ ಹಾಗೂ ಅಂತರ್ಜಾಲ ಬಳಕೆ
ವಿಶ್ವರಂಗ ದಿನಾಚರಣೆ(ಮಾರ್ಚ್ 27) ಅಂಗವಾಗಿ ರಂಗಭೂಮಿ ಹಾಗೂ ಅಂತರ್ಜಾಲ, ಸಾಮಾಜಿಕ ಜಾಲ ತಾಣಗಳ ಬಳಕೆ ಬಗ್ಗೆ ಒಂದು ವಿವರಣೆ ಹಾಗೂ ಅಭಿಪ್ರಾಯ ಇಲ್ಲಿದೆ
ವಾಸ್ತವ ಹಾಗೂ ಕಾಲ್ಪನಿಕ ಜಗತ್ತಿನ ಮಧ್ಯದ ಕೊಂಡಿಯಾದ ರಂಗಭೂಮಿ, ಕಲಾವಿದರ ಪ್ರತಿಭೆಯ ವಿಕಸನಕ್ಕೆ ಸೃಷ್ಟಿಯಾದ ಸುಂದರ ವೇದಿಕೆ. ನಾಟಕ ಕಲ್ಪನಾಲೋಕಕ್ಕೂ, ವಾಸ್ತವಿಕ ಜೀವನಕ್ಕೂ ನಡುವೆ ಹಾಯಬಲ್ಲ ಸುಂದರ ನೃತ್ಯ ಕಲೆ. ಇದು ನೃತ್ಯಕಲೆ ಏಕೆಂದರೆ ಮೂಲ ಸಂಸ್ಕೃತ ಪದದ ಆರ್ಥ ನೃತ್ಯಾಧಾರಿತ ಕಲೆ ಎಂಬುದಾಗಿದೆ.
ಕಲ್ಪನೆ ಮತ್ತು ವಾಸ್ತವತೆಯಲ್ಲಿ ವಿಹರಿಸಲು ಬೇಕಾದ ಸೇತುವೆಯ ನಿರ್ಮಾಣ ವಾಗಬೇಕಾಗಿರುವುದು ರಂಗಕರ್ಮಿಗಳಿಂದ, ರಂಗಕರ್ಮಿಗಳೆಂದರೆ ಕೇವಲ ರಂಗಸಜ್ಜಿಕೆ, ವಿನ್ಯಾಸ, ಸಂಯೋಜನೆಯ ಕಾರ್ಯನಿರತರು ಮಾತ್ರವಲ್ಲ, ರಂಗಭೂಮಿಗಾಗಿ ತನು ಮನ ಧನವನ್ನು ಸಮರ್ಪಿಸಲು ಸಿದ್ಧರಿರುವ ನಟ, ನಿರ್ದೇಶಕ ಇನ್ನಿತರ ವರ್ಗದವರೂ ಸೇರುತ್ತಾರೆ. ಇವರಿಂದ ಸೃಷ್ಟಿಸಲ್ಪಡುವ ನಾಟಕವೆಂಬ ಅದ್ಭುತ ಕಲೆಯ ಅಳಿವು-ಉಳಿವಿಗೆ ಅಗತ್ಯವಾಗಿಬೇಕಾದ್ದು ಒಂದು ರಂಗಮಂದಿರ, ಇನ್ನೊಂದು ಪ್ರೇಕ್ಷಕವರ್ಗ.
ಅಂತರ್ಜಾಲ(ವೆಬ್), ಸಾಮಾಜಿಕ ಜಾಲ ತಾಣಗಳ ಮೂಲಕ ನಾವು ನಾಟಕದ ಪ್ರಚಾರವಷ್ಟೇ ಅಲ್ಲದೇ ಇನ್ನೂ ಹೆಚ್ಚಿನದ್ದನ್ನು ಸಾಧಿಸಬಹುದೇ? ಅಂತರ್ಜಾಲವನ್ನು ನಾಟಕರಂಗ ಹೇಗೆ ಸಮರ್ಪಕವಾಗಿ ದುಡಿಸಿಕೊಳ್ಳಬಹುದೇ? ಈ ವಿಷಯದ ಬಗ್ಗೆ ಕೆಲವು ರಂಗಾಸಕ್ತರನ್ನು ಅದರಲ್ಲೂ ಐಟಿರಂಗ, ರಂಗಭೂಮಿದ ಪರಿಚಯಿರುವ ಆಪ್ತರನ್ನು ಕೇಳಿದಾಗ ಸಿಕ್ಕ ಮಾಹಿತಿ ಆಗಾಧವಾಗಿತ್ತು. ಅದರ ಸಾರಾಂಶ ಇಲ್ಲಿದೆ...[ಚಿತ್ರ :ತುಘಲಕ್ ನಾಟಕದ ಒಂದು ದೃಶ್ಯ]
ಬೆಂಗಳೂರಿನಲ್ಲಿ ರಂಗ ಮಂದಿರಗಳು
ಬೆಂಗಳೂರಿನಲ್ಲಿ ರಂಗಮಂದಿರಗಳಿಗೇನು ಕೊರತೆಯಿಲ್ಲ. ನಾಟಕ ಎಂಬ ಮಾಯಾಲೋಕದಲ್ಲಿ ಪ್ರೇಕ್ಷಕರು ಮೈ ಮರೆತು ವಿಹರಿಸುವಂತೆ ಮಾಡಬಲ್ಲ ನಿರ್ದೇಶಕರ ಪರಂಪರೆಯೇ ನಮ್ಮ ರಂಗಭೂಮಿಯಲ್ಲಿದೆ. ನಾಟಕ ಕೇವಲ ಮನರಂಜನಾ ಮಾಧ್ಯಮವಾಗಿರದೆ ಮಾಹಿತಿ ಹಾಗೂ ಮನರಂಜನೆಯ ಸಮ್ಮಿಶ್ರಣವಾಗಿ ಜನತೆಗೆ ಮುದನೀಡುವ ಹೊಣೆಗಾರಿಕೆಯನ್ನು ಹೊಂದಿದೆ ಎಂದರೆ ತಪ್ಪಾಗಲಾರದು.
ಜಟಕಾ ಗಾಡಿ ಹತ್ತಿ ಮೈಕ್ ಹಿಡಿದು
ಪ್ರತಿಭೆಯನ್ನು ಎಲ್ಲರಿಗೂ ತಲುಪಿಸಲು ಸೂಕ್ತ ವೇದಿಕೆಯ ಜೊತೆಗೆ ಪ್ರಚಾರವೂ ಅತಿಮುಖ್ಯ ರಂಗಭೂಮಿ ಹಾಗೂ ಪ್ರಚಾರಕ್ಕೆ ಬಹು ಹಿಂದಿನ ನಂಟಿದೆ. ಹಿಂದೆಲ್ಲಾ ಜಟಕಾ ಗಾಡಿ ಹತ್ತಿ ಮೈಕ್ ಹಿಡಿದು ನಾಟಕದ ಬಗ್ಗೆ ಪ್ರಚಾರ ಕಾರ್ಯ ನಡೆಯುತ್ತಿತ್ತು. ಭಿತ್ತಿ ಚಿತ್ರ, ಪಾಂಪ್ಲೇಟ್, ಪತ್ರಿಕೆಗಳಲ್ಲಿ ಜಾಹೀರಾತು, ತಮಟೆ ಹಿಡಿದು ಢಂಗುರ ಸಾರುವುದು ಒಂದೇ ಎರಡೇ.. ಆದರೆ, ಇದೆಲ್ಲವೂ ಕಂಪೆನಿ ನಾಟಕಗಳ ಪ್ರಚಾರದ ಅವಿಭಾಜ್ಯ ಅಂಗಗಳಾಗಿವೆ. ಅಲ್ಲದೆ ಗ್ರಾಮೀಣ ಭಾಗಕ್ಕೆ ಸೂಕ್ತವಾದ ಪ್ರಚಾರ ತಂತ್ರವಾಗಿದೆ. ಹೊಸ ಹೊಸ ಪ್ರಚಾರ ತಂತ್ರಗಳತ್ತ ರಂಗಭೂಮಿ ಮುಖಮಾಡಿದೆ ಎಂಬುದು ಸಂತೋಷದ ಸಂಗತಿ. ಚಿತ್ರದಲ್ಲಿ : ಕರಣಂ ಪವನ್ ಪ್ರಸಾದ್, ಮುಸ್ತಫಾ, ಪುರಹರ ನಾಟಕ
ಅವಿರತ ಟ್ರಸ್ಟ್ನ ಅಧ್ಯಕ್ಷ ಕೆ.ಟಿ. ಸತೀಶ್ ಗೌಡ
ನಾಟಕಗಳನ್ನು ಪಟ್ಟಣಗಳಿಗಿಂತ ಹಳ್ಳಿಗಳಿಗೆ ಕೊಂಡೊಯ್ಯಬೇಕು. ತಾಲೂಕು, ಜಿಲ್ಲಾಮಟ್ಟಗಳಲ್ಲಿ ನಾಟಕೋತ್ಸವಗಳನ್ನು ಕಾಲಕಾಲಕ್ಕೆ ಮಾಡಬೇಕು. ಇದರೆಲ್ಲದರ ಮಾಹಿತಿಯನ್ನು ವೆಬ್ನಲ್ಲಿ ಸಿಗುವಂತೆ ಮಾಡಬೇಕು. ಒಂದು ಇವೆಂಟ್ ಕ್ಯಾಲೆಂಡರ್ ಮಾಡಿದರೆ ಉತ್ತಮ. ಇದರಿಂದ ಮುಂಬರುವ ನಾಟಕಗಳ ವಿವರ ಸಿಗುತ್ತದೆ. ಬೆಂಗಳೂರು ಬಿಟ್ಟು ತಮ್ಮ ಊರುಗಳಿಗೆ ಹೋಗುವ ಐಟಿ ಜನರಿಗೆ ಅವರ ಊರಲ್ಲೇ ನಾಟಕ ನೋಡುವ ಅವಕಾಶ ಸಿಕ್ಕರೆ ಚೆನ್ನ ಅಲ್ಲವೆ. ಕನ್ನಡ ನಾಡು ನುಡಿಗಾಗಿ ಸ್ಪಂದಿಸುವ ನಮ್ಮ ಟ್ರಸ್ಟ್, ನಾಟಕ ರಂಗದ ಅಭಿವೃದ್ಧಿಗೂ ಬದ್ಧವಾಗಿದೆ.
ಅಭಿಷೇಕ್ ಅಯ್ಯಂಗಾರ್ ಅಭಿಪ್ರಾಯ
ಅಂತರ್ಜಾಲದಿಂದ ರಂಗಭೂಮಿಗೆ ಬಹಳಷ್ಟು ಉಪಯೋಗವಾಗಿದೆ. ಐಟಿರಂಗದ ರಂಗಾಸಕ್ತರನ್ನು ಸೆಳೆಯಲು ಇರುವ effective media aagi ಅಂತರ್ಜಾಲ ಬಳಕೆ ಆಗುತ್ತಿದೆ. ಯುವ ಜನಾಂಗ ಇತ್ತೀಚೆಗೆ ನಾಟಕ ನೋಡೋಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾ ಇದ್ದಾರೆ. ಇವರಲ್ಲಿ ಶೇ. 40 ಕ್ಕೂ ಹೆಚ್ಚಿನ ಮಂದಿ ಐಟಿ ರಂಗದ ಹಿನ್ನೆಲೆಯುಳ್ಳವರು ಎಂಬುದು ಗಮನಾರ್ಹ.
ಆದರೆ, ಅಂತರ್ಜಾಲದಲ್ಲಿ ಕನ್ನಡ ರಂಗಭೂಮಿಯ ಬಗ್ಗೆ ಹೆಚ್ಚಿನ ಮಾಹಿತಿಯಾಗಲಿ, ನಾಟಕ ಕಾರ್ಯಕ್ರಮಗಳ ವಿವರಗಳಾಗಲಿ ಸಿಗೋದು ಕಮ್ಮಿನೇ. ಅದಕ್ಕೆ ನಾವು social networking site ಗಳ ಮೂಲಕ ಪ್ರಚಾರ ಮಾಡುವ ಹೊಸ ಆಯಾಮವನ್ನು ಕಂಡುಕೊಂಡಿದ್ದೀವಿ.
ಎಲ್ಲಾ ತಂಡಗಳಿಗೂ ಪ್ರಚಾರ ಅಗತ್ಯ
ನಮ್ಮ ನಾಟಕಗಳಲ್ಲದೆ, ಇತರೆ ನಾಟಕಗಳ ಬಗ್ಗೆ ಕೂಡ facebookನ event ಮೂಲಕ ಪ್ರಚಾರ ಆರಂಭಿಸಿದ್ದೀವಿ. ನಮ್ಮ ವೆಬ್ ಸೈಟ್ ಅಲ್ಲದೆ ಎರಡು ಮೂರು ಬ್ಲಾಗ್ಗಳನ್ನು ಆರಂಭಿಸಿ ನಾಟಕದ ಬಗ್ಗೆ ವಿವರಗಳು, ವಿಮರ್ಶೆಗಳನ್ನು ಹಾಕ್ತಾ ಇರ್ತೀವಿ. Promotion ಮಾಡೋಕೆ ತುಂಬಾ ವಿಧಾನಗಳಿವೆ ಅದರ ಬಳಕೆ ಮಾಡ್ಬೇಕು ಅಷ್ಟೆ.
ಎಸ್ಸೆಂಎಸ್, ಇ ಮೇಲ್ ಮೂಲಕ ಮಾಹಿತಿ ರವಾನೆ ಮಾಡ್ತೀವಿ. ಒಟ್ಟಿನಲ್ಲಿ ಇಂಟರ್ ನೆಟ್ ಇರಲಿಲ್ಲ ಅಂದ್ರೆ ರಂಗಭೂಮಿ ಐಟಿಜನರನ್ನು ರೀಚ್ ಆಗೋಕೆ ಆಗ್ತಾನೆ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾಟಕ ಅಕಾಡೆಮಿ ಪ್ರತ್ಯೇಕ ವೆಬ್ತಾಣವನ್ನು ಹೊಂದುವುದು ಅಗತ್ಯ
ಕಲಾವಿದೆ, ಅಂಕಣಗಾರ್ತಿ ಶ್ರೀಕಲಾ ಡಿಎಸ್
ನಾಟಕಗಳ making videoಗಳನ್ನು ಚಿತ್ರೀಕರಿಸಿ ಸೂಕ್ತವಾಗಿ ಬಳಸಬಹುದು. ನೀನಾಸಂ, ರಂಗಾಯಣ, ರಂಗಶಂಕರದಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಉತ್ತಮ. ನಾಟಕೋತ್ಸವ ವಿಡಿಯೋ ಚಿತ್ರಣವನ್ನು ಮಾರಾಟ ಮಾಡಬಹುದು. ಯಾರಿಗೆ ಇಲ್ಲಾಂದರೂ ನಾಟಕದ ಗೀಳು ಬೆಳೆಸಿಕೊಂಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಕಲಿಕಾ ಸ್ಥಾನಗಳ ಮಹತ್ವ ಅಲ್ಲಿನ ಗುರು ಶಿಷ್ಯ ಪರಂಪರೆ, ಅಲ್ಲಿನ ವಿದ್ಯಾರ್ಥಿ ಜೀವನ, ನಾಟಕ ರಂಗವೇದಿಕೆ ಏರುವುದಕ್ಕೂ ಮೊದಲು ನಡೆಸಬೇಕಾದ ತಯಾರಿ ಹೀಗೆ ಅನೇಕ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ವೆಬ್ನಲ್ಲಿ ಪ್ರಸ್ತುತಪಡಿಸಬಹುದು. ಬ್ಲಾಗ್ಗಳಲ್ಲಿ ನಾವು ನೋಡಿದ ನಾಟಕಗಳ ವಿಮರ್ಶೆ, ಲಭ್ಯವಾದ ಮುಂಬರುವ ನಾಟಕಗಳ ವಿವರಗಳನ್ನು ಕಾಲಕಾಲಕ್ಕೆ ಹಾಕುತ್ತಿರುತ್ತೇವೆ. ಇದರಿಂದ ಒಂದಷ್ಟು ಆಸಕ್ತಿ ಬೆಳೆಸಲು ಸಹಾಯಕವಾಗಿದೆ.