ನೋಡುಗರ ಮನವನ್ನೂ ಅರಳಿಸುವ ಬ್ರಹ್ಮ ಕಮಲ!
ಹೂವುಗಳಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಅದರಲ್ಲೂ ವರ್ಷಕ್ಕೊಮ್ಮೆ ಕಾಣಸಿಗುವ ವಿಶೇಷ ಹೂವುಗಳೆಂದರೆ ಎಂಥವರಿಗೂ ಕಾದು ನೋಡುವ ಕಾತುರತೆ ಇದ್ದೇ ಇರುತ್ತೆ. ಅದರಲ್ಲೂ ಹೂವು ಅರಳುವ ಪ್ರಕ್ರಿಯೆ ಬಲು ವಿಶಿಷ್ಟವಾದದ್ದು. ಹೂವು ಅರಳಿದಾಗ ಅದನ್ನು ನೋಡುವವರ ಮನವೂ ಅರಳುತ್ತದೆ.
ಎಲ್ಲ ಹೂವುಗಳು ಮೊಗ್ಗಿನ ಹಂತ ದಾಟಿ ಅರಳಲೇಬೇಕು. ಆ ಅರಳುವ ಹಂತವನ್ನು ಯಾರೂ ಅಷ್ಟು ಕುತೂಹಲವಾಗಿ ಗಮನಿಸುವುದಿಲ್ಲ. ಆದರೆ ಈ ಹೂವಿದೆಯಲ್ಲ, ಇದರ ವೈಶಿಷ್ಟ್ಯವೇ ವಿಭಿನ್ನವಾದದ್ದು. ಈ ಹೂವನ್ನು ಬೆಳೆಸುವ ಎಲ್ಲರೂ ಅದು ಅರಳುವಾಗ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದುಕುಳಿತಿರುತ್ತಾರೆ. ಆ ಕ್ಷಣಕ್ಕಾಗಿ ಕಾದಿರುತ್ತಾರೆ.
ಏಕೆಂದರೆ, ಅರಳಿ ವಿಸ್ಮಯ ಮೂಡಿಸುವ ಈ ಹೂವಿನ ಆಯಸ್ಸು ತುಂಬಾ ಕಡಿಮೆ. ರಾತ್ರಿಯರಳಿ ಬೆಳಗಾಗುವ ಹೊತ್ತಿಗೆ ಮುದುಡಿ ಮುದ್ದೆಯಾಗಿರುತ್ತದೆ. ಹೌದು, ಅದೇ ಬ್ರಹ್ಮ ಕಮಲ. ವರ್ಷದಲ್ಲಿ ಒಮ್ಮೆ ಮಾತ್ರ ಅರಳುವ ಈ ಹೂವು ಸೂರ್ಯನ ಬೆಳಕಿನಲ್ಲಿ ಮೊಗ್ಗಾಗಿ ರಾತ್ರಿ ಚಂದ್ರ ಬರುವುದನ್ನು ಕಾದು ಸರಿ ಸುಮಾರು 11 ಗಂಟೆಗೆ ಅರಳಿ ಬೆಳಗಾಗುವ ಮುಂಚೆಯೇ ಕಮರುವ ಈ ಪುಪ್ಪವೇ ಬ್ರಹ್ಮ ಕಮಲ. [ಎರಡು ಡಜನ್ ಕೆಸರಿಲ್ಲದ ಕಮಲಗಳು ಅರಳಿದ ವೇಳೆ...]
ಕಳೆದ ಕೆಲವು ದಿನಗಳಿಂದ ಕೊಡಗಿನ ಹಲವೆಡೆ ಬ್ರಹ್ಮ ಕಮಲ ಹೂವಿನದೆ ದರ್ಬಾರು. ವರ್ಷಕೊಮ್ಮೆ ರಾತ್ರಿ ಸಮಯದಲ್ಲಿ ಮಾತ್ರ ಅರಳುವ ಹೂವುಗಳಲ್ಲಿ ಬ್ರಹ್ಮ ಕಮಲವೂ ಒಂದಾಗಿದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಬಿಳಿ ಕಮಲವೆಂದೂ, ವೈಜ್ಞಾನಿಕವಾಗಿ ಇದನ್ನು ಸೋಸೂರಿಯಾಅಬ್ವಲ್ಲಾಟ ಎಂದೂ ಕರೆಯಲ್ಪಡುತ್ತದೆ.
ಉತ್ತರಖಾಂಡ ಮತ್ತು ಹಿಮಾಲಯಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಹೂವು ಅತೀ ಎತ್ತರದಲ್ಲಿ ಬೆಳೆಯುವ ಹೂವೆಂದು ಹೇಳುತ್ತಾರೆ. ಸೃಷ್ಟಿಕರ್ತ ಬ್ರಹ್ಮನ ಕೈಯಲ್ಲಿ ಈ ಹೂ ಇರುವುದರಿಂದಲೋ ಏನೊ ಇದನ್ನು ಬ್ರಹ್ಮ ಕಮಲವೆಂದು ಕರೆಯುತ್ತಾರೆ. [ಪುಷ್ಪಲೋಕದ ವಿಸ್ಮಯ 'ಬ್ರಹ್ಮಕಮಲ']
ಪೌರಾಣಿಕ ಹಿನ್ನೆಲೆ : ಪುರಾಣದ ಪ್ರಕಾರ, ಗಣೇಶನ ತಲೆಯನ್ನು ಕತ್ತರಿಸಿದ ನಂತರ ಶಿವನು ಆನೆಯ ತಲೆಯನ್ನು ಜೋಡಿಸಿ ಈ ಹೂವಿನ ನೀರನ್ನು ಪ್ರೋಕ್ಷಿಸಿ ಬದುಕಿಸಿದರೆಂದೂ ಪ್ರತೀತಿಯಿದೆ. ಅಷ್ಟೇ ಅಲ್ಲ ಪಾಂಡವರು ತಮ್ಮ ವನವಾಸ ಕಾಲದಲ್ಲಿ ದ್ರೌಪದಿ ಈ ಹೂವನ್ನು ತಂದು ಕೊಡುವಂತೆ ತನ್ನ ಪತಿಯಾದ ಭೀಮನಿಗೆ ಹೇಳಿದ್ದಾಗಿ ಹಿನ್ನೆಲೆಯಿದೆ.
ಬ್ರಹ್ಮ ಕಮಲ ಹೂ ಅರಳುವುದನ್ನು ಕಾದು ತಮ್ಮ ಮನಸ್ಸಿನ ಇಂಗಿತವನ್ನು ಬೇಡಿಕೊಂಡರೆ ಅವರ ಆಸೆ ಈಡೇರುತ್ತದೆ ಎಂಬ ನಂಬಿಕೆಯೂ ಇದೆ. ಇಷ್ಟೇ ಅಲ್ಲ ಈ ಹೂವು ಅರಳುವ ಮನೆಯವರು ಸಂಪತ್ಭರಿತರಾಗುತ್ತಾರೆ ಎಂಬ ಪ್ರತೀತಿ ಕೂಡ ಇದೆ. ಇನ್ನೂ ಕೆಲವರು ಅರಳಿದ ಈ ಪುಷ್ಪಕ್ಕೆ ಪೂಜೆಸಲ್ಲಿಸಿ ವರದಾಶಂಕರ ವ್ರತವನ್ನೂ ಆಚರಿಸುತ್ತಾರೆ. ಇದೇನೆ ಇರಲಿ ಇಷ್ಟು ದೊಡ್ಡ ಗಾತ್ರದ ಹೂವೊದು ಅರಳಿ ನಿಂತಿರುವುದನ್ನು ರಾತ್ರಿ ವೇಳೆ ಕಣ್ತುಂಬಿಕೊಳ್ಳುವ ಸಂತಸವೇ ಬೇರೆ.