ಮೈಸೂರಲ್ಲಿ ಕನಕದಾಸರು ಅಂದು ಮಾಡಿದ ಪವಾಡ ಏನು?
ಕನಕದಾಸರಿಗೆ ಕೃಷ್ಣ ಗೋಡೆಯೊಡೆದು ದರ್ಶನ ನೀಡಿದ ಉಡುಪಿ ಕೃಷ್ಣ ದೇಗುಲದ ಕನಕ ಕಿಂಡಿಯ ಕಥೆ ಜನಜನಿತ. ಇಂತಹ ಕನಕದಾಸರಿಗೆ ಮೈಸೂರು ಜಿಲ್ಲೆಯಲ್ಲೊಂದು ದೇಗುಲವಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ. ಹಾಗೆ ನೋಡಿದರೆ ಕನಕದಾಸರಿಗೆ ಈ ದೇಗುಲವನ್ನು ಕುರುಬ ಸಮಾಜದವರು ನಿರ್ಮಿಸಿದ್ದಲ್ಲ. ಈ ದೇಗುಲವನ್ನು ನಿರ್ಮಿಸಿದ್ದು ಗಂಗಮತಸ್ಥರು ಎನ್ನುವುದು ಈ ದೇಗುಲದ ಮತ್ತೊಂದು ವಿಶೇಷತೆ.
ದಾಸರ ಪೈಕಿ ಒಬ್ಬರದಾದ ಕನಕದಾಸರು ಎಲ್ಲೆಡೆ ಸಂಚಾರ ಮಾಡುತ್ತಾ ಸಮಾಜದ ಅಂಕುಡೊಂಕನ್ನು ತಿದ್ದುವ ಮೂಲಕ ಸಮಾಜಕ್ಕೆ ಶ್ರೇಷ್ಠ ಸಂದೇಶ ನೀಡಿದ್ದಾರೆ. ಇಂತಹ ಮಹಾಪುರುಷ ಮೈಸೂರಿನಿಂದ ಸುಮಾರು 18 ಕಿ.ಮೀ. ದೂರದಲ್ಲಿರುವ ಮಹದೇವಪುರಕ್ಕೆ ಬಂದಿದ್ದರಂತೆ. ಅಷ್ಟೇ ಅಲ್ಲ ಅವತ್ತು ಅಲ್ಲೊಂದು ಪವಾಡ ನಡೆಯಿತಂತೆ. ಆ ಕಥೆ ಇವತ್ತಿಗೂ ಇಲ್ಲಿನ ಜನರ ಬಾಯಲ್ಲಿ ಕೇಳಿ ಬರುತ್ತದೆ. ಅಂದು ನಡೆದಿತ್ತು ಎನ್ನಲಾದ ಘಟನೆ ಇಂದು ದೇಗುಲ ನಿರ್ಮಾಣಕ್ಕೆ ಕಾರಣವಾಗಿದೆ ಎನ್ನಬಹುದು.[Exclusive : ಮೊಬೈಲಿನಲ್ಲೇ ಓದಿ ದಾಸ ವರೇಣ್ಯರ ಸಾಹಿತ್ಯ]
ಕನಕ ದೇಗುಲ ನಿರ್ಮಾಣಗೊಂಡಿರುವ ಮಹದೇವಪುರ ನಿಸರ್ಗ ಸಿರಿಯ ಸುಂದರ ತಾಣ. ಈ ಊರನ್ನು 'ಶೂಟಿಂಗ್ ಸ್ಪಾಟ್' ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿ ನೂರಾರು ಸಿನಿಮಾಗಳ ಚಿತ್ರೀಕರಣವಾಗಿದೆ, ಚಿತ್ರೀಕರಣವಾಗುತ್ತಲೇ ಇರುತ್ತದೆ. ಇಂತಹ ಸ್ಥಳದಲ್ಲಿರುವ ಪುಟ್ಟ ಕನಕ ದೇಗುಲ ಜನರ ನಂಬಿಕೆಗೆ ಸಾಕ್ಷಿಯಾಗಿದೆ. ಕಾಗಿನೆಲೆ ಹೊರತುಪಡಿಸಿದರೆ ನಿತ್ಯವೂ ಪೂಜೆಯಾಗುವ ಕನಕದಾಸ ಪುಟ್ಟ ದೇವಾಲಯವಿದು.
ಇನ್ನೊಂದು ಅಚ್ಚರಿಯ ಅಂಶ ಎಂದರೆ ಕನಕದಾಸರನ್ನು ಇಲ್ಲಿ ಪೂಜೆ ಮಾಡುವುದು ಗಂಗಮತಸ್ಥರು. ಅಂದರೆ ನಾಯಕ ಸಮುದಾಯದವರು. ಇಲ್ಲಿ ಯಾವ ಕುರುಬ ಸಮುದಾಯದವರೂ ಇಲ್ಲ. ಆದರೂ ಇಲ್ಲಿ ಅವರೇ ಆರಾಧ್ಯದೈವ. ಇದರ ಹಿಂದೆ ರೋಚಕ ಕಥೆಗಳಿವೆ. ಉಡುಪಿಯಲ್ಲಿ ಶ್ರೀಕೃಷ್ಣನ ದೇವಾಲಯದಲ್ಲಿರುವ ಕನಕನ ಕಿಂಡಿಯಂತೆಯೇ ಇಲ್ಲಿ ಕನಕ ಬಂಡೆಯಿದೆ.
ಗಂಗಮತಸ್ಥರ ನಂಬಿಕೆ ಏನು?
ಬಹುಶಃ ಉಡುಪಿಯ ಶ್ರೀ ಕೃಷ್ಣ ಪರಮಾತ್ಮನ ದರ್ಶನದ ನಂತರ ಕನಕದಾಸರು ದೇಶ ಪರ್ಯಟನೆ ಹೊರಟು ತಮ್ಮ ಗುರುಗಳಾದ ವ್ಯಾಸರಾಜರ ಮೂಲಸ್ಥಳ ಸೋಸಲೆಗೆ ಹೊರಟಾಗ ಮಾರ್ಗ ಮಧ್ಯದಲ್ಲಿ ಶ್ರೀರಂಗಪಟ್ಟಣದ ಶ್ರೀ ರಂಗನಾಥನ ದರ್ಶನ ಮಾಡಲು ಮಹದೇವಪುರದ ಕಾವೇರಿ ನದಿ ದಾಟಲು ಕನಕದಾಸರು ಇಲ್ಲಿ ಬಂದ್ದಿದ್ದರು ಎಂದು ನಂಬುತ್ತಾರೆ ಇಲ್ಲಿನ ಗಂಗಮತಸ್ಥರು.[ಬಾಗಿಲನು ತೆರೆದು ಸೇವೆಯನು ಕೊಡೊ]
ಜನವಲಯದಲ್ಲಿರುವ ಕಥೆ ಏನು? ಕನಕ ಬಂಡೆ ಎಂದು ಯಾಕೆ ಕರೆಯುತ್ತಾರೆ?
ಜನವಲಯದಲ್ಲಿರುವ ಕಥೆಯ ಪ್ರಕಾರ ಕೊಳಕಾಗಿದ್ದ ನಡೆದು ಗಾಯಗೊಂಡಿದ್ದ ಕನಕದಾಸರು ಇಲ್ಲಿ ನದಿ ದಾಟಲು ತೆಪ್ಪ ನಡೆಸುವವರ ಸಹಕಾರ ಕೇಳುತ್ತಾರೆ. ಆದರೆ ಆಗ ಹರಿಗೋಲು ಹುಟ್ಟುಹಾಕುತ್ತಿದ್ದ ಗಂಗಮತಸ್ಥರು ದಾಸರನ್ನು ಕರೆದುಕೊಳ್ಳಲು ಮುಂದಾಗುತ್ತಾರೆ. ಆಗ ಹರಿಗೋಲಿನಲ್ಲಿದ್ದ ಕೆಲವು ಬ್ರಾಹ್ಮಣರು ಈ ಶೂದ್ರನನ್ನು ಹತ್ತಿಸಿಕೊಳ್ಳಬೇಡ ಎಂದು ಅವಮಾನ ಮಾಡುತ್ತಾರೆ. ಕೊನೆಗೆ ವಿಧಿಯಿಲ್ಲದೇ ಗಂಗಮತಸ್ಥರು ಕನಕದಾಸರನ್ನು ಬಿಟ್ಟು ಹುಟ್ಟುಹಾಕುತ್ತಾರೆ.
ಆಗ ಕನಕದಾಸರು ಅಲ್ಲಿಯೇ ಒಂದು ಪವಾಡ ತೋರುತ್ತಾರೆ. ಪಕ್ಕದಲ್ಲೇ ಇರುವ ತೋಟದವರಿಂದ ಬಾಳೆ ಎಲೆ ಕೇಳುತ್ತಾರೆ. ಆದರೆ ಅಲ್ಲಿದ್ದವರು ಕೊಡಲು ನಿರಾಕರಿಸುತ್ತಾರೆ. ಆದರೆ ಪುಣ್ಯಾತ್ಮನೊಬ್ಬ ಅದೇನು ಮಾಡುತ್ತಾರೆ ನೋಡೋಣ ಎಂಬ ಕುತೂಹಲದಿಂದ ಬಾಳೆಲೆ ಕೊಡುತ್ತಾರೆ. ಅದೇ ಎಲೆಯನ್ನೇ ದೋಣಿಯಂತೆ ಬಳಸಿ ಕನಕದಾಸರು ಹರಿಗೋಲಿನಲ್ಲಿ ಹೋಗುತ್ತಿದ್ದವರನ್ನು ದಾಟಿ ಒಂದು ಬಂಡೆ ಮೇಲೆ ಹತ್ತಿ ಮಂಡಿಯೂರಿ ಕುಳಿತುಕೊಳ್ಳುತ್ತಾರೆ.
ಕನಕದಾಸರು ಇದಾದ ಬಳಿಕ ತಮ್ಮ ಹೊಟ್ಟೆಯನ್ನು ಬಗೆದು ಕರುಳನ್ನು ಹೊರತೆಗೆದು ನೀರಿನಲ್ಲಿ ತೊಳೆದು ಸ್ವಚ್ಚ ಮಾಡಿ ಮತ್ತೆ ತಮ್ಮ ಹೊಟ್ಟೆಯಲ್ಲಿ ಹಾಕಿಕೊಂಡು ಬ್ರಾಹ್ಮಣರನ್ನು ನಾನು ಈಗ ಪರಿಶುದ್ಧನೇ ಎಂದು ಕೇಳುತ್ತಾರೆ.
ಈ ಪವಾಡದಿಂದ ಬೆಚ್ಚಿಬಿದ್ದ ಜನವಲಯ ಕ್ಷಮೆಯಾಚಿಸಿದರೆ, ಅಲ್ಲಿದ್ದ ಗಂಗಮತಸ್ಥರು ಅಂದಿನಿಂದಲೂ ಕನಕದಾಸರನ್ನೇ ಪೂಜಿಸುತ್ತಾ ಬಂದಿದ್ದಾರೆ. ಕನಕದಾಸರು ಕುಳಿತ್ತಿದ್ದ ಬಂಡೆಗೆ ಕನಕ ಬಂಡೆಯೆಂದೇ ಹೆಸರು. ಆ ಬಂಡೆಯ ಮೇಲೆ ಕನಕದಾಸರ ಮಂಡಿಯೂರಿದ್ದ ಗುರುತು ಇದೆ ಎಂದು ಊರಿನ ಜನ ತೋರಿಸುತ್ತಾರೆ.[ಕನಕನ ದರ್ಶನಕ್ಕೆ ದಟ್ಸ್ ಕನ್ನಡ ಬೆಳಕಿಂಡಿ]
ಕನಕ ದೇವಾಲಯವನ್ನು ಯಾವಾಗ ನಿರ್ಮಿಸಲಾಯಿತು?
ಕನಕ ದೇವಾಲಯವನ್ನು ಮಹದೇವಪುರದಲ್ಲಿ ನಂಜುಂಡಯ್ಯ ಎಂಬುವರ ಕಾಲದಲ್ಲಿ ಅಂದರೆ 2003 ರಲ್ಲಿ ಕನಕ ದೇವಾಲಯವನ್ನು ಕೊಡಗನಹಳ್ಳಿ ರಾಮೇಗೌಡ ಮತ್ತು ಜೆ.ಸಿ.ದರ್ಶನ್ ಅವರ ನೇತೃತ್ವದಲ್ಲಿ ನಿರ್ಮಿಸಲಾಯಿತು.
ಅಲ್ಲಿ ತನಕ ಕೇವಲ ಬಂಡೆಗೆ ಮಾತ್ರ ಪೂಜೆ ಸಲ್ಲುತ್ತಿದ್ದು, ಬಳಿಕ ಕನಕ ಮೂರ್ತಿಯನ್ನು ಪೂಜಿಸಲಾರಂಭಿಸಿದರು. ಅಂದಿನಿಂದ ಇಂದಿಗೂ ಗಂಗಮತಸ್ಥರೇ ಇಲ್ಲಿ ಕನಕದಾಸರ ಆರಾಧನೆ ಮಾಡುತ್ತಾರೆ. ಈಗ ದಾಸಯ್ಯ ಎಂಬುವರನ್ನು ನೇಮಿಸಿಕೊಂಡು ನಿರಂತರವಾಗಿ ಪೂಜೆ ಅರ್ಚನೆ ಮಾಡಿಕೊಂಡು ಬರಲಾಗುತ್ತಿದೆ.
ಮಹದೇವಪುರ ಗ್ರಾಮದ ನಿವಾಸಿ ಹೇಳುವುದೇನು?
ಮಹದೇವಪುರ ಗ್ರಾಮದ ನಿವಾಸಿ ಬೋರಯ್ಯ ಎಂಬುವರು ಹೇಳುವ ಪ್ರಕಾರ, 'ಈ ಗ್ರಾಮದಲ್ಲಿ ಬಾಳೆ ಎಲೆ ಕೊಡಲು ನಿರಾಕರಿಸಿದ್ದು ಖಜಾನಿಗೌಡರ ವಂಶಸ್ಥರು. ಅಚ್ಚರಿಯ ಅಂಶ ಎಂದರೆ ಈಗಲೂ ಇವರ ತೋಟದಲ್ಲಿ ಬಾಳೆ ಗಿಡ ನೆಟ್ಟರೂ ಬಾಳೆಕಾಯಿಯೇ ಬಿಡುವುದಿಲ್ಲ.
ಆದರೆ ಬಾಳೆಎಲೆ ಕೊಟ್ಟ ವಂಶಸ್ಥರ ತಮ್ಮೇಗೌಡರ ತೋಟದಲ್ಲಿ ಈಗಲೂ ರಸಭರಿತ ಹಣ್ಣುಗಳು ಬಿಡುತ್ತವೆ ಮತ್ತು ಇಲ್ಲಿ ಯಾವುದೇ ಬ್ರಾಹ್ಮಣರು ನೆಲೆಸಿದರೂ ಅವರಿಗೆ ವಂಶವೇ ಬೆಳೆಯುವುದಿಲ್ಲ. ಅದಕ್ಕೆ ಕನಕದಾಸರ ಶಾಪ ಎನ್ನುತ್ತಾರೆ.[ಕನಕ ಭಕ್ತರಿಗಾಗಿ ತೆರೆದಿದೆ 'ಕನಕ ಕಿಂಡಿ' ವೆಬ್ಬಾಗಿಲು]
ಗ್ರಾಮದಲ್ಲಿರುವ 24 ಗಂಗಮತಸ್ಥರು ಕನಕ ಹಬ್ಬ ಮಾಡುತ್ತಾರೆ, ಕನಕ ಬಂಡೆಯನ್ನೇ ಪೂಜೆ ಮಾಡುತ್ತಾರೆ. ಕಾವೇರಿ ನದಿ ನೀರು ಕಡಿಮೆಯಾದಾಗ ಪೂಜೆ ಮಾಡುತ್ತಾರೆ. ಕೆಲವೇ ದಿನಗಳಲ್ಲಿ ಕಾವೇರಿ ನದಿ ನೀರು ತುಂಬುತ್ತೆ' ಎಂಬುದು ಬೋರಯ್ಯ ಅವರ ನಂಬಿಕೆ.