'ಜಂಗಲ್ ಡೈರಿ'-ಇದು ಗಗನ್ ನ ಕನಸಿಗೆ ದಾರಿ
ಈ ಹುಡುಗನ ಹೆಸರು ಗಗನ್ ಪ್ರೀತ್. ಇಪ್ಪತ್ತೆರಡು-ಇಪ್ಪತ್ಮೂರು ವರ್ಷ ಇರಬಹುದು. ಈ ವರ್ಷವಷ್ಟೇ ಎಂಜಿನಿಯರಿಂಗ್ ಮುಗಿಸಿದ್ದಾರೆ. ಕಾಡಿನ ಬಗ್ಗೆ-ವನ್ಯಜೀವಿಗಳ ಬಗ್ಗೆ ಈತನಿಗಿರುವ ಪ್ರೀತಿ ಅನನ್ಯ. ಬೇರೇನೇ ವಿಷಯ ಎತ್ತಿದರೂ ಪ್ರಾಣಿಗಳು-ಕಾಡಿನ ಬಗ್ಗೆಯೇ ಮಾತನಾಡುವ ಉತ್ಸಾಹ ಅದ್ಭುತ.
"ಮನೆಯಲ್ಲಿ ಮಕ್ಕಳು ಕಾರ್ಟೂನ್ ನೆಟ್ ವರ್ಕ್ ಗೆ ಅಂಟಿಕೊಂಡಿರ್ತಾರೆ. ನಾನು ಚಿಕ್ಕ ವಯಸ್ಸಿನಿಂದಲೂ ಡಿಸ್ಕವರಿ ಚಾನಲ್ ಗೆ ಜೋತುಬಿದ್ದೆ. ನನ್ನ ತಮ್ಮನಿಗೂ ಅದೇ ಹುಚ್ಚು. ಒಂದು ಸಲ ಕಾಡು ನೋಡುವ ಅವಕಾಶ ಸಿಕ್ಕ ಮೇಲೆ ಮನೆಗೆ ನೆಪಕ್ಕೆ ಬರ್ತೀನೇನೋ ಅನಿಸ್ತಿದೆ. ಬಂಡೀಪುರ ಕಾಡಿನ ಬಗ್ಗೆ ನಮ್ಮ ಜನರಿಗೆ ಇನ್ನೂ ಚೆನ್ನಾಗಿ ಗೊತ್ತಾಗಬೇಕು. ಅಲ್ಲಿ ಎಂಥ ಪ್ರಾಣಿಗಳಿವೆ ಗೊತ್ತಾ?" ಎಂದು ಹುಬ್ಬೇರಿಸುತ್ತಾರೆ ಗಗನ್.[ಬಂಡೀಪುರದಲ್ಲಿ 'ಪ್ರಿನ್ಸ್' ಹುಲಿ ಕಂಡಾಗ ಕುಪ್ಪಳಿಸಿದ ಮನ]
ಅವರಿಗೆ ತಮ್ಮ ಅನುಭವಗಳನ್ನು, ತೆಗೆದ ಫೋಟೋಗಳನ್ನು ಎಲ್ಲರ ಜತೆಗೆ ಹಂಚಿಕೊಳ್ಳುವ ಬಯಕೆ. ಕಾಡಿನ ಕಥೆಗಳನ್ನು ಹೇಳಿ, ವನ್ಯಜೀವಿಗಳ ಬಗ್ಗೆ ಪ್ರೀತಿ ಪಸರಿಸುವ ಕಾತರ. 'ಜಂಗಲ್ ಡೈರಿ'-ಇದು ಗಗನ್ ನ ಕನಸಿಗೆ ದಾರಿ. ತಮ್ಮಂತೆಯೇ ಕಾಡಿಗೆ ಓಡಬೇಕು ಎನ್ನುವ ಮಂದಿಗೆ ಸಹಾಯ, ಸಹಕಾರ, ಮಾರ್ಗದರ್ಶನ ಮಾಡ್ತಾರೆ. ಚಿಕ್ಕ ಹುಡುಗ ಅಂತ ತೆಗೆದು ಹಾಕೋ ಆಸಾಮಿಯಲ್ಲ ಈತ.
ಗಗನ್ ಫೇಸ್ ಬುಕ್ ಪೇಜ್ https://www.facebook.com/gagan.preeth619?pnref=story.unseen-section ಮೊಬೈಲ್ ಫೋನ್ ನಂಬರ್ 9036862030.
ತಾನು ತೆಗೆದ ಪ್ರಾಣಿ-ಪಕ್ಷಿಗಳ ಕೆಲವು ಫೋಟೋಗಳನ್ನು ಒನ್ ಇಂಡಿಯಾ ಓದುಗರು ನೋಡಲಿ ಎಂಬುದು ಅವರ ಆಸೆ. ಕೆಲವು ಫೋಟೋಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.
ಸಂಕೋಚ, ಸಾವು ಅಕ್ಕ-ಪಕ್ಕ
ಬಂಡೀಪುರದ ರಾಷ್ಟ್ರೀಯ ಉದ್ಯಾನದಲ್ಲಿ ಬೆಳಗ್ಗೆ ಎಂಟರ ಸುಮಾರಿಗೆ ತೆಗೆದ ಫೋಟೋ ಇದು. ಆಗಷ್ಟೇ ಮಳೆ ಬಂದು ನಿಂತಿತ್ತು. ಪ್ರಾಣಿಗಳ ಚಟುವಟಿಕೆ ಕಡಿಮೆ ಅನ್ನೋ ಮಾಹಿತಿ ಸಿಕ್ಕಿದರೂ ಹೊರೆಟವು. ಯಾವುದೋ ಪ್ರಾಣಿ ಹೋಯ್ತಲ್ಲ ಎಂದು ಗಾಡಿ ನಿಲ್ಲಿಸಿದೆವು. ಬಳ್ಳಿಗಳ ಮಧ್ಯದಿಂದ ಛಂಗನೇ ಕರಡಿ ಎದ್ದು ನಿಲ್ಲಿತು. ಹಾಗೇ ಹೊರಟೂ ಹೋಯಿತು. ಕರಡಿ ಎಷ್ಟು ನಾಚಿಕೆ ಪ್ರಾಣಿಯೋ ಅಷ್ಟೇ ಅಪಾಯಕಾರಿ
Camera settings: Canon EOS 6D | ISO 400 | 1/500 sec.| f/5.6 @ 300mm
ಫೋಟೋ-ಮಾಹಿತಿ: ಗಗನ್ ಪ್ರೀತ್
ಕೋಣವನ್ನು ಕೊಂದು ತಿಂದು
ಚಿರತೆಯೊಂದು ಹಿಂದಿನ ದಿನ ಬಂಡೀಪುರ ಸೇತುವೆ ರಸ್ತೆಯಲ್ಲಿ ಮರಿ ಕೋಣವನ್ನು ಕೊಂದಿತ್ತು. ನಾವು ಅದಕ್ಕೂ ಮುಂಚೆ ನಾಲ್ಕು ದಿನ ಕಾಡಿನಲ್ಲಿ ಇದ್ದರೂ ಯಾವ ಪ್ರಾಣಿಯೂ ಕಂಡಿರಲಿಲ್ಲ. ಆದರೆ ಕೋಣವನ್ನು ಕೊಂದ ಮಾರನೇ ದಿನ ನಮಗೆ ಸಿಕ್ಕ ಚಿತ್ರಗಳಿವು. ಇದಕ್ಕೆ ವಿವರಣೆ ಬೇಕಾ?
Camera settings: Canon EOS 600D | ISO 6400 | Shutter 1/80 sec. | f/6.3 @ 165mm
ಸಫಾರಿ ಅಂದರೆ ಲಾಟರಿ
ಸಫಾರಿ ಅಂದರೆ ಲಾಟರಿ ಟಿಕೆಟ್ ತಗೊಂಡ ಹಾಗೇನೆ. ಕೆಲವು ಸಲ ಜಾಕ್ ಪಾಟ್, ಮತ್ತೆ ಕೆಲವು ಸಲ ಏನೂ ಇಲ್ಲ. ಕಾಡೆಂದರೆ ರಹಸ್ಯ್, ವಿಸ್ಮಯ. ಯಾವ ಸಮಯದಲ್ಲಿ ಏನಾದರೂ ಎದುರಾಗಬಹುದು. ಒಮ್ಮೆ ಸಫಾರಿಯಿಂದ ಹಿಂತಿರುಗುವಾಗ ರಸ್ತೆ ಬದಿ ಆಟವಾಡುತ್ತಿದ್ದ ಕಾಡುನಾಯಿಗಳು ಕ್ಯಾಮೆರಾಗೆ ಸಿಕ್ಕಿದ್ದು ಹೀಗೆ
Camera settings: Canon EOS 6D | ISO 800 | Shutter 1/4000 sec.| f/4 @ 300mm
ಕ್ರೆಸ್ಟೆಡ್ ಹಾಕ್ ಈಗಲ್
ಬಂಡೀಪುರದಲ್ಲಿ ಸಂಜೆ ಸಫಾರಿ ಹೊರಟ್ವಿ. ತಾವರೆಕಟ್ಟೆ ಹತ್ತಿರ ಕಾಣಿಸಿದ್ದು. ಗಾಡಿಯನ್ನು ನಿಲ್ಲಿಸಿದಾಗ ಮರದ ಮೇಲೆ ಕೂತಿದ್ದು ಹಿಂತಿರುಗಿ ನೋಡಿದಾಗ ಸಿಕ್ಕ ಚಿತ್ರ.
ಸೂಕ್ಷ್ಮ ಸ್ವಭಾವ
ತುಂಬ ಸೂಕ್ಷ್ಮ ಸ್ವಭಾವದ ಆನೆಗಳು ಇಪ್ಪತ್ತು ಸಾವಿರ ಬಗೆಯ ಶಬ್ದ ಮಾಡುತ್ತವೆ. ಬೆಟ್ಟಗಳನ್ನು ತುಂಬ ಚೆನ್ನಾಗಿ ಹತ್ತುತ್ತವೆ. ಗುಂಪಾಗಿರುವಾಗ ಸಿಕ್ಕ ಹೆಣ್ಣಾನೆಗಳ ಚಿತ್ರ.
ತಣ್ಣಗಿನ ರಕ್ತದ ಜೀವಿ
ಆಗ ತಾನೇ ಮಳೆ ಬಂದು ನಿಂತಾಗ ಬಿಸಿಲು ಕಾಣಿಸಿಕೊಂಡಿತು. ಮೋಡ ಸರಿಯುತ್ತಿತ್ತು. ಬಿಸಿಲಿನ ಕಿರಣಕ್ಕಾಗಿ ತಲೆ ಎತ್ತು ನಿಂತ ಉಡ
ಪುರುಷ ಆಧಿಪತ್ಯ
ದೆಯ್ಯದಕಟ್ಟೆಯ ನೀರಿನ ಕೊಳದ ಹತ್ತಿರ ಚಿರತೆ ಹುಡುಕಿ ಹೊರಟಾಗ ಅಚಾನಕ್ಕಾಗಿ ಎದುರಾದ ಹುಲಿರಾಯ ಮರಕ್ಕೆ ತನ್ನ ಗುರುತು ಹಚ್ಚುತ್ತಿತ್ತು.
ನೇರಾನೇರ
ಬೇಟೆ ಹುಡುಕುತ್ತಾ ಹೊರಟಿದ್ದ ಹುಲಿಯು ಸಫಾರಿಗೆ ಹೊರಟಿದ್ದ ನಮ್ಮನ್ನು ನೋಡಿದಾಗ ಸೆರೆಸಿಕ್ಕ ಚಿತ್ರ.
ಮರದ ಮೇಲೆ ನಿದ್ದೆ
ಚಿರತೆ ವಿಶ್ರಾಂತಿ ಪಡೆಯೋದು ಮರಗಳ ಮೇಲೆ. ಚೆನ್ನಾಗಿ ಉಂಡಿದ್ದ ಮಲಗೆದ್ದು ಆಕಳಿಸಿದಾಗ ಕಂಡಿದ್ದು ಹೀಗೆ.
ಗಗನ್ ಬಗ್ಗೆ ಒಂದಿಷ್ಟು..
ಬೆಂಗಳೂರಿನಲ್ಲಿರುವ ಗಗನ್ ಪ್ರೀತ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದು ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ. 'ಜಂಗಲ್ ಡೈರಿ' ಆತ ಮಾಡಿಕೊಂಡಿರುವ ಸಾಹಸದ ಹೆಸರು. ಆಸಕ್ತರಿಗಾಗಿ ಕಾಡಿನ ಪ್ರವಾಸ, ಫೋಟೋಗ್ರಫಿಯ ಅನುಭವ ಪಡೆಯುವುದಕ್ಕೆ ನೆರವು ಮಾಡುತ್ತಾರೆ. ಪ್ರಾಣಿಗಳ ಸ್ವಭಾವದ ಅಧ್ಯಯನ, ಫೋಟೋಗ್ರಫಿ..ಹೀಗೆ ಹಲವು ಹವ್ಯಾಸಗಳಿರುವ ಈತನಿಗೆ ವನ್ಯಜೀವಿಗಳ ಬಗ್ಗೆ ಎಲ್ಲೆಡೆ ಪ್ರೀತಿ ಪಸರಿಸುವ ಉದ್ಡೇಶ ಇದೆ