ಜನಾರಣ್ಯದಲ್ಲಿ ಗೂಡು ಕಟ್ಟಲು ಗುಬ್ಬಚ್ಚಿಗೆ ಜಾಗವೆಲ್ಲಿ?
ಏಯ್... ನಿನ್ನೆಯ ದಿನ ಪತ್ರಿಕೆ ಎಲ್ಲಿಟ್ಯೋ? ಅದರಲ್ಲಿ ಕೃಷಿ ಸಾಲ ಮನ್ನಾದ ಸುದ್ದಿಯಿದೆ. ಆ ಫೋಟೋದ ಹಿಂದೆ ಇರಬೇಕು. ನನ್ನ ಕೈಗೆ ಸಿಗಲ್ಲ. ನೀನು ಎತ್ತರ ಇರೋದಕ್ಕೆ ನಿನಗೆ ಸ್ಟೂಲ್ ಬೇಡ ಬೇಗ ತೆಗಿಯೋ, ಎಂದು ಚಿಕ್ಕಪ್ಪ ಕೂಗಿಕೊಂಡಾಗ, ನಾನು ಹೌದೆಂದು ತಲೆ ಅಲ್ಲಾಡಿಸಿ ಫೋಟೋದ ಹಿಂದೆ ಕೈ ಹಾಕಿದೆ. ತಕ್ಷಣ ಅಲ್ಲಿಂದ ಬರುತ್ತಿದ್ದ ಶಬ್ದ ನನ್ನನ್ನು ಒಂದು ಕ್ಷಣ ಸ್ಥಬ್ಧವಾಗುವಂತೆ ಮಾಡಿತ್ತು.
ಹೌದು.. ಪೋಟೋದ ಹಿಂಬದಿಯಲ್ಲಿ ಗುಬ್ಬಿಗಳ ಸಂಸಾರವೊಂದು ಮನೆ ಮಾಡಿತ್ತು. ಮುದ್ದಾದ ಎರಡು ಗುಬ್ಬಿ ಮರಿಗಳು ಚೀವ್.. ಚಿವ್ ಎನ್ನುತ್ತ ರೆಕ್ಕೆ ಬಿಚ್ಚಿ ಹಾರಾಡಲು ಯತ್ನಿಸುತ್ತಿದ್ದವು,. ತಾಯಿ ಗುಬ್ಬಿ ಮಕ್ಕಳಿಗೆ ಗುಟುಕು ನೀಡಲು ಹೊರಗೆಲ್ಲೋ ಹೋಗಿತ್ತು.[ಗುಬ್ಬಚ್ಚಿಗಳ ಲೋಕದಲ್ಲಿ]
ಮಲೆನಾಡ ಮನೆಯ ಜಗುಲಿಯ ತೊಲೆಗಳ ಮೇಲೆ ಹಿರಿಯರ, ದೇವರ ಫೋಟೋ ಹಾಕುವುದು ಸಾಮಾನ್ಯ. ಇಲ್ಲಿ ಒಂದು ಸಂಗತಿ ಗಮನಿಸಬೇಕು ಇದು ತೂಗು ಹಾಕುವುದಲ್ಲ. ತೊಲೆಯ ಮೇಲೆ ನೆಲಕ್ಕೆ ಅಭಿಮುಖವಾದ ರೀತಿ ಅಂದರೆ ಸ್ವಲ್ಪ ಓರೆಯಾಗಿ ಫೋಟೋಗಳನ್ನು ಇಡಲಾಗುತ್ತದೆ. ಈ ಫೋಟೋದ ಹಿಂಬದಿಗೆ ಕೊಂಚ ಸ್ಥಳಾವಕಾಶವಿರುತ್ತದೆ. ಅಲ್ಲಿ ಗುಬ್ಬಿಗಳ ಸಂಸಾರ ಮನೆ ಮಾಡಿರುತ್ತದೆ. ಕೆಲವೊಮ್ಮೆ ಕೆರೆ ಹಾವುಗಳು ತಮ್ಮ ಆಹಾರ ಅರಸಿ ನುಗ್ಗಿದ ಉದಾಹರಣೆಗಳು ಇವೆ.
ದಿನ ಪತ್ರಿಕೆಯನ್ನೋ, ಪುಸ್ತಕವನ್ನೋ ಇಡುವ ಕಪಾಟಾಗಿ ಈ ಜಾಗ ಬಳಕೆಯಾಗಿತ್ತದೆ. ಕೆಲವೊಮ್ಮೆ ಬೇರೆಡೆ ವಿಫುಲ ಜಾಗ ಇರುವುದರಿಂದ ಇದು ಖಾಲಿ ಬಿದ್ದಿರುತ್ತದೆ. ಹಿಂದೆಲ್ಲ ಗುಬ್ಬಿಗಳು ಇಲ್ಲಿಯೇ ಸಂಸಾರ ಹೂಡಿರುತ್ತಿದ್ದವು. ಅರಣ್ಯ ನಾಶ, ಮೊಬೈಲ್ ಬಳಕೆಗೆ ಸಿಕ್ಕ ಸಂತತಿಯನ್ನು ಹುಡುಕಲು ಇದೀಗ ದಟ್ಟಾರಣ್ಯಕ್ಕೆ ಹೋದರೂ ಸಾಧ್ಯವಾಗದ ಸ್ಥಿತಿಯನ್ನು ನಾವೇ ತಂದುಕೊಂಡಿದ್ದೇವೆ.[ಗುಬ್ಬಚ್ಚಿಯೇ ಇಲ್ಲದ ಬೆಂಗಳೂರಿನಂತಾದರೆ ಬದುಕು: ರವಿ ಬೆಳಗೆರೆ]
ಮಲೆನಾಡಲ್ಲೂ ಗುಬ್ಬಿಗಳು ಸ್ವರವಿಲ್ಲ. ಇಲ್ಲಿಗೂ ಆರ್ ಸಿಸಿ ಮನೆಗಳು ಕಾಲಿಟ್ಟಿವೆ. ಹಳೆಯ ಸೋಗೆ ಮನೆ ಇರಲಿ ಹಂಚಿನ ಮನೆಗಳು ಕಣ್ಮರೆಯಾಗಿವೆ. ಗುಬ್ಬಿಗಳು ಮನೆಯೊಳಗೆ ಸ್ವಚ್ಛಂದವಾಗಿ ಗೂಡು ಕಟ್ಟುತ್ತಿದ್ದ ಕಾಲ ಇನ್ನು ಕನಸಷ್ಟೇ.
ನಗರವಾಸಿಗಳಿಗೆ ಗುಬ್ಬಿ ದರ್ಶನ ಬಲು ಅಪರೂಪ ಬಿಡಿ. ಬೆಂಗಳೂರಿನಲ್ಲಿ ಕಂಡು ಬರುವುದು ಬಿಳಿ ಕಾಗೆಯೇ ಹೊರತು, ಮುದ್ದಾದ ಗುಬ್ಬಿಯಲ್ಲ! ನಗರದ ಮಕ್ಕಳಿಗಂತೂ ಗುಬ್ಬಿಯ ಕತೆಯನ್ನು ಚಿತ್ರ ತೋರಿಸಿಯೇ ಹೇಳಬೇಕು. ಅಂತಿಂಥ ಚಿತ್ರ ತೆಗಿತೀನಿ ಅಂಥ ಉದ್ದುದ್ದ ಕ್ಯಾಮರಾ ಕುತ್ತಿಗೆಗೆ ನೇತು ಹಾಕಿಕೊಂಡು ಮಲೆನಾಡಿಗೆ ದಾಳಿಯಿಡುವ ಫೋಟೋಗ್ರಾಫರಿಗೇನು ಗೊತ್ತು ಗುಬ್ಬಿಯ ದಿನಚರಿ?
ಮಾರ್ಚ್ 20 ನ್ನು ವಿಶ್ವ ಗುಬ್ಬಿ ದಿನ ಎಂದು ಆಚರಣೆ ಮಾಡ್ತಾರಂತೆ. ಅದು ನಂಗೆ ಗೊತ್ತಾಗಿದ್ದೇ ಈಗ. ಒಂದು ದಿನ ಗುಬ್ಬಿ ದಿನಾಚರಣೆ ಎಂದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಎಲ್ಲೋ ಸಿಕ್ಕಿದ ಫೋಟೋ ಹಾಕಿ ಟ್ಯಾಗ್ ಲೈನ್ ವೊಂದನ್ನು ಬರೆದುಬಿಟ್ಟರೆ ಗುಬ್ಬಿ ಸಂತತಿ ಉಳಿದಂತೆಯೇ! ಯಪ್ಪಾ.. ಇದೆಲ್ಲಾ ಬಿಟ್ಟಾಕಿ ನಿಜವಾಗಿ ಗುಬ್ಬಿಗಳ ಸಂತತಿಗೆ ಪೆಟ್ಟು ನೀಡುತ್ತಿರುವ ಗಿಡುಗಗಳನ್ನು ಕೊಂದು ಹಾಕಬೇಕಿದೆ.
ಒಂದು ದಿನ ಮೊಬೈಲ್ ಇಲ್ಲದೇ, ವಿದ್ಯುತ್ ಇಲ್ಲದೇ ನಮ್ಮ ಬಳಿ ಇರಲಿಕ್ಕಾಗಲ್ಲ. ವ್ಯಾಟ್ಸಪ್ ನಲ್ಲೇ ಪ್ರಪಂಚ ಸವೆಸುವ ನಮಗೆ ಗುಬ್ಬಿಯ ವೇದನೆ ಎಲ್ಲಿ ತಾನೆ ಅರ್ಥವಾದೀತು? ಮೊಬೈಲ್ ತರಂಗಗಳು, ವಿದ್ಯುತ್ ತಂತಿಗಳು, ಪ್ರತಿದಿನ ಕಡಿಮೆಯಾಗುತ್ತಿರುವ ಅರಣ್ಯ ಎಲ್ಲದಕ್ಕೂ ಉತ್ತರ ಹುಡುಕಿಕೊಳ್ಳಲು ನಮ್ಮ ಬಳಿ ಸಾಧ್ಯವಿದೆಯೇ? ನಮ್ಮನ್ನು ನಾವು ಮತ್ತೊಮ್ಮೆ ಪ್ರಶ್ನಿಸಿಕೊಳ್ಳಬೇಕಾಗುತ್ತದೆ.