ಮೂಕಜ್ಜಿ ನೆನಪಾದರೆ ಸಾಕು ಅದೇನೊ ಮರೆಯಲಾಗದ ಭಾವ
ಮೂಕಜ್ಜಿಯ ಮಡಿಲಲ್ಲಿ ಎಲ್ಲವು ಚಂದ ಮತ್ತು ಚಂದ. ಈ ಮೂಕಜ್ಜಿಯ ಪರಿಚಯ ಆಗಿದ್ದು ಕಾರಂತರ ಕಾದಂಬರಿಯ ಸಹವಾಸದಿಂದ. ಸಂಜೆಯೊ, ಬೆಳಿಗ್ಗೆಯೊ, ರಾತ್ರಿಯೊ ಓದುತ್ತಾ ಓದುತ್ತಾ ಸಮಯ ಕಳೆದದ್ದೆ ತಿಳಿಯಲಿಲ್ಲ. ಮತ್ತೆ ಮತ್ತೆ ಓದಿದರೂ ಬೇಸರವಾಗಲಿಲ್ಲ. ಮೂಕಜ್ಜಿಯ ಇಷ್ಟು ಹತ್ತಿರವಾಗುತ್ತಾಳೆ, ನಾ ಮೌನಿಯಾದರೂ ಆಕೆ ಪಟ ಪಟನೆ ಇಷ್ಟು ಸ್ಪಷ್ಟವಾಗಿ ಮಾತನಾಡುತ್ತಾಳೆ ಎಂದು ತಿಳಿದಿರಲಿಲ್ಲ. ಮೂಕಜ್ಜಿಯ ಮಾತುಗಳು ನಾನು ಕಣ್ಣು ಮುಚ್ಚಿ ಅದೇನೋ ಯೋಚಿಸುವಾಗಲು ನನಗೆ ಜೋರಾಗಿ ಕೇಳಿಸಿ ಎದೆಯ ಕದ ತಟ್ಟಿ ಒಮ್ಮೆಲೆ ಕಣ್ಣುತೆರೆಯುವಂತೆ ಮಾಡಿದ್ದವು.
ಮೂಕಜ್ಜಿ ನಿಜವಾಗಿಯೂ ಸಾವಿಲ್ಲದೆ ಸಾವಿರ ಕಾಲ ಬದುಕಿರುತ್ತಾಳೆ. ಅದೆಲ್ಲಿ ಎಂದರೆ ಡಾ.ಕೆ. ಶಿವರಾಮ ಕಾರಂತರ "ಮೂಕಜ್ಜಿಯ ಕನಸುಗಳು" ಕಾದಂಬರಿಯಲ್ಲಿ. ಓದಿದವರ, ಕೇಳಿದವರ ಮನಸಲ್ಲಿ. ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸುಗಳನ್ನು ತುಸು ತುಸುವಾಗಿ ಕಾಯಿಸಿ, ಕರಗಿಸುವ ಕೆಲಸವನ್ನು ಅತ್ಯಂತ ನಾಜೂಕಾಗಿ ಮಾಡಿ ಮುಗಿಸಿದ್ದಾಳೆ, ಮಾಡುತ್ತಿದ್ದಾಳೆ.
ಶಿವರಾಮ ಕಾರಂತರ ಭೇಟಿ ಮಾಡಿದ ಆ ನೆನಪು ನಿಮ್ಮೊಂದಿಗಿಷ್ಟು
ಕಾರಂತರೇ ಕಾದಂಬರಿಗೆ ಕಥಾನಾಯಕನಿಲ್ಲ, ನಾಯಕಿಯಿಲ್ಲ, ಮೂಕಜ್ಜಿಯು ಇಲ್ಲಿ ಕಥಾನಾಯಕಿಯಲ್ಲ ಎಂದು ಹೇಳಿದ್ದರು. ಬರುವ ಪ್ರತಿ ಪಾತ್ರಗಳು ಓದುಗರ ಮನಸಲ್ಲಿ ಅದ್ಭುತವಾಗಿ ಜೀವಂತವಾಗಿರುತ್ತವೆ. ಜೊತೆಗೆ ಪ್ರತಿ ಪ್ರತಿ ಪುಟವನ್ನು ತಿರುಗಿಸುವ ಹೊತ್ತಿಗೆ ಓದಿರದ ಪುಟಗಳು ಓದುವ ತವಕ ಹೆಚ್ಚಿಸುತ್ತವೆ. ಮೂಕಜ್ಜಿಯ ಮಾತುಗಳಂತೂ ಒಂದು ಕ್ಷಣ ತಲೆ ಕೆರೆದು ಯೋಚಿಸುವಂತೆ ಮಾಡುತ್ತವೆ.
ಕಾರಂತರು ಹೇಳಿರುವುದು ನೂರಕ್ಕೆ ನೂರು ಸತ್ಯ. ಪ್ರತಿಯೊಬ್ಬರ ಕಲ್ಪನೆ ಎಷ್ಟೆಷ್ಟು ಬೆಡಗಿನದೊ, ಭವ್ಯವೊ, ಅದರ ಮೇಲಿಂದ ಅವರು ಹೇಳಿದ್ದೆ ಸತ್ಯವೆನಿಸುವುದು. ಮನುಷ್ಯನೆ ಹೀಗೆ ಅಲ್ಲವೇ ಏನಾದರೂ ಹೊಸದೊ ಅಥವಾ ಅಪರೂಪದ ವಸ್ತುವನ್ನೆ ಆಗಲಿ, ಕಥೆಯನ್ನೆ ಆಗಲಿ ತನ್ನದೇ ರೀತಿಯಲ್ಲಿ ನೋಡುತ್ತಾನೆ. ಅವನಷ್ಟಕ್ಕೆ ಅವನೇ ಕಲ್ಪಿಸಿಕೊಂಡು ತನ್ನದೇ ಕಾಲ್ಪನಿಕ ಜಗತ್ತು ಕಟ್ಟುತ್ತಾನೆ. ತನ್ನ ಯೋಚನೆ ಕಲ್ಪನೆಗಳನ್ನೆಲ್ಲ ಅದಕ್ಕೆ ಒಂದೊಂದನ್ನೆ ಜೋಡಿಸುತ್ತಾ ಹೋಗುತ್ತಾನೆ. ಹಿರಿಯರು ಹೇಳಿದ ಪ್ರತಿ ಪದಕ್ಕೂ ಒಂದು ಪ್ರಶ್ನೆಯನ್ನಿಡುತ್ತಾ, ಕೂತೂಹಲ ಹೆಚ್ಚಿಸಿಕೊಳ್ಳುತ್ತಾನೆ. ಉತ್ತರ ಹುಡುಕುತ್ತಾನೆ.
'ಕಡಲ ತಡಿಯ ಭಾರ್ಗವ'ನ ಕಡಲನು ಮೀರಿಸಿದ ಬದುಕು
ಓದುತ್ತ ಓದುತ್ತಾ "ಮೂಕಜ್ಜಿಯ ಕನಸುಗಳು" ಮನಸಿಗೆ ಅದೇನೊ ಖುಷಿ ನೀಡಿತ್ತು. ಅವಳ ಮಡಿಲು ಮತ್ತು ಕಾರಂತರ ಪದಗಳ ರಾಶಿಯ ಹೊತ್ತ ಹಣ್ಣಿನ ಬುಟ್ಟಿಯು ಮನಸನ್ನು ತಣಿಸಿತ್ತು. ಇಲ್ಲಿಯೂ ಕೂಡ ಮೂಕಜ್ಜಿಯ ಪಾತ್ರ ಅಪರೂಪದ್ದು ಎಂದರೆ ಸಾಲದು. ಆಕೆಯ ಆ ಚುರುಕು ತನ್ನ ಯೋಚನೆ ಹೇಳತೀರದ್ದು. ಕಾರಂತರಂತೂ ಪ್ರತಿ ಪ್ರತಿ ಸಾಲಲ್ಲು ಸತ್ವವನ್ನಿಡುತ್ತ ಜೊತೆಯಲ್ಲಿ ಪ್ರತಿ ಪದವನ್ನು ಬದುಕಿಸಿದ್ದಾರೆ. ಮೂಕಜ್ಜಿ ನೆನಪಾದರೆ ಸಾಕು ಅದೇನೊ ಮರೆಯಲಾಗದ ಭಾವ. ಮೂಕಜ್ಜಿಯ ಪ್ರತಿ ಕಾಲ ಕಾಲಕ್ಕೂ ಒಳ್ಳೆಯ ರೀತಿಯಲ್ಲಿ ಬದುಕುತ್ತಲೆ ಹೋಗಬೇಕು. ಪ್ರತಿ ಪೀಳಿಗೆಗೂ ಆಕೆಯ ಮಡಿಲು ಹೆಚ್ಚು ಹೆಚ್ಚು ನೆಮ್ಮದಿ ನೀಡುತ್ತಿರಬೇಕು, ಕನ್ನಡದ ಕಂದಗಳನ್ನು ಮಡಿಲಿಗೆ ಕರೆದು ಜಾಗ ನೀಡಬೇಕು.