ಹೈದರಾಲಿ ಎಂಬ ನಿಷ್ಠ 'ಸೈನಿಕ', ಅವನ ಮಗ ಟಿಪ್ಪು 'ಸುಲ್ತಾನ'
Recommended Video
ಟಿಪ್ಪು ಜಯಂತಿ ಆಚರಣೆಗೆ ಪ್ರಬಲವಾದ ವಿರೋಧ ವ್ಯಕ್ತವಾಗುತ್ತಿರುವ ಸನ್ನಿವೇಶದಲ್ಲಿ ಹೀಗೊಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಸರಿಯೋ ತಪ್ಪೋ ಎಂಬುದು ಕೂಡ ನಾನು ಯೋಚಿಸಿಲ್ಲ. ಆದರೆ ಟಿಪ್ಪು ಇತಿಹಾಸವನ್ನು ಕಣ್ಣಳತೆಗೆ ಎಷ್ಟು ಸಿಗುತ್ತದೋ ಅಷ್ಟರ ಮಟ್ಟಿಗೆ ತಿಳಿದು, ಇಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ.
ಹೆಚ್ಚಿನ ಅಧ್ಯಯನ ಮಾಡಿದವರು, ಇತಿಹಾಸ ತಜ್ಞರು ಈ ಚರ್ಚೆಯನ್ನು ಇನ್ನಷ್ಟು ವಿಸ್ತರಿಸಿದರೆ ಅರಿವಿಗೊಂದಿಷ್ಟು ವಿಚಾರದ ಆಹಾರ ಸಿಕ್ಕಿತು ಎಂಬು ಹಿಗ್ಗು ನನ್ನದು. ಟಿಪ್ಪು 'ಸುಲ್ತಾನ' ಎಂಬುದನ್ನು ನೆನಪಿಸಿಕೊಂಡಂತೆಯೇ ಆತನ ತಂದೆ 'ಸೈನಿಕ'ನಾಗಿಯೇ ಉಳಿದ ಹೈದರಾಲಿಯನ್ನೂ ಒಮ್ಮೆ ನೆನೆಯದಿದ್ದರೆ ಅಪಚಾರವಾದೀತು.
ರಾಷ್ಟ್ರಪತಿಗಳಿಗೆ ರಾಜ್ಯ ಸರಕಾರ ಭಾಷಣ ಬರೆದುಕೊಡಲು ಸಾಧ್ಯವೇ: ಸಿದ್ದು
ಟಿಪ್ಪು ನಮ್ಮೆದುರಿನ 'ರೂಪ'ವಾದರೆ, ಅದನ್ನು ರೂಪಿಸಿದ ವ್ಯಕ್ತಿತ್ವ ಹೈದರಾಲಿಯದು. ಮೈಸೂರು ಅರಸರ ಬಗ್ಗೆ ಅಪಾರ ನಿಷ್ಠೆ ಹಾಗೂ ವಿಶ್ವಾಸ ಹೊಂದಿದ್ದ ಹೈದರಾಲಿಯಲ್ಲಿ ಮತ-ಧರ್ಮಗಳ ಉದ್ವೇಗ ಕಾಣುವುದಿಲ್ಲ. ತನ್ನ ಸಂತತಿಯನ್ನು ಅರಸೊತ್ತಿಗೆಯ ಮೇಲೆ ಹೇಗಾದರೂ ಕೂರಿಸಬೇಕು ಎಂಬ ಉದ್ವೇಗವೂ ಕಾಣುವುದಿಲ್ಲ.
ಎಂ.ಶಾಮ ರಾವ್ ಅವರು ಬರೆದಿರುವ 'ಮಹಿಸೂರು ಸಂಸ್ಥಾನದ ಚರಿತ್ರೆ' ಓದುತ್ತಾ ಹೋದಾಗ ಈ ವಿಚಾರಗಳು ಬರುತ್ತವೆ. ಇತಿಹಾಸಕಾರ ಯಾವ ಕನ್ನಡಕದೊಳಗಿಂದ ಘಟನೆಯನ್ನು ನೋಡುತ್ತಾನೋ ಆ 'ಬಣ್ಣ'ದಂತೆ ಪ್ರತಿಫಲನ ಕಾಣುತ್ತದೆ. ಆದರೆ ಶಾಮ ರಾವ್ ಅವರ ಈ ಪುಸ್ತಕದ ಬಗ್ಗೆ ಗುಮಾನಿ ಪಡುವಂಥದ್ದು ಏನೂ ಇಲ್ಲ ಎಂದು ಧೈರ್ಯವಾಗಿ ಹೇಳಬಹುದು.
ಮೈಸೂರು ಅರಸರಿಗೆ ವಿಧೇಯನಾಗಿರು
ಹೈದರಾಲಿ ತನ್ನ ಸಾವಿನ ಸಂದರ್ಭದಲ್ಲೂ ಸುಲ್ತಾನ ಟಿಪ್ಪುವಿಗೆ ಹೇಳುವುದೇನು ಗೊತ್ತೆ? 'ಮೈಸೂರು ಅರಸರಿಗೆ ವಿಧೇಯನಾಗಿರು, ಒಳ್ಳೆಯದಾಗುತ್ತೆ' ಅಂತ. ಅನಾರೋಗ್ಯದ ಕಾರಣಕ್ಕೆ ಹೈದರಾಲಿ ಸಾವನ್ನಪ್ಪದೆ ಇದ್ದರೆ ಇತಿಹಾಸ ಬೇರೇನೋ ಆಗಿರುತ್ತಿತ್ತು ಅನ್ನಿಸುವುದೇ ಆ ಕಾರಣಕ್ಕೆ. ಮೈಸೂರಿನ ಸಂಸ್ಥಾನದ ವಿಸ್ತರಣೆಯಲ್ಲಿ, ಆರ್ಥಿಕ ಜೀವಕಳೆಯಲ್ಲಿ ಹೈದರಾಲಿಯ ಪಾತ್ರವಿತ್ತು ಎಂಬುದು ಗಮನಕ್ಕೆ ಬರುತ್ತದೆ.
ಕಿತ್ತೂರು ಚೆನ್ನಮ್ಮನ ಹೋರಾಟದ ಹೋಲಿಕೆ
ಟಿಪ್ಪುವಿನದು ಸ್ವಾತಂತ್ರ್ಯದ ಛಾಯೆ ಪಡೆದ ಹೋರಾಟವಷ್ಟೇ. ಏಕೆಂದರೆ ನಮ್ಮ ಮುಂದೆ ಚೆನ್ನಮ್ಮನ ಹೋರಾಟವೂ ಇದೆ. ಒಂದು ಹೋಲಿಕೆ ಮಾಡೋಣ ಅಂದರೆ, ದತ್ತುಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನನ್ನು ಮೀರಿ ದತ್ತು ಪಡೆಯುತ್ತಾಳೆ. ತಾನು ಕಪ್ಪ ಕೊಡದೆ ಜೈಲಿಗೆ ಹೋಗುತ್ತಾಳೆ. ಅದನ್ನು ಸ್ವಾತಂತ್ರ್ಯ ಹೋರಾಟ ಅಲ್ಲ ಎಂದು ಹೇಳುವುದಕ್ಕೆ ಕಾರಣ ಇದೆಯಾ?
ಶೃಂಗೇರಿಗೆ ನಡೆದುಕೊಂಡದ್ದು ಗಮನದಲ್ಲಿರಬೇಕು
ಆದರೆ, ಟಿಪ್ಪು ಕಪ್ಪ ಕೊಡಲು ಒಪ್ಪುತ್ತಾನೆ. ಅದು ಪೂರ್ತಿಯಾಗಿ ಕೊಡಲಾಗದಿದ್ದಾಗ ತನ್ನ ಮಕ್ಕಳನ್ನು ಅಡಮಾನವಾಗಿ ಕಳಿಸಿಕೊಡುತ್ತಾನೆ. ಇನ್ನು ಟಿಪ್ಪು ಮತಾಂಧ ಎಂಬುದನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ, ಆತನು ಶೃಂಗೇರಿಗೆ ನಡೆದುಕೊಂಡದ್ದನ್ನು ಹಾಗೂ ಆಭರಣಗಳನ್ನು ನೀಡಿದ್ದನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು.
ದಂಗೆ ಧ್ವನಿ ಅಡಗಿಸುವುದು ಕಷ್ಟವೆ?
ಈ ನಡೆಯನ್ನು ಪ್ರಜೆಗಳಲ್ಲಿ ದಂಗೆ ಉಂಟಾಗಬಹುದು ಎಂಬ ಅಳುಕಿನಿಂದ ತೆಗೆದುಕೊಂಡದ್ದು ಎಂದು ವಿಶ್ಲೇಷಿಸುವವರಿದ್ದಾರೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಧ್ವನಿಗಳನ್ನು ಅಡಗಿಸುವ ಕೆಲಸ ತುಂಬ ಸಲೀಸಾಗಿ ಆಗುತ್ತಿರುವಾಗ ಇನ್ನು ಟಿಪ್ಪು ಸುಲ್ತಾನನ ರಾಜಾಡಳಿತದಲ್ಲಿ ಕಷ್ಟವಿತ್ತೆ? ಅಂಥ ದಂಗೆಯ ಹುಟ್ಟಡಗಿಸುವುದು ಎಂಥ ಸವಾಲಾಗಿರಲು ಸಾಧ್ಯ?
ನಾಡನ್ನು ಸಮಷ್ಟಿ ಪ್ರಜ್ಞೆಯಿಂದ ನೋಡಿದ ಹೈದರಾಲಿ
ಈ ಸಂದರ್ಭದಲ್ಲೇ ಇನ್ನೊಂದು ವಿಚಾರ ಪ್ರಸ್ತಾವ ಮಾಡಬೇಕು. ಈ ನಾಡನ್ನು ಸಮಷ್ಟಿ ದೃಷ್ಟಿಯಿಂದ ನೋಡಿದ, ಟಿಪ್ಪುನನ್ನು ರೂಪಿಸಿದ ಹೈದರಾಲಿಯನ್ನು ಸ್ಮರಿಸುವ ಕೆಲಸ ಆಗುವುದಾದರೆ ಆಗಲಿ. ಆ ಮೂಲಕ ಟಿಪ್ಪುವನ್ನೂ ಸ್ಮರಿಸದಂತಾಗುತ್ತದೆ. ಇತಿಹಾಸದಲ್ಲಿ ನಮಗೆ ಹೈದರಾಲಿಯ ವಿಶಾಲ ಮನೋಭಾವ ಅರ್ಥ ಆಗುತ್ತದೆ.
ಆಯಾ ಕಾಲಘಟ್ಟದ ಹಿನ್ನೆಲೆಯಲ್ಲೇ ನೋಡಬೇಕು
ಇನ್ನು ಅಧಿಕಾರ ಹಾಗೂ ರಾಜಕೀಯ ತಂತ್ರಗಾರಿಕೆಯಲ್ಲಿ ಏನೆಲ್ಲ ಸಂಭವಿಸುತ್ತದೆ ಎಂಬುದನ್ನು ಆ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಮತಾಂತರ ಮತ್ತೊಂದು ವಿಚಾರಗಳನ್ನು ಆಯಾ ಕಾಲಘಟ್ಟದ ಹಿನ್ನೆಲೆಯಲ್ಲಿ ನೋಡಬೇಕು. ಆದ್ದರಿಂದ ಧೈರ್ಯವಾಗಿ ಹೇಳಬಹುದಾದ್ದದ್ದು ಏನೆಂದರೆ, ಟಿಪ್ಪುವಿನ ಕೊಡುಗೆ ಅಗಣನೀಯ ಏನಲ್ಲ. ಹಾಗಂತ ಅಗೌರವಯುತವೂ ಅಲ್ಲ.
ಟಿಪ್ಪುವನ್ನು ಮಾತ್ರ ಅಪರಾಧಿ ಮಾಡಲು ಸಾಧ್ಯವಿಲ್ಲ
ಕೆಲವು ಅಪಸವ್ಯಗಳಾಗಿವೆ ಎಂಬುದನ್ನು ತೆಗೆದುಕೊಂಡರೂ ಹಾಗೆ ಇತಿಹಾಸದುದ್ದಕ್ಕೂ ಹಲವರ ನಡೆಗಳು ತಪ್ಪಾಗಿಯೇ ಕಾಣುತ್ತವೆ. ಟಿಪ್ಪುವನ್ನು ಮಾತ್ರ ಅಪರಾಧಿ ಮಾಡಲು ಸಾಧ್ಯವಿಲ್ಲ. ಇನ್ನು ಟಿಪ್ಪುವಿನ ಸಕಾರಾತ್ಮಕ ಗುಣ, ಸ್ವಭಾವ, ಮನೋಭಾವವನ್ನು ಹೈದರಾಲಿ ಮೂಲಕ ಗುರುತಿಸಬೇಕು. ಆಗ ಹೈದರಾಲಿ ಎತ್ತರಕ್ಕೆ ಬರುತ್ತಾನೆ.
ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಗೌರವ ಸಲ್ಲಲಿ
ಟಿಪ್ಪು ಜಯಂತಿ ಎಂಬುದನ್ನು ಮಾಡುವುದಕ್ಕೆ ಸರಕಾರ ಪಡುತ್ತಿರುವ ಪ್ರಯತ್ನ ಹಾಗೂ ನೀಡುತ್ತಿರುವ ಕಾರಣಗಳನ್ನು ಗಮನಿಸಿದರೆ ನಿಜಕ್ಕೂ ಅರ್ಹರಾದ, ನಿರ್ವಿವಾದವಾಗಿ ಒಪ್ಪಬಹುದಾದ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಗೌರವ, ನೆನಪಿನ ಸನ್ಮಾನ ಕೊಡುವುದು ಮುಖ್ಯ ಎನಿಸುತ್ತದೆ.
ಇತಿಹಾಸದ ವ್ಯಕ್ತಿಗೆ ವರ್ತಮಾನದಲ್ಲಿ ಅವಮಾನದ ಮಾಡುವುದು ಸರಿಯೆ?
ಯಾವುದೇ ವ್ಯಕ್ತಿ ಆತ ಸುಲ್ತಾನನೇ ಆಗಿರಲಿ ಅಥವಾ ಜನ ಸಾಮಾನ್ಯನೇ ಆಗಿರಲಿ, ಸರಿ-ತಪ್ಪುಗಳ ಚರ್ಚೆ ಆತನ ಸಮ್ಮುಖದಲ್ಲೇ ಆಗಬೇಕು ಮತ್ತು ಆರೋಪಗಳಿಗೆ ಉತ್ತರಿಸಲು ಅವಕಾಶ ಇರುವಂಥ ವಾತಾವರಣದಲ್ಲಿ ಆಗಬೇಕು. ಇತಿಹಾಸದಲ್ಲಿ ಆಗಿಹೋದ ಟಿಪ್ಪುವಿನ ಬಗ್ಗೆ ಸರಕಾರವೊಂದು ಜಯಂತಿ ಆಚರಣೆ ನೆಪದಲ್ಲಿ ಈಗ ಆರೋಪ- ವಿಶ್ಲೇಷಣೆ ಮಾಡುವುದು ಎಷ್ಟು ಸರಿ?
ಟಿಪ್ಪು ಜಯಂತಿ ಆಚರಣೆ ಆಯ್ಕೆ ಜನರಿಗೆ ಬಿಟ್ಟು, ಅಧಿಕಾರದಲ್ಲಿರುವ ಪಕ್ಷ ಹಾಗೂ ವಿರೋಧ ಪಕ್ಷ ಎರಡೂ ಕೆಸರೆರಚಾಟ ನಿಲ್ಲಿಸಲಿ.