ಕೊನೆ ದಿನಗಳಲ್ಲಾದರೂ ಅವರು ಒಟ್ಟಿಗೆ ಇರಲಿ...
ನೀವು ಬಿ.ಆರ್.ಪಂತಲು ಅವರ ಸ್ಕೂಲ್ ಮಾಸ್ಟರ್ ಸಿನಿಮಾ ನೋಡಿದ್ದರೆ ಈ ನಿಜ ಜೀವನದ ಪಾತ್ರಗಳು ಇನ್ನೂ ಹೆಚ್ಚು ಅರ್ಥವಾಗುತ್ತವೆ. ವಿದೇಶೀಯರಿಗೆ ಏನು ಗೊತ್ತು ದಾಂಪತ್ಯ, ನಂಬಿಕೆ, ವಿಶ್ವಾಸ ಎಂದೆಲ್ಲ ಮಾತನಾಡುವವರಿಗೆ ಇಲ್ಲಿ ಉತ್ತರ ಇದೆ. ಅಂತಃಕರಣ, ಒಲವಿನಲ್ಲಿ ಕ್ಷಣ ಕಾಲ ತೋಯ್ದು ಹೋಗಿ, ಹೃದಯ ಆರ್ದ್ರವಾಗುವ ದಾಂಪತ್ಯ ಗೀತೆ ಇದು.
ಅಜ್ಜನಿಗೆ ಕ್ಯಾನ್ಸರ್. ಜತೆಗೆ ಮರೆವಿನ ಕಾಯಿಲೆ. ಆದರೆ ಹೆಂಡತಿಯ ಮುಖ ಮಾತ್ರ ಒಂಚೂರು ಮರೆತಿಲ್ಲ. 62 ವರ್ಷದ ದಾಂಪತ್ಯದಲ್ಲಿ ಅದೆಷ್ಟು ಹಚ್ಚಿಕೊಂಡಿದ್ದರೋ ಒಬ್ಬರನ್ನೊಬ್ಬರು. ಆದರೆ ಕಾಯಿಲೆಗಳು ಅವರನ್ನು ಬೇರೆ ಮಾಡಿವೆ. ಪ್ರತಿ ಕ್ಷಣವು ಹಂಬಲಿಸುವ ಈ ಜೀವಗಳು ಜೊತೆಯಾಗಲಿ, ಅವರಿಗೆ ನಿಮ್ಮದೂ ಒಂದು ಹಾರೈಕೆಯಿರಲಿ.
ಕೆನಡಾ ದಲ್ಲಿನ ಆರೋಗ್ಯ ವ್ಯವಸ್ಥೆಯ ಮಧ್ಯೆ ಸಿಲುಕಿದ ವೃದ್ಧ ದಂಪತಿಯ ಬಗ್ಗೆ ಆ ಕುಟುಂಬದವರು ಬರೆದ ಪತ್ರ ಫೇಸ್ ಬುಕ್ ನಲ್ಲಿ ಸಿಕ್ಕಿತು. ದೇಶ ಯಾವುದಾದರೇನು ಒಲವಿನ ಕತೆ ಕಲ್ಲನ್ನೂ ಕರಗಿಸುವುದು ಹೌದು. ದೀರ್ಘ ದಾಂಪತ್ಯ ಕಳೆದ ದಂಪತಿಯ ಜೀವನದಲ್ಲಿ ಆರೋಗ್ಯ ಹೇಗೆ ಆಟ ಆಡುತ್ತಿದೆ? ಅವರ ಕುಟುಂಬ ಸದಸ್ಯರ ಪತ್ರದಲ್ಲಿದೆ, ಓದಿಕೊಳ್ಳಿ, ಸಾವಧಾನವಾಗಿ.
ಸ್ನೇಹಿತರೇ ದಯವಿಟ್ಟು ಇದನ್ನು ಓದಿ. ಇಲ್ಲಿರುವುದು ನಾನು ತೆಗೆದ ಅತ್ಯಂತ ದುಃಖಕರ ಫೋಟೋ. ಇವರು ನನ್ನ ಓಮಿ ಮತ್ತು ಓಪಿ. ನೀವು ನೋಡ್ತಿದಿರಲ್ಲ ಇಬ್ಬರು ಕಣ್ಣೀರನ್ನು ಒರೆಸ್ತಿದಾರೆ. ಆದರೆ ಯಾಕೆ ಗೊತ್ತಾ? ಈ ಫೋಟೋ ತೆಗೆದಿರೋದು ಇಂಗ್ಲೆಂಡಿನ ಸರ್ರೆಯಲ್ಲಿರುವ ಯೇಲ್ ರಸ್ತೆಯಲ್ಲಿ. ನರ್ಸಿಂಗ್ ಹೋಮ್ ಗೆ ಸೇರುವ ಮುಂಚೆ ಇಲ್ಲಿ ಉಳಿಸಿಕೊಂಡಿರುತ್ತಾರೆ. ಇಲ್ಲೇ ನನ್ನ ಓಪಿ ಇದ್ದಾರೆ.[ವಾಹನಕ್ಕೆ ಹಣ ಹೊಂದಿಸಲಾಗದೆ ಹೆಂಡತಿ ಶವ ಹೊತ್ತು 10 ಕಿ.ಮೀ. ನಡೆದ]
62 ವರ್ಷಗಳ ಸುದಿರ್ಘ ದಾಂಪತ್ಯ ಇವರಿಬ್ಬರದು. ಕಳೆದ ಎಂಟು ತಿಂಗಳಿಂದ ಬೇರೆ-ಬೇರೆ ಆಗಿದ್ದಾರೆ. ಅದಕ್ಕೆ ಏನು ಕಾರಣ ಗೊತ್ತಾ? ನಮ್ಮ ಹೆಲ್ತ್ ಕೇರ್ ವ್ಯವಸ್ಥೆಯಲ್ಲಿರುವ ವಿಳಂಬ ಧೋರಣೆ ಹಾಗೂ ಇವರಿಗೂ ಮುಂಚೆ ಕಾಯುತ್ತಿರುವವರ ಪಟ್ಟಿ ಕಾರಣ. ನನ್ನ ಅಜ್ಜಿಗೆ ಎಲ್ಲಿ ಟ್ರೀಟ್ ಮೆಂಟ್ ನಡೀತಿದೆಯೋ ಅಲ್ಲಿಗೇ ನನ್ನ ತಾತನನ್ನೂ ಶಿಫ್ಟ್ ಮಾಡುವ ಶಕ್ತಿ ಯಾರಿಗಾದರೂ ಇದೆಯಾ?
ಒಬ್ಬರನ್ನೊಬ್ಬರು ನೋಡಿದಾಗ ಅಳುತ್ತಾರೆ. ಆ ದೃಶ್ಯ ಕಂಡಾಗ ಹೃದಯ ಕಿತ್ತು ಬಂದಂತೆ ಆಗುತ್ತದೆ. ಪರಿಸ್ಥಿತಿ ಇವತ್ತು ಮತ್ತೂ ಭೀಕರವಾಯಿತು. ನನ್ನ ತಾತನಿಗೆ ಲಿಂಫೋಮಾ ಇದೆಯಂತೆ. ಇದು ಅವರ ಆಯುಷ್ಯವನ್ನು ಕಡಿಮೆ ಮಾಡುವುದು ಒಂದು ಕಡೆಯಾದರೆ, ಅವರ ಮರೆವಿನ ಕಾಯಿಲೆ ದಿನದಿನಕ್ಕೂ ಹೆಚ್ಚಾಗ್ತಾ ಇದೆ. ಆದರೆ ಸದ್ಯಕ್ಕಂತೂ ಅವರ ನೆನಪಿನಿಂದ ನನ್ನ ಅಜ್ಜಿ ಒಂದಿಂಚಿನಷ್ಟೂ ಕದಲಿಲ್ಲ.
ಆದರೆ, ಅವರಿಬ್ಬರು ಹೀಗೆ ದೂರವಾಗಿದ್ದರೆ ನನ್ನ ತಾತನ ನೆನಪಿನಲ್ಲಿ ಅಜ್ಜಿ ಇರುವುದಿಲ್ಲ ಎಂಬ ಭಯ ನಮ್ಮದು. ಆದ್ದರಿಂದಲೇ ಎರಡು ದಿನಕ್ಕೆ ಒಂದು ಸಲ ಅರ್ಧ ಗಂಟೆ ಅಜ್ಜಿ-ಅಜ್ಜನನ್ನು ನಮ್ಮ ಕುಟುಂಬದವರು ಭೇಟಿ ಮಾಡಿಸ್ತೀವಿ. ಹೀಗೆ ಮಾಡಿದರೆ ಅಜ್ಜಿಯನ್ನು ತಾತ ಮರೆಯೋದಿಲ್ಲ. ಈಗ ಕ್ಯಾನ್ಸರ್ ಇರುವ ಸುದ್ದಿ ಗೊತ್ತಾದ ಮೇಲಂತೂ ಅವರಿಬ್ಬರೂ ಒಂದೇ ಕಡೆ ಇರಬೇಕು ಎಂಬುದು ತೀರಾ ಅಗತ್ಯ ಮತ್ತು ತಕ್ಷಣಕ್ಕೆ ಆಗಬೇಕಾದ ಕೆಲಸ ಎನಿಸುತ್ತಿದೆ.[ನಿರ್ಮಲೆ ಜೀವದ ಸೆಲೆ ನಮ್ಮಮ್ಮ]
ನನ್ನ ತಾತ ಈಗೆಲ್ಲಿದ್ದಾರೋ ಅಲ್ಲಿ ಅವರಿಗೆ ಸರಿಯಾದ ಕಾಳಜಿ ತೋರಿಸ್ತಿಲ್ಲ, ನಮಗೆ ಮಾತು ಕೊಟ್ಟ ಹಾಗೆ ಫಿಸಿಕಲ್ ಥೆರಪಿಯೂ ಮಾಡ್ತಿಲ್ಲ. ಅಂದಹಾಗೆ ಕಳೆದ ಎಂಟು ತಿಂಗಳಿಂದ ತಾತ ನಡೆದೇ ಇಲ್ಲ. ಆ ಕಾರಣಕ್ಕೆ ವ್ಹೀಲ್ ಛೇರ್ ಮೇಲೆ ಕೂತಿದ್ದಾರೆ ಅಷ್ಟೆ. ಆರ್ಥಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಅವರು ಪೂರ್ತಿ ಕುಗ್ಗಿಹೋಗಿದ್ದಾರೆ.
ನಾನು, ನನ್ನ ಕುಟುಂಬ ನಿಮ್ಮಲ್ಲಿ ಬೇಡಿಕೊಳ್ತೀವಿ. ದಯವಿಟ್ಟು ನಮಗೆ ಸಹಾಯ ಮಾಡಿ. ನಾವು ಲೋಕಲ್ ಎಂಎಲ್ ಎನ ಭೇಟಿ ಮಾಡಿದ್ವಿ, ಫ್ರೇಸರ್ ಹೆಲ್ತ್ ಅವರಿಗೆ ಕಾಲ್ ಮಾಡಿದ್ವಿ. ಆದರೆ ನಮ್ಮ ಯಾವುದೇ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಉತ್ತರ-ಪರಿಹಾರ ದೊರೆಯಲಿಲ್ಲ. 62 ವರ್ಷಗಳ ದಾಂಪತ್ಯ ನಡೆಸಿದ ನನ್ನ ಅಜ್ಜಿ-ತಾತ ಒಂದೇ ಕಟ್ಟಡದಲ್ಲಿ ಅವರ ಕೊನೆ ದಿನಗಳನ್ನು ಕಳೆಯಲಿ. ನಮಗೆ ಸಹಾಯ ಮಾಡಬಹುದಾದವರಿಗೆ ತಲುಪವವರೆಗೆ ಈ ಪತ್ರವನ್ನು ಶೇರ್ ಮಾಡಿ, ಟ್ಯಾಗ್ ಮಾಡಿ.