ಒನ್ಇಂಡಿಯಾದಲ್ಲಿ ಜೋಗಿಯೊಡನೆ ಸಾಹಿತ್ಯ ಸಲ್ಲಾಪ
Recommended Video
ಶ್ರೀಮಂತವಾಗಿರುವ ಕನ್ನಡ ಸಾಹಿತ್ಯ, ಅದರ ಬಗ್ಗೆ ಗೆಳೆಯರ ಗುಂಪಿನಲ್ಲಿ ಮಾತುಕತೆ ನಡೆಸುವುದು, ಹಳೆಯ ಮತ್ತು ಹೊಸ ಸಾಹಿತ್ಯಗಳನ್ನು ಮೊಗೆಮೊಗೆದು ಕುಡಿಯುವುದು ಒಂದು ಸಂಭ್ರಮವಾದರೆ, ಸಾಹಿತ್ಯ ಲೋಕದ ಬಗ್ಗೆ ಪತ್ರಕರ್ತ, ಕಾದಂಬರಿಕಾರ ಗಿರೀಶ್ (ಜೋಗಿ) ಅವರೊಡನೆ ಹರಟೆ ಹೊಡೆಯುವುದು ಮತ್ತೊಂದು ರೀತಿಯ ಸಂಭ್ರಮ.
ಕರ್ನಾಟಕದಲ್ಲಿ ಕನ್ನಡ ಸಾಹಿತ್ಯಕ್ಕೇನೂ ಬರವಿಲ್ಲ, ಆದರೆ ಅಭಿರುಚಿ ಬೆಳೆಸುವಂಥ ಸಾಹಿತ್ಯ ಕನ್ನಡಿಗರಿಗೆ ಸಿಗುತ್ತಿಲ್ಲ ಮತ್ತು ಅದನ್ನು ಇಂದಿನ ಪೀಳಿಗೆಗೆ ತಲುಪಿಸುವ, ಅವರಲ್ಲಿ ಅಭಿರುಚಿ ಬೆಳೆಸುವ ಕೆಲಸ ನಮ್ಮ ಸಾಹಿತಿಗಳಿಂದ, ಕನ್ನಡ ಮೇಷ್ಟ್ರುಗಳಿಂದ ಆಗುತ್ತಿಲ್ಲ ಎನ್ನುವ ಕೊರಗು ಕನ್ನಡಿಗರದ್ದು. ನಂಬಲು ಕಷ್ಟವಾದರೂ ಸತ್ಯಸಂಗತಿ.
ಈ ದೃಷ್ಟಿಯಿಂದ ನೋಡಿದರೆ, ಧಾರವಾಡದಲ್ಲಿ ಪ್ರತಿವರ್ಷ ನಡೆಯುವ, ಯಾವುದೇ ಸ್ವಾಗತ, ವಂದನಾರ್ಪಣೆ, ಒಣಭಾಷಣಗಳು, ಒಣಆಡಂಬರಗಳು ಇಲ್ಲದ ಸಾಹಿತ್ಯ ಸಂಭ್ರಮ ನಿಜಕ್ಕೂ ಪ್ರಸ್ತುತವಾಗುತ್ತದೆ. ಅಲ್ಲಿ ಸಾಹಿತ್ಯ ನಿಜಕ್ಕೂ ಸಂಭ್ರಮಿಸುತ್ತದೆ, ಸಾಹಿತ್ಯವನ್ನು ಪ್ರೀತಿಸುವವರು ಅಲ್ಲಿ ನೆರೆದಿರುತ್ತಾರೆ. ಇಂಥ ಸಂಭ್ರಮಗಳು ಸಾಯಬಾರದು...
ಇಂದಿನ ಯುವಜನತೆ ಎಂಥ ಸಾಹಿತ್ಯ ಓದುತ್ತಾರೆ, ಯಾವ ರೀತಿಯ ಪುಸ್ತಕಗಳು ಹುಟ್ಟು ಕಾಣುತ್ತಿವೆ, ದೇಶ ವಿದೇಶಗಳಲ್ಲಿ ಕನ್ನಡ ಸಂಘಟನೆಗಳು ಯಾವ ರೀತಿ ಕನ್ನಡ ಸೇವೆಯಲ್ಲಿ, ಚಟುವಟಿಕೆಗಳಲ್ಲಿ ತೊಡಗಿವೆ ಎಂಬ ಗಹನವಾದ ಚರ್ಚೆ ನಡೆಯುತ್ತಿರುವಾಗಲೇ, ಇಂದು ಸಾಹಿತಿ ಜಯಂತ್ ಕಾಯ್ಕಿಣಿ ಅವರ ಹುಟ್ಟುಹಬ್ಬವಲ್ಲವೆ ಎಂದು ಅವರಿಗೆ ಲೈವ್ ಮಾತುಕತೆಯಲ್ಲಿಯೇ ಶುಭಾಶಯವನ್ನೂ ಕೋರಲಾಯಿತು.
ಫೇಸ್ ಬುಕ್ ನಲ್ಲಿ, ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಈ ಮಾತುಕತೆಯನ್ನು ಲೈವ್ ಪ್ರಸಾರ ಮಾಡುತ್ತಿರುವಾಗಲೇ, ಈ ಸ್ವಾರಸ್ಯಕರ ಮಾತುಕತೆಯನ್ನು ಕೇಳಲೆಂದು, ಕನ್ನಡ ಸಾಹಿತ್ಯಾಸಕ್ತರ ದಂಡೇ ಆನ್ ನಲ್ಲಿ ನೆರೆದಿತ್ತು. ಈ ಮಾತುಕತೆಯಲ್ಲಿ ನಾನೂ ಇರಬೇಕಾಗಿತ್ತು ಎಂದು ಕೆಲವರು ಅಂದರೆ, ಇಂದಿನ ಬರಹಗಾರರು ಹೆಚ್ಚಾಗಿ ಪರ್ಸನಾಲಿಟಿ ಡೆವಲೆಪ್ಮೆಂಟ್, ರೆಸಿಪಿ ಬಗ್ಗೆಯೇ ಹೆಚ್ಚು ಪುಸ್ತಕಗಳನ್ನು ಬರೆಯುತ್ತಿದ್ದಾರೆ ಎಂಬ ಮಾತಿಗೆ ಮತ್ತೊಬ್ಬರು ಆಕ್ಷೇಪ ಕೂಡ ಎತ್ತಿದರು.
ಕನ್ನಡಪ್ರಭದಲ್ಲಿ ಜೊತೆಯಾಗಿ ಹಲವಾರು ವರ್ಷಗಳ ಕಾಲ ಪುಟಗಳನ್ನು ತುಂಬಿಸಿದ ಮಾತುಕತೆ ಕೂಡ ನುಸುಳಿಕೊಂಡು, ಗತಕಾಲದ ವೈಭವ ಮೆಲುಕು ಹಾಕುವಂತೆ ಮಾಡಿತು. ಅಲ್ಲಲ್ಲಿ ಹಾಸ್ಯ ಚಟಾಕಿಗಳು, ಕಾಲೆಳೆಯುವ ತುಣುಕುಗಳು ಕೂಡ ಕಾಣಿಸಿಕೊಂಡು ಇಡೀ ಮಾತುಕತೆ ಲೈವ್ಲಿ ಮಾತ್ರವಲ್ಲ ಲವ್ಲಿಯಾಗುವಂತೆ ಮಾಡಿತು. ಮಾತುಮಾತಿನ ನಡುವೆ ತಾವು ಅತೀ ಹೆಚ್ಚು ಮೆಚ್ಚಿಕೊಂಡ ಕಾದಂಬರಿಯೆಂದರೆ ರಾವ್ ಬಹಾದ್ದೂರ್ ಅವರು ಬರೆದಿರುವ 'ಗ್ರಾಮಾಯಣ' ಎಂದರು ಜೋಗಿ.
ಕನ್ನಡ ಸಂಭ್ರಮಗಳಿಗೆ ಸರಕಾರದಿಂದ ದೇಣಿಗೆ ದೊರೆಯುತ್ತಿಲ್ಲ ಎಂದು ವಿಷಾದಿಸಿದ ಜೋಗಿಯವರು, ಸಾಹಿತ್ಯದ ಬಗ್ಗೆ ಅತ್ಯಂತ ಸ್ವಾರಸ್ಯಕರವಾಗಿ, ಸುಮಾರು ಮೂವತ್ತು ನಿಮಿಷಗಳ ಕಾಲ ಎಸ್ ಕೆ ಶಾಮಸುಂದರ ಅವರೊಂದಿಗೆ ಹರಟೆ ಹೊಡೆದರು. ಅವರು ಮಾತುಗಳು ಅಡಿಗರ ಕವನ, ಪೂರ್ಣಚಂದ್ರ ತೇಜಸ್ವಿಯವರ ಜೀವಂತಿಕೆಯಿಂದ ತುಂಬಿರುವ ಕಾದಂಬರಿ ಸುತ್ತ ಸುತ್ತಾಡಿದವು.
ಜೋಗಿ ಮತ್ತು ಶಾಮ್ ಅವರು ಆಡಿರುವ ಮಾತುಗಳನ್ನೆಲ್ಲ ಇಲ್ಲಿ ಬರೆದರೆ, ಆ ಸಾಹಿತ್ಯ ಸಲ್ಲಾಪದ ಸ್ವಾರಸ್ಯವೇ ಹೊರಟುಹೋಗುತ್ತದೆ. ಆದ್ದರಿಂದ ಚರ್ಚೆ ಯಾವ್ಯಾವುದರತ್ತ ಹೊರಳಿತು, ಇನ್ನೂ ಏನೇನು ಮಾತುಗಳು ಬಂದವು ಎಂಬುದನ್ನು ಈ ವಿಡಿಯೋ ನೋಡಿಯೇ ನೀವು ತಿಳಿದುಕೊಳ್ಳಬೇಕು. ಹಾಗೆಯೆ, ನಿಮ್ಮ ಅಭಿಪ್ರಾಯ ಮಂಡಿಸುವುದನ್ನು ಮಾತ್ರ ಮರೆಯಬೇಡಿ.