ಅನಂತ ಪ್ರಶ್ನೆಗಳ ಮೂಲಕ ಸತ್ಯದ ಸಾಕ್ಷಾತ್ಕಾರ!
ಸರಿ ಸತ್ಯವನ್ನು ಪ್ರತಿಪಾದಿಸುವ ಮಾರ್ಗ ಯಾವುದು? ಯಾವುದು ಸಮಾಜದ ಅಂತರಮುಖವಾಗಿರುತ್ತದೋ ಅದೇ ಸತ್ಯಮಾರ್ಗ. ಹಾಗಾದ್ರೆ ಈ ಅಂತರಮಖ ಅಂದರೇನು? ಯಾವುದು ಸಮಾಜದ ಒಳಗಣ್ಣಾಗಿರುತ್ತದೋ ಅದೇ ಅಂತರಮುಖ. ಮತ್ತೆ ಈ ಒಳಗಣ್ಣು ಯಾವುದು? ಯಾವುದು ಹೊರಗೆ ಕಾಣುತ್ತಿರುವ ವಸ್ತುವಿನ ಬಗ್ಗೆ ಅರಿವಿದ್ದು ಮತ್ತು ಅದರೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದರು ಇದೆಲ್ಲಾ ಭ್ರಮೆ ಎಂದು ತಿಳಿದಿರುತ್ತದೋ ಅದೇ ಒಳಗಣ್ಣು. ಈ ಒಳಗಣ್ಣು ತೆರೆದು ನೋಡಿದರೆ ಕಾಣುವುದೇ ಜ್ಞಾನ.
ಸರಿ ಮತ್ತೆ ಜ್ಞಾನ ಯಾವುದು? ಯಾವುದು ಜಗತ್ತಿನ ಮಾಯೆಯ ಬಗ್ಗೆ ಅರಿವಿರುತ್ತದೆ ಅದೇ ಜ್ಞಾನ. ಹಾಗಾದ್ರೆ ಮಾಯೆ ಯಾವುದು? ಯಾವುದು ನಮ್ಮಲ್ಲಿ ಭ್ರಮೆಗಳನ್ನು ಹುಟ್ಟಿಹಾಕುವುದೋ ಅದೇ ಮಾಯೆ. ಭ್ರಮೆ ಯಾವಾಗ ಉಂಟಾಗುತ್ತದೆ? ಬುದ್ದಿ ಭ್ರಷ್ಟವಾದಾಗ. ಬುದ್ದಿ ಯಾವಾಗ ಭ್ರಷ್ಟವಾಗುತ್ತದೆ? ನಮ್ಮಲ್ಲಿ ಯಾವಾಗ ಆಸೆಗಳು ಅತಿಯಾಗಿ ನಮ್ಮ ನಿಯಂತ್ರಣವನ್ನು ತಪ್ಪಿ ಹೋಗುತ್ತದೋ ಆಗ. ಮನಸು ಯಾವಾಗ ನಿಯಂತ್ರಣ ತಪ್ಪುತ್ತದೆ? ಭೋಗದ ಬಯಕೆಗಳು ಯಾವಾಗ ಮಿತಿಮೀರುತ್ತದೆ ಆಗ ನಿಯಂತ್ರಣ ತಪ್ಪುತ್ತದೆ. ಸರಿ ಭೋಗದ ಬಯಕೆಗಳು ಯಾವಾಗ ಮಿತಿಮೀರುತ್ತದೆ? ಯಾವಾಗ ಸಂತೃಪ್ತಭಾವನೆಯನ್ನು ಮೀರಿ ನಡೆದಾಗ. ಸರಿ ಸಂತೃಪ್ತಭಾವನೆ ಮೀರಿ ಯಾವಾಗ ನಡೆಯುತ್ತೇವೆ? ಯಾವಾಗ ಅತೃಪ್ತತೆ ಮನಸಲ್ಲಿ ತಾಂಡವವಾಡುತ್ತದೋ ಆಗ. ಸರಿ ಹಾಗಾದ್ರೆ ಅತೃಪ್ತತೆ ಮನಸಲ್ಲಿ ಯಾವಾಗ ತಾಂಡವವಾಡುತ್ತದೆ? ಯಾವಾಗ ಸುಖದ ಬಯಕೆ ಹೆಚ್ಚುತ್ತದೋ ಆಗ ಸಹಜವಾಗಿಯೆ ಅತೃಪ್ತತೆ ಅದರ ಮೂಲಕ ತಾಂಡವವಾಡುತ್ತದೆ.
ಸರಿ ಸುಖದ ಬಯಕೆ ಯಾವಾಗ ಹೆಚ್ಚುತ್ತದೆ? ಯಾವಾಗ ಬಯಕೆಗಳು ಇಂದ್ರೀಯ ನಿಗ್ರಹವನ್ನು ಮೀರಿರುತ್ತದೇ ಅದೇ ಸುಖ. ಇಂದ್ರೀಯ ನಿಗ್ರಹ ಎಂದರೇನು? ಆಸೆಗಳ ಮೇಲೆ ನಿಯಂತ್ರಣ. (ಉದಾ: ಹೊಟ್ಟೆಗೆ ಎಷ್ಟು ಬೇಕೋ ಅಷ್ಟು ಊಟ ಮಾಡಿದರೆ ಅದು ನಿಯಂತ್ರಣ, ಆದರೆ ನಾಲಿಗೆ ರುಚಿ ಸಿಕ್ಕರೆ, ಹೊಟ್ಟೆ ತುಂಬಿದ್ದರು ಮತ್ತೆ ಮತ್ತೆ ತಿನ್ನುವಂತೆ ಪ್ರೇರಿಪಿಸುತ್ತದೆ) ಆಸೆಗಳ ಮೇಲೆ ನಿಯಂತ್ರಣ ಎಂದರೇನು? ಯಾವ ಬಯಕೆಗಳು ಅಥವಾ ಇಚ್ಛೆಗಳು ಮನುಷ್ಯನ ಬುದ್ದಿಯನ್ನು ವಿಕಾರತೆಯಡೆಗೆ ತೆಗೆದುಕೊಂಡು ಹೋಗದಂತೆ ತಡೆಯುತ್ತದೇ ಅದೇ ನಿಯಂತ್ರಣ.
ಸರಿ ಬುದ್ದಿ ವಿಕಾರತೆ ಅಂದರೇನು? ಯಾವುದು ಅಪೇಕ್ಷಿತವಲ್ಲವೋ ಅದನ್ನೇ ಬಯಸುವುದು. ಅಪೇಕ್ಷಿತವಲ್ಲದು ಯಾವುದು? ಯಾವ ಸಂಬಂಧ ಅಥವಾ ವಸ್ತು ತನಗೆ ಯೋಗ್ಯತಾ ಅನುಸಾರವಾಗಿ ಪಡೆಯಲು ಉಚಿತವಲ್ಲವೋ ಅದು. ಈ ಯೋಗ್ಯತಾ ಅನುಸಾರ ಎಂದರೇನು? ಯಾವುದು ನಮ್ಮ ಆರ್ಹತೆಯ ಆಧಾರದ ಮೇಲೆ ಯಾವುದನ್ನು ಅಪೇಕ್ಷಿಸಲು ಸಾಧ್ಯವೋ ಅದೇ ನಮ್ಮ ಯೋಗ್ಯತೆ. ಸರಿ ಹಾಗಾದ್ರೆ ಆರ್ಹತೆ ಎಂದರೇನು? ಯಾವ ವಿದ್ಯೆ, ಧರ್ಮ, ಕರ್ಮಗಳು ಯಾವುದನ್ನು ಪಡೆಯಲು ಅರ್ಹವೆಂದು ದಾಖಲಿಸಿದೆಯೋ ಆ ಅರ್ಹತೆಗಳ ಆಧಾರದ ಮೇಲೆ ಇದನ್ನು ನಾನು ಪಡೆಯಲು ಆರ್ಹ ಎಂಬ ಪ್ರಮಾಣಪತ್ರ. ಸರಿ ಪ್ರಮಾಣ ಪತ್ರ ಎಲ್ಲಿ ಸಿಗುತ್ತೆ?
ಸಮಾಜದ ಮಧ್ಯೆ ನಾಲ್ಕು ಜನ ನಮ್ಮ ಪ್ರತಿಭೆ-ಅರ್ಹತೆಗಳನ ಆಧಾರಿಸಿ ಹೇಳುವ ಮಾತುಗಳಲ್ಲಿ ಪ್ರಮಾಣಪತ್ರವಿರುತ್ತದೆ. ಆ ನಾಲ್ಕುಜನ ಹೇಗೆ ಪ್ರಮಾಣಪತ್ರ ನೀಡುತ್ತಾರೆ? ಯಾವುದು ಧರ್ಮ ಸಮ್ಮತವೊ ಅದನ ಮಾತ್ರ ಆಚರಣೆ ಮಾಡುವ ವ್ಯಕ್ತಿಯನ್ನು ನೋಡಿದಾಗ ಅಸೂಯೆ-ದ್ವೇಷಗಳಿಂದ ಮುಕ್ತವಾಗಿ ಅವರಗಳ ಮನಸಲ್ಲಿ ಪ್ರಕಟವಾದ ಭಾವನೆಯನ್ನು ಇತರ ನಾಲ್ಕು ಜನರಿಗೊಂದಿಗೆ ಹಂಚಿಕೊಳ್ಳುವ ಮೂಲಕ ನೀಡುತ್ತಾರೆ. ಹಾಗಾದ್ರೆ ಧರ್ಮ ಸಮ್ಮತ ಎಂದರೇನು? ಯಾವುದು ಒಂದು ನೀತಿಗೆ ಒಳ್ಳಪಟ್ಟು ನಡೆಯುತ್ತದೋ ಅದೇ ಧರ್ಮಸಮ್ಮತ. ನೀತಿಗೆ ಒಳಪಡುವುದು ಎಂದರೇನು? ಉದಾಃ ಊಟ ಮತ್ತು ಕಾಮನೆ ಇವರೆಡು ಮಾತ್ರ ನಮ್ಮ ಪರವಾಗಿ ಬೇರೆಯವರು ಆಚರಣೆಗೆ ತರಲು ಸಾಧ್ಯವಿಲ್ಲ. ನಾನು ಊಟ ಮಾಡಿದರೆ ಮಾತ್ರ ನನ್ನ ಹಸಿವು ದೂರವಾಗುತ್ತದೆ, ನಾನು ಭೋಗಿಸಿದರೆ ಮಾತ್ರ ನನ್ನ ಕಾಮ ತೃಪ್ತವಾಗುತ್ತದೆ. ನನ್ನ ಆಸೆ-ಆಕಾಂಕ್ಷೆಗಳು, ಆಚರಣೆಗಳು ಇದೆಲ್ಲಾ ಒಂದು ಚೌಕಟಿನಲ್ಲಿ ಬಂಧಿಯಾಗುವುದೇ ನೀತಿ. ಮತ್ತೆ ಈ ಚೌಕಟಿನಲ್ಲಿ ಬಂಧಿಯಾಗುವುದು ಎಂದರೇನು? ಯಾವ ಕರ್ಮ-ಕಾರ್ಯಗಳು ನಮ್ಮ ಆತ್ಮೋದ್ದಾರಕ್ಕೆ ಸೂಕ್ತವಾಗಿರುತ್ತದೋ ಅದನ ಒಂದು ನೀತಿ-ನಿಯಮಗಳಿಗೆ ಅನುಸಾರವಾಗಿಯೆ ಆಚರಣೆಯಲ್ಲಿ ಇಡುವುದು.
ಈ ಆತ್ಮೋದ್ದಾರ ಎಂದರೇನು? ಯಾವುದು ಸತ್ಯಸ್ವರೂಪಿಯ ಮೂರ್ತಸ್ವರೂಪವಿದೇಯೋ ಅದೇ ಜಗತ್ತಿನ ಅದಿ ಮತ್ತು ಅಂತ್ಯವೆಂಬ ಸತ್ಯವನ್ನು ತಿಳಿದು ಅದರಡೆಗೆ ಚಿಂತಿಸುವುದು. ಹಾಗಾದ್ರೆ ಸತ್ಯಸ್ವರೂಪಿ ಮೂರ್ತಸ್ವರೂಪ ಯಾವುದು? ಯಾವುದು ನನಗೆ ಒಪ್ಪಿಗೆ ಇಲ್ಲದಿದ್ದರೂ ನನ್ನ ಅಂತರಾತ್ಮ ಮಾತ್ರ ಇದೇ ಸತ್ಯ ಎಂದು ಪ್ರತಿಪ್ರಾದಿಸುತ್ತದೇ ಆ ಸತ್ಯದ ಸಾಕ್ಷಿರೂಪನೆ ನನೊಳಗಿರುವ ಮತ್ತು ಹೊರೆಗೆ ಕಾಣುವ ಭಗವಂತ. ಆ ಭಗವಂತನ ಮೂಲಕ ಉಂಟಾಗುವ ದರ್ಶನವೇ ಸತ್ಯ. ಆ ಭಗವಂತ ಮೂರ್ತರೂಪವೇ ಸತ್ಯ. ಜಗತ್ತಿನ ಆದಿಯಲ್ಲಿ ಇದ್ದದ್ದು ಅಂತ್ಯದಲ್ಲಿರುವುದು ಕೂಡ ಆ ಸತ್ಯ ಒಂದೇ. [ಮತ್ತೇನಾದರೂ ಪ್ರಶ್ನೆಗಳಿದ್ದರೆ ಕಾಮೆಂಟ್ ಬಾಕ್ಸಲ್ಲಿ ಕೇಳಬಹುದು.]