ಇಂದಿನಿಂದ ಮೂರು ದಿನಗಳ ಗಂಗಾವತಿ ನುಡಿಜಾತ್ರೆ
ಸಮ್ಮೇಳನದ ಪ್ರಧಾನ ವೇದಿಕೆಗೆ ಕಲಾವಿದರು ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಸಾಹಿತ್ಯ ಕೃಷಿ ಜಾತ್ರೆಗೆ ಬರುವ ಸಾಹಿತ್ಯಾಸಕ್ತರ ಹಸಿವು ನೀಗಿಸುವ ಊಟದ ಮನೆಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಾಹಿತ್ಯ ಸಮ್ಮೇಳನವನ್ನು ಮಾದರಿಯನ್ನಾಗಿಸುವಲ್ಲಿ ಎಲ್ಲರ ಶ್ರಮ, ಸಹಕಾರ ಅಗತ್ಯವಾಗಿದೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ.
ಗಂಗಾವತಿ ಜನರೆಲ್ಲಾ ತಮ್ಮತಮ್ಮ ವಾಹನ, ಮನೆಗೆ ಕನ್ನಡ ಧ್ವಜ ಕಟ್ಟಿ ನಾಡಪ್ರೇಮ ಮೆರೆಯುತ್ತಿದ್ದಾರೆ. ಒಂದು ರೀತಿಯಲ್ಲಿ ಗಂಗಾವತಿ ಪಟ್ಟಣ ಮದುವೆ ಮನೆ ಸಂಭ್ರಮದಲ್ಲಿ ಮುಳುಗಿದಂತೆ ಭಾಸವಾಗುತ್ತಿದೆ. ವಿವಿಧ ವೃತ್ತಗಳಲ್ಲಿ ಕನ್ನಡ ಧ್ವಜಗಳು, ರಂಗೋಲಿ ಚಿತ್ತಾರ ಆಕರ್ಷಿಸುತ್ತಿವೆ. ಮರೆತು ಹೋದ ಜಿಲ್ಲೆಯ ಚರಿತ್ರೆ, ಗಂಗಾವತಿ ವಿಶಿಷ್ಠತೆ 78ನೇ ಸಾಹಿತ್ಯ ಸಮ್ಮೇಳನದಲ್ಲಿ ಮತ್ತೇ ಕಣ್ಮುಂದೆ ಬರಲಿದೆ ಎಂದು ಸಾಹಿತ್ಯಾಸಕ್ತರು ತುದಿಗಾಲಲ್ಲಿ ನಿಂತಿದ್ದಾರೆ.
ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಸುಮಾರು 25 ಸಾವಿರ ಆಸನಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ 300 ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿಲಾಗಿದೆ. ಜನರ ನೂಕುನುಗ್ಗಲು ತಪ್ಪಿಸಲು ಕಬ್ಬಿಣದ ಗ್ರಿಲ್ ಹಾಕಲಾಗಿದೆ.
ಮೂರು ದಿನಗಳ ಸಾಹಿತ್ಯ ಜಾತ್ರೆ ಸುವ್ಯವಸ್ಥಿತ ಹಾಗೂ ಶಾಂತಿಯಿಂದ ನಡೆಯಲು ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಲು ಯೋಜನೆ ಹಾಕಿಕೊಂಡಿದೆ. ಜಿಲ್ಲೆಯ ಪೊಲೀಸ್, ಬಳ್ಳಾರಿ, ರಾಯಚೂರು ಜಿಲ್ಲೆಯಿಂದ ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಚಿಂತಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಪ್ರಕಾಶ ತಿಳಿಸಿದರು.