ಕನ್ನಡ ನಾಡಲ್ಲೇ ಜಾಗೃತವಾಗದ ಕನ್ನಡ ಪ್ರೇಮ
ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ. ವರ್ಷಕ್ಕೆ ಒಂದು ಕನ್ನಡ ಚಿತ್ರವನ್ನಾದರೂ ಹಾಕಬೇಕೆಂಬ ಸರಕಾರದ ಸುತ್ತೋಲೆ ಧೂಳು ತುಂಬಿ ಕೂತಿದೆ. ಇತರ ರಾಜ್ಯದ ರಾಜಧಾನಿಗೆ ಹೋಗಿ ನೆಲೆಸುವ ನಮ್ಮ ಭಾಷಿಗರು ಆಯಾಯ ರಾಜ್ಯದ ಭಾಷೆಗಳನ್ನು ಕೆಲವೇ ತಿಂಗಳಲ್ಲಿ ಕಲಿಯಬೇಕಾದರೆ, ದಶಕಗಳಿಂದ ಕಾವೇರಿ ನೀರು ಕುಡಿಯುತ್ತಿರುವ ಇವರಿಗೆ ಕನ್ನಡ ಯಾಕೆ ಬರುತ್ತಿಲ್ಲ? ಅದಕ್ಕೆ ವಿಶಾಲ ಹೃದಯದ ಕನ್ನಡಿಗರು ಅವರ ಭಾಷೆಯಲ್ಲೇ ವ್ಯವಹರಿಸುತ್ತಿರುವುದೂ ಒಂದು ಕಾರಣ ಆಗಿರಬಹುದು.
ನಮ್ಮ ಸಂಸ್ಕೃತಿ ಪರಿಚಯಿಸುವ ಗೋಡೆ ಬರಹಗಳು, ಚಿತ್ರಗಳು ನಗರದ ಹೃದಯ ಭಾಗದಲ್ಲಿ ಕಾಣುತ್ತೇವೆ. ಇದು ಒಳ್ಳೆ ಕೆಲಸ, ಆದರೆ ಅಂತಹ ಬರಹ ಚಿತ್ರಗಳ ಮುಂದೆ ಜನರು ಮೂತ್ರ ವಿಸರ್ಜನೆ ಮಾಡುತ್ತಾರಲ್ಲಾ ಸ್ವಾಮಿ, ಅದಕ್ಕೆ ಏನು ಮಾಡೋಣ ಹೇಳಿ? ವರ್ಷಕ್ಕೆ ರಾಜ್ಯೋತ್ಸವದ ದಿನದಂದು ಮಾತ್ರ ಕನ್ನಡ ಬಾವುಟ ಹಾಕಿದರೆ ಸಾಕೆ? ಅಂದು ಮಾತ್ರ ಕನ್ನಡ ಭಾಷೆಗೆ ಮರ್ಯಾದೆ ನೀಡಿದರೆ ಸಾಕೆ? ಇಂತಹ ಅವಮಾನಕಾರಿ ಘಟನೆ ನಡೆಯುತ್ತಲೇ ಇರುತ್ತಿರಬೇಕಾದರೆ ಕನ್ನಡಿಗರು ಎಚ್ಚೆತ್ತುಕೊಳ್ಳುವುದು ಯಾವಾಗ? ಎಚ್ಚೆತ್ತುಕೊಳ್ಳದಿದ್ದರೆ ಮುಂದೆನೂ ಇಂಥ ಘಟನೆಗಳು ನಡೆಯೋದು ಖಂಡಿತ.
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು ಎನ್ನುವ ಪದ ಬರೀ ಬ್ಯಾನರ್ ನಲ್ಲಿ, ಕೈಪಿಡಿಯಲ್ಲಿ ಪ್ರಿಂಟ್ ಆದರೆ ಸಾಲದು. ಈ ಧ್ಯೇಯವಾಕ್ಯ ಎಲ್ಲಾ ಕನ್ನಡಿಗರ ಮನಸಿನಲ್ಲಿ ಛಾಪು ಮೂಡಬೇಕು. ರಾಜ್ಯದ ರಾಜಧಾನಿಯಲ್ಲಿ ಕಾವೇರಿ ನೀರು ಕುಡಿಯುವ ಪರಭಾಷಿಗರ ದರ್ಪ ಇದೇ ರೀತಿ ಮುಂದುವರಿದರೆ ಮತ್ತು ನಮ್ಮವರು ನಮ್ಮ ಭಾಷೆಯ ಮೇಲೆ ಸ್ವಾಭಿಮಾನ ಬೆಳೆಸಿಕೊಳ್ಳದಿದ್ದಲ್ಲಿ, 8 ಜ್ಞಾನಪೀಠ ಪಡೆದು ಇತರ ಭಾಷೆಗಳಿಗಿಂತ ಮುಂಚೂಣಿಯಲ್ಲಿರುವ ನಮ್ಮ ಭಾಷೆ ಅಧೋಗತಿಗೆ ಇಳಿಯಬಹುದು. ಹಾಗಾಗದಿರಲಿ ಎಂದು ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಬೇಡೋಣ.