ವಿಜಯನಗರ ಸಾಮ್ರಾಜ್ಯದ ಕಡೇ ಚಕ್ರವರ್ತಿ ರೆಡ್ಡಿ!
ಸಿ.ಬಿ.ಐ. ಅಧಿಕಾರಿಗಳು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿ ಭಾರಿ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿದರು. ಚಿನ್ನದ ಸಿಂಹಾಸನ, ಬೆಲ್ಟು, ಪೆನ್ನುಗಳು, ಚಿನ್ನದ ಅಂಗಿ, ತಟ್ಟೆಗಳು-ಚಮಚಗಳು, ಸಂಪೂರ್ಣ ಚಿನ್ನದಿಂದಲೇ ಮಾಡಿದ ತಿರುಪತಿ ತಿಮ್ಮಪ್ಪ-ಲಕ್ಷ್ಮಿ-ಪದ್ಮಾವತಿಯರ ವಿಗ್ರಹಗಳು, ಪೂಜಾ ಸಾಮಗ್ರಿಗಳು, ಅಸಂಖ್ಯಾತ ಅಭರಣಗಳು-ವಜ್ರ-ವೈಢೂರ್ಯಗಳು. ಅಬ್ಬಾ ಎನಿಸುವಂಥ ವಿವರಗಳು. ಆದರೆ ನೆನಪಿಡಿ. ಈ ಅದಿರು ವ್ಯಾಪಾರಿ ಕಟ್ಟಿದ ಸಂಪತ್ತಿನ ಸಾಮ್ರಾಜ್ಯದಲ್ಲಿ ಇದು ಅತ್ಯಲ್ಪ. 'ತಾನು 50.000 ಕೋಟಿ ಗಳಿಸಿದ್ದೇನೆ"ಬೆಳಗಾವಿ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ರೆಡ್ಡಿ ಹೇಳಿದ್ದ ಮಾತಿದು! ಮುಖ್ಯವಾಗಿ ಇಲ್ಲಿ ಗಮನ ಸೆಳೆಯುವುದು ಚಿನ್ನದ ಸಿಂಹಾಸನ-ಬೆಲ್ಟು-ಅಂಗಿ. ಎಷ್ಟೆ ಹಣವಿದ್ದರೂ ಇಂಥ ಖಯಾಲಿ ಇರುವುದೇ ಎನಿಸದಿರದು.
ಬಳ್ಳಾರಿಯಲ್ಲಿದ್ದಾಗ ನಾನು ಗಮನಿಸಿದ ಅಂಶಗಳಲ್ಲಿ ಅಂದಿನ ಸಚಿವ ಜನಾರ್ದನ ರೆಡ್ಡಿ ಸುತ್ತಲೂ ಇದ್ದವರು ಅವರನ್ನು ಹೊಗಳುತ್ತಿದ್ದ ಪರಿ ಕೇಳಿದರೆ ಕಿವಿಗೆ ತೂತು ಬೀಳುತ್ತದೆ. ಅಭಿನವ ಶ್ರೀಕೃಷ್ಣದೇವರಾಯ, ಶ್ರೀಕೃಷ್ಣದೇವರಾಯರ ಅಪರವತಾರ ಎನ್ನುವುದೆಲ್ಲ ಆಶ್ಚರ್ಯ ಉಂಟು ಮಾಡಿತ್ತು. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅಂದು ಮಾತನಾಡಿದ ಜಿಲ್ಲೆಯ ಶಾಸಕರೊಬ್ಬರು ಜನಾರ್ದನ ರೆಡ್ಡಿ ಅವರು ಶ್ರೀಕೃಷ್ಣದೇವರಾಯರ ಪುನರ್ಜನ್ಮ ಎಂದಿದ್ದರು. ಇದನ್ನು ಕೇಳಿದಾಗ ಹೊಗಳಿಕೆಗೂ ಒಂದು ಇತಿಮಿತಿ ಬೇಡವೇ ಎನಿಸಿತು.