ಅರಸರೇ ಇದ್ದರೂ ಇಂಥ ಉತ್ಸವ ಮಾಡುತ್ತಿರಲಿಲ್ಲ!
ಎಂ.ಪಿ.ಪ್ರಕಾಶ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಹಂಪಿ ಉತ್ಸವದ ಸಂದರ್ಭದಲ್ಲಿ ಗಣ್ಯರ ಮನ ಕಲಕುವ ಸಾವು-ನೋವಿನ ದುರ್ಘಟನೆ ನಡೆದರೆ ಉತ್ಸವ ರದ್ದುಗೊಳಿಸಲು ಆದೇಶಿಸುತ್ತಿದ್ದರು. ಮಾಜಿ ಸಚಿವ ನಜೀರ್ ಸಾಬ್ ಅವರ ಮರಣ, ಹೊಸಪೇಟೆ ತಾಲೂಕು ಪಂಚಾಯತಿ ಅಧ್ಯಕ್ಷರ ಕೊಲೆಯಂಥ ದುರ್ಘಟನೆಗಳ ಸನ್ನಿವೇಶದಲ್ಲಿ ಉತ್ಸವ ರದ್ದಾಗಿದೆ. ಇಂಥ ಸಂದರ್ಭಗಳಲ್ಲಿ ಉತ್ಸವ ಮಾಡಿದರೆ ಅರ್ಥವಿರುವುದಿಲ್ಲ ಎಂಬ ಇರಾದೆ ಅವರದಾಗಿತ್ತು. ಆದರೆ ಇಂಥ ಸಂವೇದನಾಶೀಲತೆ 2009ರಲ್ಲಿ ಕಂಡು ಬರಲಿಲ್ಲ.
ನಾವಿರುವುದು ಪ್ರಜಾಪ್ರಭುತ್ವದ ನೆಲೆಯಲ್ಲಿ. ನಿರಂಕುಶ ಪ್ರಭುಗಳ ಆಡಳಿತ ಬೇಡ ಎಂದೇ ಹೋರಾಟ ಮಾಡಿ ಈ ವ್ಯವಸ್ಥೆ ಒಪ್ಪಿಕೊಳ್ಳಲಾಗಿದೆ. ಹೀಗಿರುವಾಗ ಪ್ರಜೆಗಳ ಧ್ವನಿಗೆ ಬೆಲೆಯೆ ಇಲ್ಲದ ರಾಜರ ಪಟ್ಟಾಭಿಷೇಕೋತ್ಸವಗಳನ್ನು ವೈಭವದಿಂದ ಆಚರಿಸುವುದು ಅರ್ಥಹೀನ. ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ. ಇದನ್ನೆಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲ ಯೋಚಿಸಲಿಲ್ಲ. ಇದಕ್ಕೆ ಮತ್ತದೆ ಕಾರಣ ಜನಾರ್ದನ ರೆಡ್ಡಿ. ಇವರ ಮಾತಿನಂತೆ 27 ಕೋಟಿ ರುಪಾಯಿಗಳನ್ನು ಸರಕಾರ ಬಿಡುಗಡೆ ಮಾಡಿತು. 2009ರ ಜನವರಿ 27ರಿಂದ 30ರವರೆಗೆ ಶ್ರೀಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕೋತ್ಸವ ಆಯೋಜಿತವಾಯಿತು. 5 ಕೋಟಿ ವೆಚ್ಚದಲ್ಲಿ ಭವ್ಯ ವೇದಿಕೆ ನಿರ್ಮಾಣವಾಯಿತು. ಒಂದು ವೇಳೆ ವಿಜಯನಗರ ಸಾಮ್ರಾಜ್ಯದ ಅರಸರ ಸಂತತಿಯೇ ಇವತ್ತಿದ್ದರೂ ಇಂಥ ಉತ್ಸವ ಮಾಡುತ್ತಿರಲಿಲ್ಲವೇನೋ!