ಜನಾ ಜನ್ಮಾಂತರ ರಹಸ್ಯ ಬಿಡಿಸಿಟ್ಟ ಜ್ಯೋತಿಷಿ
ಚೆಂಗಾರೆಡ್ಡಿ ಮತ್ತಿವರ ಪತ್ನಿ ರುಕ್ಮಿಣಿ ಅವರು ಆಂಧ್ರದ ಶ್ರೀಕಾಳಹಸ್ತಿ ಸಮೀಪದ ಹಳ್ಳಿಯೊಂದರಿಂದ ವಲಸೆ ಬಂದವರು. ಅಂದಿನ ಬಳ್ಳಾರಿ ಪಟ್ಟಣದಲ್ಲಿ ಚೆಂಗಾರೆಡ್ಡಿ ಪೊಲೀಸ್ ಕಾನ್ ಸ್ಟೇಬಲ್ ಆಗಿದ್ದವರು. ಇವರ ಕಿರಿಯ ಮಗ ಜನಾರ್ದನ ರೆಡ್ಡಿ. 1999ರ ಬಳ್ಳಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು ಮತ್ತು 2004ರಲ್ಲಿ ಅದಿರಿಗೆ ದೊರೆತ ತಾರಕ ಬೆಲೆ ಇವರನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮೇಲೇಳುವಂತೆ ಮಾಡಿತು. ಇವರ ಕೌಟುಂಬಿಕ ಮತ್ತು ವ್ಯವಹಾರಿಕ ಸಂಬಂಧಗಳು ಚಾಚಿಕೊಂಡಿರುವುದು ಕೂಡ ಆಂಧ್ರದಲ್ಲಿಯೆ. ಭಾಷಾಬಳಕೆ ವಿಚಾರದಲ್ಲಿ ಹೇಳುವುದಾದರೆ ಪತ್ರಿಕಾಗೋಷ್ಠಿ ಸಂದರ್ಭಗಳಲ್ಲಿ ಕೆಲ ನಿಮಿಷ ಅಷ್ಟೆ ಕನ್ನಡ ಕೇಳುತ್ತದೆ. ಉಳಿದಂತೆ ಎಲ್ಲವೂ ತೆಲುಗುಮಯ!
ಕನ್ನಡ ವಿಶ್ವವಿದ್ಯಾಲಯಕ್ಕೆ ಶ್ರೀಕೃಷ್ಣದೇವರಾಯ ಹೆಸರು. ಇದು ಜನಾರ್ದನ ರೆಡ್ಡಿ ಅವರ ಆಕಾಂಕ್ಷೆ. ಇವರು ಇಚ್ಛೆಪಟ್ಟ ವಿಷಯಕ್ಕೆ ಅನುಮತಿ ನಿರಾಕರಿಸುವ ಸ್ಥಿತಿಯಲ್ಲಿ ಸಚಿವ ಸಂಪುಟ ಇರಲಿಲ್ಲ. ಹಂಪಿ ರಥಬೀದಿಯಲ್ಲಿ ಭವ್ಯವಾಗಿ ನಿರ್ಮಿಸಿದ್ದ ವೇದಿಕೆಯಲ್ಲಿ 2008 ಸಾಲಿನ ಪ್ರವಾಸೋದ್ಯಮ ದಿನಾಚರಣೆ ಆಯೋಜಿತವಾಗಿತ್ತು. ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಮುಖ್ಯ ಅತಿಥಿ. ಇವರು ಮಾತನಾಡುತ್ತಾ 'ಪ್ರವಾಸೋದ್ಯಮ ಮತ್ತು ಬಳ್ಳಾರಿ ಉಸ್ತುವಾರಿ ಸಚಿವರು ಆಗಿರುವ ಜನಾರ್ದನ ರೆಡ್ಡಿ ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಶ್ರೀಕೃಷ್ಣದೇವರಾಯ ಹೆಸರಿಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸರಕಾರದ ಮಟ್ಟದಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು. ಶ್ರೀಕೃಷ್ಣದೇವರಾಯರ 500ನೇ ಪಟ್ಟಾಭೀಷೇಕ ಮಹೋತ್ಸವ ಸಂದರ್ಭದಲ್ಲಿ ಈ ನಿರ್ಧಾರ ಪ್ರಕಟಿಸಲಾಗುವುದು" ಎಂದರು. ನನಗೆ ಆ ಕ್ಷಣ ಅನಿಸಿದ್ದು ಕನ್ನಡ ವಿಶ್ವವಿದ್ಯಾಲಯಕ್ಕೆ ಶ್ರೀಕೃಷ್ಣದೇವರಾಯರ ಹೆಸರನ್ನಿಡುವ ಅಗತ್ಯವೇನಿದೆ ಎಂದು. ಅಂದು ರಾತ್ರಿ ಬಳ್ಳಾರಿ ಕಛೇರಿಗೆ ವಾಪಸ್ಸಾದ ತಕ್ಷಣ ಮಾಡಿದ ಕೆಲಸವೇನೆಂದರೆ ಲಿಂಬಾವಳಿ ಅವರ ಹೇಳಿಕೆ ಇದ್ದ ಭಾಗ ಸೇರಿಸಿ ಇದು ಹೆಸರು ಸೂಕ್ತವೇ ಎಂದು.