ಕೆಲಸ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿತ್ತು...
ಆ ಸಂದರ್ಶನ ಮಂಡಳಿ ನನ್ನ ಬಗ್ಗೆ ಪೂರ್ವಾಗ್ರಹಪೀಡಿತವಾಗಿದೆ ಎಂದು ಭಾವಿಸಿ, ಸಂದರ್ಶನ ಆರಂಭವಾಗುವ ಮೊದಲೇ ನಾನು ಕೊಂಚ ಒರಟಾಗಿ ಹೇಳಿದೆ "ಇದೊಂದು ತಾಂತ್ರಿಕ ಸಂದರ್ಶನವೆಂದು ನಾನು ಆಶಿಸಿದ್ದೇನೆ". ಅವರುಗಳು ನನ್ನ ಒರಟು ನಿಲುವಿನಿಂದ ವಿಚಲಿತರಾದಂತೆ ಕಂಡುಬಂದರು. ನನಗೆ ಇಂದು, ನನ್ನ ಅಂದಿನ ವರ್ತನೆಯ ಬಗ್ಗೆ ನಾಚಿಕೆಯಾಗುತ್ತದೆ. ಮಂಡಳಿಯಲ್ಲಿದ್ದವರು ಆ ದಿನ ನನಗೆ ತಾಂತ್ರಿಕ ಪ್ರಶ್ನೆಗಳನ್ನೇ ಕೇಳಿದರು. ನಾನು ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿಯೇ ಉತ್ತರಿಸಿದೆ.
ಮಂಡಳಿಯ ಒಬ್ಬ ಹಿರಿಯ ಪುರುಷರು ಪ್ರೀತಿಯಿಂದ ನನಗೆ ಹೇಳಿದರು "ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕುವ ಅಗತ್ಯವಿಲ್ಲ" ಎಂದು ನಾವೇಕೆ ಜಾಹೀರಾತಿನಲ್ಲಿ ಬರೆದಿದ್ದೆವು ಎಂದು ನಿನಗೆ ಗೊತ್ತಿದೆಯೇ? ನಮ್ಮ ಕಾರ್ಖಾನೆಯ ಶಾಪ್ ಫ್ಲೋರ್ ನಲ್ಲಿ ನಾವು ಇದುವರೆಗೆ ಯಾವ ಮಹಿಳೆಯನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಇದು ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಓದುವ ಕಾಲೇಜು ಅಲ್ಲ; ಕಾರ್ಖಾನೆ. ಶೈಕ್ಷಣಿಕ ಕ್ಷೇತ್ರದಲ್ಲಿ ನೀನು ಫಸ್ಟ್ rank ಎನ್ನುವುದು ನಮಗೆ ತಿಳಿದಿದೆ. ನಿನ್ನಂತವರು ಯಾವುದಾದರೂ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಬೇಕು!"
ನಾನೊಬ್ಬಳು ಹುಬ್ಬಳ್ಳಿಯಂತಹ ಸಣ್ಣ ಪಟ್ಟಣದಿಂದ ಬಂದಂತಹ ತರುಣಿ. ನನ್ನ ಪ್ರಪಂಚ ತುಂಬಾ ಚಿಕ್ಕದು. ನನಗೆ ದೊಡ್ಡ ಕಂಪನಿಗಳ ವ್ಯವಹಾರ ಮತ್ತು ಕಷ್ಟ-ನಷ್ಟಗಳ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ ನಾನು ಹೇಳಿದೆ- "ನಾವೂ ಎಲ್ಲೋ ಒಂದು ಕಡೆ ಕೆಲಸ ಶುರುಮಾಡಬೇಕಲ್ಲ! ಇಲ್ಲದಿದ್ದರೆ ಯಾವ ಮಹಿಳೆಯೂ ನಿಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುವುದು ಅಸಾಧ್ಯವಾಗುತ್ತದೆ."
ದೀರ್ಘ ಸಂದರ್ಶನದ ನಂತರ, ಪರಮಾಶ್ಚರ್ಯವೆಂಬಂತೆ ನನಗೆ ಆ ಕೆಲಸ ದೊರಕಿತ್ತು! ಆ ಸಂದರ್ಶನ ಈ ರೀತಿ ನನ್ನ ಭವಿಷ್ಯವನ್ನು ಮೂಡಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಪುಣೆಯಲ್ಲಿ ನಾನು ಕೆಲಸ ಮಾಡುತ್ತೇನೆಂದು ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲ. ತದನಂತರ ನಾನು ಕರ್ನಾಟಕದಿಂದ ಬಂದಿದ್ದ ಸಂಕೋಚ ಪ್ರವೃತ್ತಿಯ ಒಬ್ಬನ ಜೊತೆ ಸ್ನೇಹ ಬೆಳೆಸಿ, ನಂತರ ಮದುವೆಯಾದೆ.