ನಮ್ಮ ಬದ್ಧತೆ ವಿಚಾರಕ್ಕೋ, ಸ್ವಾರ್ಥಕ್ಕೋ?
ಇದನ್ನೆಲ್ಲಾ ಗಮನಿಸುತ್ತಿದ್ದ ಅಲ್ಲಿನ ಸಚಿವನೊಬ್ಬ ತನ್ನ ಜನ್ಮದಿನೋತ್ಸವದ ಆಚರಣೆಗೆ ಎರಡೂ ಪತ್ರಿಕೆಯ ಸಂಪಾದಕನನ್ನು ಕರೆಯಬೇಕೆಂಬ ಆಸೆಯಿಂದ ಎರಡೂ ಪತ್ರಿಕೆಯ ಕಚೇರಿಗೆ ಆಹ್ವಾನವನ್ನು ಕಳಿಸಿದ. ಈ ಮೂಲಕ ತನ್ನ ಪ್ರಸಿದ್ದಿಯನ್ನು ಹೆಚ್ಚಿಸಿಕೊಳ್ಳಬೇಕೆಂಬ ಉದ್ದೇಶ ಹೊಂದಿದ್ದ. ಆಚರಣೆಯ ದಿನ ಬಂತು. ಸಂಜೆಯಿಂದಲೇ ಇಬ್ಬರು ಸಂಪಾದಕರಿಗೂ ಕಾಯುತ್ತಲಿದ್ದ. ಸುಮಾರು 7ರ ವೇಳೆಗೆ ಒಬ್ಬ ಸಂಪಾದಕ ಬಂದ. ಸಚಿವ ಬರಮಾಡಿಕೊಂಡ. ಇನ್ನೊಬನಿಗೆ ಕಾಯುತ್ತಿರುವಾಗ ಮೊದಲಿನವನು 'ಯಾರಿಗೆ ಕಾಯುತ್ತಿರುವಿರಿ?' ಎಂದು ಕೇಳಿ ಇನ್ನೊಂದು ಪತ್ರಿಕೆಯ ಸಂಪಾದಕನಿಗೆ ಎಂದ ಸಚಿವನಿಗೆ ಆಶ್ಚರ್ಯ ಕಾದಿತ್ತು. ಎರಡೂ ಪತ್ರಿಕೆಯ ಸಂಪಾದಕ ಒಬ್ಬನೇ ಆಗಿದ್ದ!
ನನಗೆ ಪ್ರಸ್ತುತ ಈ ಕಥೆ ಮನಸ್ಸಿಗೆ ಬಂದದ್ದು 'ವೈಚಾರಿಕ ಬದ್ದತೆ'ಯ ವಿಚಾರದ ಬಗ್ಗೆ ಯೋಚಿಸುತ್ತಿರುವಾಗ. ಇಲ್ಲಿ ಸಂಪಾದಕನ ಬದ್ದತೆ ವಿಚಾರಕ್ಕೋ ಅಥವಾ ವ್ಯಾಪಾರಕ್ಕೋ? ಇಲ್ಲಿ ಬಹುಶಃ ಈ ಸಂಪಾದಕನ ಉದ್ದೇಶ ತನ್ನ ಪ್ರತಿಭೆಯ ಕಾರಣದಿಂದ ವ್ಯಾಪಾರವಷ್ಟೇ ಇರಬಹುದು. ನನ್ನೊಬ್ಬ ಬಹಳ ಒಳ್ಳೆಯ ಸ್ನೇಹಿತನೂ ಇದೇ ಸಮಯದಲ್ಲಿ ನೆನಪಿಗೆ ಬಂದ. ಅವನು ಬಹಳ ಒಳ್ಳೆಯ ವಾಗ್ಮಿ. ಸಾಮಾನ್ಯರಿಗಿಂತ ವೈಚಾರಿಕವಾಗಿಯೂ ಸಾಕಷ್ಟು ತಿಳಿದುಕೊಂಡವನು. ಅವನ ಇನ್ನೊಂದು ವಿಶೇಷವೆಂದರೆ ಯಾವುದೇ ವಿಷಯದ ಕುರಿತಾಗಿ ಪರವಾಗಿಯೂ ಅಥವಾ ವಿರೋಧವಾಗಿಯೂ ಅಷ್ಟೇ ಚೆನ್ನಾಗಿ ಮಾತಾಡಬಲ್ಲ ವಾಗ್ಮಿ. ಹೀಗಿರುವಾಗ ಇಲ್ಲಿ ಅವನ ಬದ್ಧತೆ ಯಾವ ವಿಚಾರದ ಕಡೆಗೆ ಎಂಬ ಪ್ರಶ್ನೆ ಬಂದಾಗ ಅನುಮಾನ ಎದುರಾಗುತ್ತದೆ. ಇಂತಹ ಸಮಯಗಳಲ್ಲಿ ನಮ್ಮ ಬದ್ದತೆ ವಿಚಾರಕ್ಕೋ ಅಥವಾ ನಮ್ಮ ಸಾಮರ್ಥ್ಯಕ್ಕೋ?
ಯಾಕೆಂದರೆ ಒಮ್ಮೊಮ್ಮೆ ನಮ್ಮ ಬಂಧುಗಳೋ ಅಥವಾ ನಮಗೆ ಹತ್ತಿರದವರೋ ತಪ್ಪು ಮಾಡಿದರೆ ನಾವು ಅದರ ಸಮರ್ಥನೆಗೇ ಹೋಗಿಬಿಡುತ್ತೇವೆ. ಆದರೆ ಅದೇ ತಪ್ಪನ್ನು ಪಕ್ಕದಮನೆಯವರು ಮಾಡಿಬಿಟ್ಟರೆ ಅವರನ್ನು ಜೈಲಿಗೆ ಅಟ್ಟುವಂತೆ ಆಗ್ರಹಿಸುತ್ತೇವೆ. ನಮ್ಮ ಮಗ ಮಾಡಿದ ಸಣ್ಣ ಕಳ್ಳತನ 'ಮಗು ಮಾಡಿದ್ದು'! ಪಕ್ಕದ ಮನೆಯ ಹುಡುಗ ಮಾಡಿದ ಕಳ್ಳತನ 'ಬೆಳೆಯುವ ಸಿರಿ ಮೊಳಕೆಯಲ್ಲಿ'...!
ಎಷ್ಟು ಅಸಹ್ಯ ಅಲ್ವಾ ಈ ನಮ್ಮ ಸ್ವಜನ ಪಕ್ಷಪಾತದಂತಹ ನಡವಳಿಕೆ? ಈ ಕಾರಣದಿಂದ ಹಣವಿರುವವರು, ರಾಜಕೀಯ ಶಕ್ತಿಗಳು ತಮ್ಮ ತಮ್ಮ ಆಟಗಳನ್ನು ಸಮಾಜದಲ್ಲಿ ಆಡುತ್ತಲೇ ಬಂದಿದ್ದಾರೆ. ನಾವೂ ಸಾಕಷ್ಟು ಬಾರಿ ಅವುಗಳಿಂದಲೇ ಸ್ವಾರ್ಥಾನುಕೂಲವನ್ನು ಪಡೆಯುತ್ತಲೇ ಬಂದಿದ್ದೇವೆ.
ಈ ವಿಚಾರ ಯಾಕೆ ನನ್ನ ಮನಸ್ಸಿನಲ್ಲಿ ಬಂತೆಂದರೆ ಕರ್ನಾಟಕದ ಹಲವಾರು ಕಡೆ ನ್ಯಾಯಾಲಯದ ಆದೇಶದ ಮೇರೆಗೆ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ವಿಚಾರವಾಗಿ ಹಲವಾರು ಪ್ರತಿಭಟನೆಗಳು ನಡೆದಿವೆ, ಶ್ರದ್ಧಾ ಭಕ್ತಿಗಳ ಸಂಕೇತವಾದ ಮಂದಿರಗಳನ್ನು ತೆರವುಗೊಳಿಸುವುದು ಅಷ್ಟು ಸಮಂಜಸವಲ್ಲವೆನ್ನುದು ಅಕ್ಷರಶಃ ಸತ್ಯ. ಅದನ್ನು ಅಲ್ಲಗೆಳೆಯುವ ಮಾತೇ ಇಲ್ಲ. ಆದರೆ ಒಂದು ಕಡೆ ತೆರವುಗೊಳಿಸುವುದನ್ನು ಖಂಡಿಸುವ, ಪ್ರತಿಭಟಿಸುವ ನಾಯಕರೇ ಮಗದೊಂದು ಕಡೆ ತಮ್ಮ ಸ್ವಾರ್ಥಕ್ಕೋಸರ ಅಥವಾ ರಾಜಕೀಯ ದುರುದ್ದೇಶಗಳಿಗೋಸ್ಕರ ಅಭಿವೃದ್ಧಿಯ ನೆಪವನ್ನೊಡ್ಡಿ ದೇವಸ್ಥಾನಗಳನ್ನು 'ಸರಿಸುವ' ಸಲುವಾಗಿ ಸಾಕಷ್ಟು ಪ್ರಮಾಣದ 'ಆಸಕ್ತಿ'ಯನ್ನು ಹೊಂದಿರುವುದನ್ನು ನೋಡಿ, ಹೇಳಬೇಕಾದವರು ಸುಮ್ಮನಿದ್ದಾರೆ. ಸುಮ್ಮನಿರಬೇಕಾದವರು 'ತಾನು ಮಾಡಿದ್ದೇ ಸರಿ' ಎಂಬ ಧೋರಣೆಯಲ್ಲಿ 'ಮುನ್ನಡೆ'ಯುತ್ತಿದ್ದಾರೆ. 'ನಮ್ಮ ಬದ್ಧತೆ ವಿಚಾರಕ್ಕೋ, ವ್ಯಕ್ತಿಗೋ, ಸ್ವಾರ್ಥಕ್ಕೋ?'
ಕುರುಡು
ಕಾಂಚಾಣ
ಬಳಿಯಿರದ
ನಾವು
ಅಧಿಕಾರ
ಬಲವಾ
ಪಡೆಯದವರು
ನಾವು
ಜನಬಲವನಂತೂ
ಅರಿಯದವರು
ನಾವು
ಯಾವುದನು
ತಾನೇ
ಎದುರಿಸಲು
ಸಾಧ್ಯ?
ಎದುರಿಸಿದರಂತೂ
ಮುಗಿಯಿತು
ಕಥೆ
ಇದೆ
ತಾನೇ
ನಮ್ಮ
ಕೈಲಾಗದವರ
ವ್ಯಥೆ....
ಎಂಬ ನಾನೇ ಬರೆದ ಸಾಲುಗಳ ನೆನಪಾಗಿ, ಎಲ್ಲ ಆಲೋಚನೆಗಳೂ ಹಾಗೆ ವಾಪಸ್ ಹೋಯಿತು.