ಉಜಿರೆಯಲ್ಲಿ ತುಳು ಅಡುಗೆ ಮೇಳ
ತುಳು ಆಹಾರ ಮಳಿಗೆಯಲ್ಲಿ ಕನಿಷ್ಠ 65 ಬಗೆಬಗೆಯ ಅಡುಗೆಗಳನ್ನು ಪ್ರದರ್ಶಿಸಲಾಗುತ್ತಿದೆ. ಇದಕ್ಕಾಗಿಯೇ 45 ಮಳಿಗೆಗಳನ್ನು ತೆರೆಯಲಾಗಿದೆ. ಪುತ್ತೂರು ತಾಲೂಕು ಸಂಪ್ಯದ ಕೆಪಿ ಸೀತಾ ಆಚಾರಿಯವರ ವಿಶೇಷ ಚಟ್ನಿಪುಡಿ ಅನೇಕರ ಗಮನ ಸೆಳೆಯಿತು. ಪೆರಾಲೆ, ನೆಲನೆಕ್ಕರೆ, ನೆಕ್ಕರೆ, ಹೊಂಗರೆ, ಸಾಂಬ್ರಾಣಿ, ತಿಮರೆ, ಬೇವು ಮುಂತಾದ ಎಲೆಗಳನ್ನು ಬಳಸಿ ಮಾಡಿದ ಚಟ್ನಿಪುಟಿಯ ರುಚಿ ಅನೇಕ ತುಳುವರನ್ನೇ ಚಕಿತಗೊಳಿಸಿತು.
ಇದಲ್ಲದೆ, ಕಡಲೆ ಬಜಿಲ್, ಪದಂಜಿ ಬಜಿಲ್, ಮಂಜನೆರೆತ ಗಟ್ಟಿ, ಕಲೆ ಗಸಿ, ಸುಕ್ರುಂಡೆ, ಬನ್ಸ್, ಗೋಳಿಬಜೆ, ಪತ್ರೋಡೆ, ಸೇಮಿಗೆ ಮುಂತಾದ ಅಡುಗೆಗಳು ಸಮ್ಮೇಳನಾರ್ಥಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಉಜಿರೆಯ ಮಹಿಳಾ ಮಂಡಳದ ಜಯಶ್ರೀ ಪ್ರಕಾಶ್ ಅವರು ತಯಾರಿಸಿದ ನನ್ನೇರಿ ಮತ್ತು ಧರ್ಮಸ್ಥಳದ ಬಾಹುಬಲಿ ಸೇವಾ ಸಮಿತಿಯ ಸದಸ್ಯರು ಕುಕ್ ಮಾಡಿದ ಮುಂದಿರ ಗಟ್ಟಿ ಕೂಡ ಜನಮನ ಗೆದ್ದವು.
ಸಮ್ಮೇಳನಾರ್ಥಿಗಳ ಊಟೋಪಚಾರಕ್ಕೆ ತುಳು ಅಡುಗೆ ಶಾಲೆಯಲ್ಲಿ ಭರದ ಕೆಲಸಗಳು ನಡೆದಿವೆ. 30 ಮಂದಿ ಪಾಕಶಾಸ್ರಜ್ಞರು 90 ಮಂದಿ ಸಹಾಯಕರು ಅವಿರತ ಅಡುಗೆ ತಯಾರಿಯಲ್ಲಿ ತೊಡಗಿದ್ದಾರೆ ಎನ್ನುತ್ತಾರೆ ಊಟೋಪಚಾರ ಸಮಿತಿಯ ಸಂಯೋಜಕ ವೆಂಕಟರಮಣ ಹೆಬ್ಬಾರ್. ಇಂದು ಸಮ್ಮೇಳನ ಆರಂಭವಾಗಿದ್ದು ಸುಮಾರು 30 ಸಾವಿರ ಮಂದಿಗೆ ಅಡುಗೆ ಮಾಡಲಾಗಿದೆ. ರುಚಿಯನ್ನು ಇಮ್ಮಡಿಗೊಳಿಸುವ ಅಡಿಕೆ ತಟ್ಟೆಗಳಲ್ಲಿ ಊಟ ತಿಂಡಿ ಬಡಿಸುವುದು ವಿಶೇಷವೆನಿಸಿದೆ.