ನಿಮ್ಮ ರಾಶಿಯಲ್ಲಿ ಯಾವ ಗ್ರಹಗಳು ಅಲೆಯುತ್ತಿವೆ?
* ಆರ್. ಸೀತಾರಾಮಯ್ಯ, ಜೋತಿಷ್ಕರು, ಶಿವಮೊಗ್ಗ
ಗ್ರಹಗಳಿಗೂ ಪರಿಭ್ರಮಣೆ ಇದೆ. ಅವು 12 ರಾಶಿಗಳಲ್ಲಿ ಪರಿಭ್ರಮಿಸುತ್ತಿರುತ್ತವೆ. ಪರಿಭ್ರಮಣೆಯಲ್ಲಿದ್ದು ಉಚ್ಚರಾಶಿಯಲ್ಲಿ ಬಂದಾಗ ಗ್ರಹದ ಶಕ್ತಿ ಹೆಚ್ಚಾಗಿ, ಹೆಚ್ಚಿನ ಶುಭಫಲಗಳನ್ನು ನೀಡುತ್ತವೆ. ಹಾಗೆಯೇ, ನೀಚರಾಶಿಗೆ ಬಂದಾಗ ತನ್ನ ಶಕ್ತಿಯನ್ನು ಕಳೆದುಕೊಂಡು, ಅಶುಭಫಲವನ್ನು ನೀಡುತ್ತವೆ.
ರವಿ ಮೇಷ ರಾಶಿಯಲ್ಲಿ ಉಚ್ಚ, ತುಲಾರಾಶಿಯಲ್ಲಿ ನೀಚನಾಗುತ್ತಾನೆ. ಚಂದ್ರನು ವೃಷಭರಾಶಿಯಲ್ಲಿ ಉಚ್ಚ, ವೃಶ್ಚಿಕರಾಶಿಯಲ್ಲಿ ನೀಚನಾಗುತ್ತಾನೆ. ಕುಜನು ಮಕರ ರಾಶಿಯಲ್ಲಿ ಉಚ್ಚ, ಕಟಕರಾಶಿಯಲ್ಲಿ ನೀಚನಾಗುತ್ತಾನೆ. ಬುಧನು ಕನ್ಯಾರಾಶಿಯಲ್ಲಿ ಉಚ್ಚ , ಮೀನರಾಶಿಯಲ್ಲಿ ನೀಚನಾಗುತ್ತಾನೆ. ಗುರು ಕಟಕರಾಶಿಯಲ್ಲಿ ಉಚ್ಚ, ಮಕರ ರಾಶಿಯಲ್ಲಿ ನೀಚನಾಗುತ್ತಾನೆ. ಶುಕ್ರನು ಮೀನರಾಶಿಯಲ್ಲಿ ಉಚ್ಚ, ಕನ್ಯಾರಾಶಿಯಲ್ಲಿ ನೀಚನಾಗುತ್ತಾನೆ. ಶನಿ ತುಲಾರಾಶಿಯಲ್ಲಿ ಉಚ್ಚ, ಮೇಷರಾಶಿಯಲ್ಲಿ ನೀಚನಾಗುತ್ತಾನೆ. ರಾಹು ವೃಷಭರಾಶಿಯಲ್ಲಿ ಉಚ್ಚ, ವೃಶ್ಚಿಕರಾಶಿಯಲ್ಲಿ ನೀಚನಾಗುತ್ತಾನೆ. ಕೇತು ವೃಶ್ಚಿಕರಾಶಿಯಲ್ಲಿ ಉಚ್ಚ , ವೃಷಭರಾಶಿಯಲ್ಲಿ ನೀಚನಾಗುತ್ತಾನೆ.
ಗುರು 30-07-09ರಿಂದ ಪುನಃ ಮಕರ ರಾಶಿಗೆ ವಕ್ರಿಯಾಗಿ ಬಂದು, ನೀಚಸ್ಥಾನದಲ್ಲಿದ್ದಾನೆ. ಕುಜ 05-10-09ರಂದು ಕಟಕರಾಶಿಗೆ ಪ್ರವೇಶಿಸಿ, ನೀಚಸ್ಥಾನದಲ್ಲಿದ್ದಾನೆ. ಶುಕ್ರ 10-10-09ರಂದು ಕನ್ಯಾರಾಶಿಗೆ ಪ್ರವೇಶಿಸಿ, ನೀಚಸ್ಥಾನದಲ್ಲಿರುತ್ತಾನೆ. ರವಿಯು 17-10-09ರಂದು ತುಲಾರಾಶಿಗೆ ಪ್ರವೇಶಿಸಿ, ನೀಚಸ್ಥಾನದಲ್ಲಿರುತ್ತಾನೆ. ಚಂದ್ರನು 20-10-09ರಂದು ಮದ್ಯಾಹ್ನ 3-11 ಗಂಟೆಗೆ ವೃಶ್ಚಿಕ ರಾಶಿಗೆ ಪ್ರವೇಶಿಸುವುದರೊಂದಿಗೆ ನೀಚಸ್ಥಾನದಲ್ಲಿದ್ದು ಒಟ್ಟಿಗೆ ರವಿ, ಚಂದ್ರ, ಕುಜ, ಗುರು, ಶುಕ್ರ ಈ 5 ಗ್ರಹಗಳು ನೀಚಸ್ಥಾನಗಳಲ್ಲಿರುತ್ತಾರೆ.
ಚಂದ್ರನು 22-1-09ರ ಮಧ್ಯರಾತ್ರಿ 12-23 ಗಂಟೆಗೆ ಧನಸ್ಸು ರಾಶಿಗೆ ಪ್ರವೇಶಿಸುವುದರೊಂದಿಗೆ ಈ ಪ್ರಕ್ರಿಯೆ ಮುಗಿಯುತ್ತದೆ. ಉಳಿದ ನಾಲ್ಕು ಗ್ರಹಗಳಾದ ರವಿ, ಕುಜ, ಶುಕ್ರ, ಗುರು ನೀಚರಾಶಿಯಲ್ಲಿ ಮುಂದುವರೆಯುತ್ತವೆ. 03-11-09ರಂದು ರಾತ್ರಿ 12-09 ಗಂಟೆಗೆ ಶುಕ್ರನು ತುಲಾ ರಾಶಿಗೆ ಪ್ರವೇಶಿಸುವುದರೊಂದಿಗೆ ರವಿಗೆ ನೀಚಭಂಗರಾಜಯೋಗ ಉಂಟಾಗುತ್ತದೆ.
20-10-09ರಿಂದ 22-10-09ರ ಮಧ್ಯರಾತ್ರಿಯವರೆಗೆ ಈ ಐದೂ ಗ್ರಹಗಳು ನೀಚರಾಶಿಯಲ್ಲಿದ್ದು ತಮ್ಮ ತಮ್ಮ ಶಕ್ತಿಯನ್ನು (ಬಲ) ಕಳೆದುಕೊಂಡ ಗ್ರಹಗಳಾಗಿರುತ್ತವೆ. ರವಿ, ಗುರು, ಕುಜ ಪುರಷ ಗ್ರಹಗಳಾಗಿದ್ದು ಚಂದ್ರ, ಶುಕ್ರ ಸ್ತ್ರೀ ಗ್ರಹಗಳಾಗಿರುತ್ತವೆ. ಈ ಅವಧಿಯಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಬಾರದು. ಶುಭ ಕಾರ್ಯಗಳು ಈ ಮೊದಲೇ ನಿಗದಿಯಾಗಿದ್ದಲ್ಲಿ ಮುಂದೂಡುವುದು ಸೂಕ್ತ. ಏಕೆಂದರೆ, ಶುಭ ಗ್ರಹಗಳಾದ ಗುರು ಮತ್ತು ಶುಕ್ರರು ನೀಚಸ್ಥಾನಗಳಲ್ಲಿದ್ದು ತಮ್ಮ ಪ್ರಭಾವ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಮಾಡುವ ಕಾರ್ಯಗಳು ನಿಷ್ಪಲವಾಗುತ್ತದೆ.
ನೀಚರವಿಯಿಂದ ಸರ್ಕಾರದ ಕೆಲಸ ಕಾರ್ಯಗಳಲ್ಲಿ ವಿಳಂಬ, ಆಡಳಿತ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಗುರು ನೀಚನಾಗಿರುವುದರಿಂದ ಶುಭ ಕಾರ್ಯಗಳು ಹಿನ್ನಡೆ, ಸ್ಥಗಿತ ಅಥವಾ ಕಾರ್ಯಗಳು ಕೈಗೊಡದಿರುವಿಕೆ ಆಗುತ್ತದೆ. ಕುಜ ನೀಚನಾಗಿರುವುದರಿಂದ ರಕ್ಷಣೆಯಲ್ಲಿ ಹಿನ್ನಡೆ, ಬಯೋತ್ಪಾದಕರ ಚಟುವಟಿಕೆ ಹೆಚ್ಚಾಗುತ್ತದೆ. ಕೈಗಾರಿಕಾ, ಗಣಿ ಅಭಿವೃದ್ಧಿ ಕುಂಟಿತವಾಗುತ್ತದೆ. ಶುಕ್ರ ನೀಚನಾಗಿರುವುದರಿಂದ ಕಲಾಕ್ಷೇತ್ರದಲ್ಲಿ ಅಭಿವೃದ್ಧಿ ಹಿನ್ನಡೆ. ನೀಚಚಂದ್ರನಿಂದ ನೀಚಬುದ್ಧಿ ಹೆಚ್ಚಾಗುತ್ತದೆ. ಮನಸ್ಸು ಸ್ಥಿಮಿತದಲ್ಲಿರುವುದಿಲ್ಲ. ಎಚ್ಚರತಪ್ಪಿದರೆ, ವಾಹನ ಅಪಘಾತಗಳು ಹೆಚ್ಚಾಗಿ ಪ್ರಾಣಹಾನಿ ಉಂಟಾಗುತ್ತದೆ. ಈ ವೇಳೆಯಲ್ಲಿ ಜನಿಸುವ ಮಕ್ಕಳ ಅಭಿವೃದ್ಧಿ ಕುಂಟಿತವಾಗುತ್ತದೆ. ಶಸ್ತ್ರ ಪ್ರಸೂತಿ ಮುಂದೂಡುವುದು ಸೂಕ್ತ.
ಲೇಖಕರ ವಿಳಾಸ : ಆರ್. ಸೀತಾರಾಮಯ್ಯ,ಜೋತೀಷ್ಕರು,"ಕಮಲ", 5 ನೇ ತಿರುವು, ಬಸವನಗುಡಿ, ಶಿವಮೊಗ್ಗ -577201: ಮೊಬೈಲ್ 94490 48340. ದೂರವಾಣಿ: 08182-227344