ಇದೂ ಕೂಡ ಭಾರತದಲ್ಲಿ ಮಾತ್ರ ಸಾಧ್ಯ
ಕೆಲವರಿಗೆ ಭಾರತದಲ್ಲಿನ ಭ್ರಷ್ಟಾಚಾರ, ಜಾತಿ ವ್ಯವಸ್ಥೆ, ಬಡತನದ ಬಗ್ಗೆ ಬರೆದು ಕಡೆಯಲ್ಲಿ ತಮ್ಮ ಅಂಕಿತವನ್ನು ಇವೆಲ್ಲ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ ಎಂದು ಬರೆಯುವುದು ರೂಢಿ. ಹಾಗೆಯೇ ಲೆಕ್ಕವಿಲ್ಲದಷ್ಟು ಒಳ್ಳೆಯ ಕೆಲಸಗಳೂ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ ಎಂಬುದು ಜಗತ್ತಿಗೇ ಗೊತ್ತಿರುವ ವಿಷಯ.
ರಾಜ್ಯದಲ್ಲಿ ನಡೆಯುತ್ತಿರುವ ನೆರೆ ಪರಿಹಾರದ ಕುರಿತಾಗಿನ ಪಾದಯಾತ್ರೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳ ಕುರಿತು, ಮೊನ್ನೆ ನನ್ನ ಸ್ನೇಹಿತರ ಜತೆಗೆ ಅಮೆರಿಕಾದಿಂದ ಬಂದಂತಹ ವ್ಯಕ್ತಿಯೊಬ್ಬರು ಅತ್ಯಂತ ಹರ್ಷದಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಾಗ ನಮ್ಮ ದೇಶದ ಬಗೆಗೆ ಹೆಮ್ಮೆಯ ವಿದ್ಯುತ್ ಸಂಚಾರವಾಯಿತು.
"ನಮ್ಮ ದೇಶದಲ್ಲೂ ಹಿಂದೊಮ್ಮೆ ಪ್ರಕೃತಿ ವಿಕೋಪ ಎದುರಾದಾಗ, ಸಹಾಯ ಕೇಳಲು ಬಂದಂತಹ ಯುವತಿಯನ್ನು ಅನುಚಿತ ವರ್ತನೆಯಿಂದ ಅಮಾನುಷ ರೀತಿಯಲ್ಲಿ ಕೊಲೆ ಮಾಡಿದ್ದರು. ಆ ಸಮಯದಲ್ಲಿ ಆ ಬಗ್ಗೆ ಅಳುವವರಿರಲಿ, ಚಿಂತಿಸುವವರೂ ಇರಲಿಲ್ಲ. ಅತಿಯಾದ ಆಧುನಿಕತೆ ಹಾಗೂ ಶ್ರೀಮಂತಿಕೆಗೋಸ್ಕರ ಮಾನವೀಯತೆಯನ್ನೇ ಬಲಿಕೊಡುತ್ತಿದೆ ಅಮೆರಿಕ. ನಮ್ಮಲ್ಲಿ ಹಣವನ್ನು ಅಧಿಕವಾಗಿ ನೀಡಬಹುದು. ಆದರೆ ಇಲ್ಲಿ ಹಣ ನೀಡುವವರ, ಅದನ್ನು ಕರ್ತವ್ಯವೆಂಬಂತೆ ಅರ್ಥೈಸಿಕೊಳ್ಳುವವರ ಸಂಖ್ಯೆ ಅಧಿಕ. ಉಳಿದ ಎಲ್ಲ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಾತ್ರ ಮಾನವೀಯತೆಗೆ ಕೊರತೆಯಿಲ್ಲ. ರಿಯಲಿ ಐ ಲೈಕ್ ಯುವರ್ ಇಂಡಿಯಾ" ಎಂದು ಅವರು ಕೆಲ ಹೊತ್ತು ಭಾರತದ ಬಗ್ಗೆ ಒಳ್ಳೆಯ ಮಾತನ್ನಾಡುತ್ತಿರುವಾಗ ದೇಶದ ಬಗೆಗೆ ಖುಷಿಯಾಗುತ್ತಿತ್ತು, ನನಗೇ ಗೊತ್ತಿಲ್ಲದಂತೆ ಕೊರಳುಬ್ಬಿಬಂದಿತ್ತು.
ನೆರೆ ಪರಿಹಾರದಡಿಯಲ್ಲಿ ಸರ್ಕಾರ ಖುದ್ದಾಗಿ ಬೀದಿಗಿಳಿದಿದೆ. ವಿರೋಧ ಪಕ್ಷಗಳೂ ನಾವೇನೂ ಕಡಿಮೆಯಿಲ್ಲ ಎಂಬಂತೆ, ತಮ್ಮ ಎಂದಿನ ಟೀಕಾಪ್ರಹಾರಗಳನ್ನು ಬದಿಗಿರಿಸಿ, ಪರಿಹಾರ ಕಾರ್ಯದಲ್ಲಿ ಸ್ಪರ್ಧೆಗಿಳಿದಿವೆ. ಶ್ರೀಸಾಮಾನ್ಯನಿಂದ ಹಿಡಿದು ಸಂಘಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಹಾಲು ಮಾರುವವರು, ಪತ್ರಿಕೆ ಹಾಕುವವರು, ತರಕಾರಿ ಮಾರುವವರು, ಆಟೋ ಚಾಲಕರು, ಚಮ್ಮಾರರು ತಮ್ಮ ಕೈಜೋಡಿದ್ದಾರೆ. ಶಾಲೆಗೆ ಹೋಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತನ್ನ ಪಾಕೆಟ್ ಮನಿಯನ್ನು ಪರಿಹಾರ ಕಾರ್ಯಕ್ಕೆ ನೀಡುತ್ತಿದ್ದಾರೆ. ಮಠಾಧಿಪತಿಗಳು ಪಾದಯಾತ್ರೆಗೆ ಇಳಿದಿದ್ದಾರೆ. ಹೀಗೆ ಇಡೀ ಸಮಾಜವೇ ಒಕ್ಕೊರಲಿನಿಂದ ಪರಿಹಾರ ಕಾರ್ಯದಲ್ಲಿ ತೊಡಗಿವೆ. ಈ ಮಟ್ಟದ ಮಾನವೀಯತೆಯ ಮೈವೆತ್ತ ರೂಪ ಭಾರತದಲ್ಲಲ್ಲದೇ ಮತ್ತೆಲ್ಲಿ ಕಾಣಲು ಸಾಧ್ಯ?
ಯಸ್, ಧಿಸ್ ಹ್ಯಾಪನ್ಸ್ ಓನ್ಲಿ ಇನ್ ಇಂಡಿಯಾ.