ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಕ್ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಜವಾಬ್ದಾರಿ

By * ಪ್ರಕಾಶ್ ಉಪಾಧ್ಯಾಯ, ಚಿಕ್ಕಮಗಳೂರು
|
Google Oneindia Kannada News

Breaking news
ಭಾರತ ಸಂವಿಧಾನದಲ್ಲಿ ಪತ್ರಿಕೋದ್ಯಮವನ್ನು ಸಂವಿಧಾನದ ನಾಲ್ಕನೇ ಸ್ತಂಭ ಎಂದು ಕರೆಯುತ್ತಾರೆ . ಪತ್ರಿಕೆ ಈ ಸಮಾಜದ ಕೈಗನ್ನಡಿ. ಮಾಧ್ಯಮಕ್ಕೆ ಸ್ವತಂತ್ರವಿಲ್ಲವಾದರೆ ಹಲ್ಲು ಕಿತ್ತ ಹಾವಿನ ಹಾಗೆ ಇರುತ್ತಿತ್ತು. ಸರ್ಕಾರದ ಆಡಳಿತ, ಯೋಜನೆಗಳು ಎಲ್ಲ ಲೋಪದೋಷಗಳನು ಎತ್ತಿಹಿಡಿಯಬೇಕೆಂದು ನಮ್ಮ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ರಾಜಕಾರಣಿಗಳು, ಪ್ರಭಾವಶಾಲಿ ವ್ಯಕ್ತಿಗಳು ಅನ್ಯಾಯ, ಅಕ್ರಮಗಳನ್ನು ಭಯವಿಲ್ಲದೆ ರಾಜಾರೋಷವಾಗಿ ಮಾಡಿ ತಮ್ಮ ಪ್ರಭಾವದಿಂದ ಮರೆಮಾಚಬಾರದೆಂಬ ಕಾರಣಕ್ಕಾಗಿ ಪತ್ರಿಕಾ ಸ್ವಾತಂತ್ರಕ್ಕೆ ಅಂತಹ ಸ್ಥಾನವನ್ನು ಕೊಟ್ಟಿದ್ದರು.

ಮಾಧ್ಯಮ ಸ್ವಾತಂತ್ರವನ್ನು ದೇಶದ ಅಂತರಿಕ ಭದ್ರತೆಗೆ, ದೇಶದ ಸಾರ್ವಭೌಮತ್ವಕ್ಕೆ ಮತ್ತು ಐಕ್ಯತೆ ಧಕ್ಕೆ ತರುವಂಥ ಸಂದರ್ಭ ಒದಗಿದಾಗ ನಿಷೇಧಿಸಬಹುದಾಗಿದೆ. 1975ರಲ್ಲಿ ಭಾರತ ಸರ್ಕಾರ ಎಮರ್ಜೆನ್ಸಿ ಘೋಷಣೆ ಮಾಡಿದಾಗ ಈ ಸ್ವಾತಂತ್ರವನ್ನು ಕಸಿದುಕೊಂಡಿತ್ತು. ಸರ್ಕಾರದ ವಿರುದ್ಧ ಯಾವ ಮಾಧ್ಯಮವು ಬರೆಯುವ ಹಾಗೆ ಇರಲಿಲ್ಲ. ಎಲ್ಲವನ್ನು ಸೆನ್ಸಾರ್ ಮಾಡಲಾಗಿತ್ತು. ಆದರೆ ಅದೇ ಮಾಧ್ಯಮದಿಂದ ಈ ಸಮಾಜಕ್ಕೆ ಏನಾದರು ದುಷ್ಪರಿಣಾಮವಾದರೆ? ಮಾಧ್ಯಮಕ್ಕೆ ಬೌಂಡರಿ ಇಲ್ಲವಾದರೂ ಅದು ತನ್ನದೇ ಆದ ಜವಾಬ್ದಾರಿಯನ್ನು ಹೊಂದಿದೆ. ಅದು ಒಂದು ಸಮಸ್ಯೆಯನ್ನು ಸಮಾಜಕ್ಕೆ ಹೇಳಬಹುದು ಆದರೆ ಅದೇ ಸಮಸ್ಯೆಯನ್ನು ತೋರಿಸಿ ಇನೊಂದು ಸಮಸ್ಯೆಗೆ ದಾರಿ ಮಾಡಿಕೊಡಬಾರದು.

ಕೆಲವೊಮ್ಮೆ ಸುದ್ದಿಯನ್ನು ತಿಳಿಸುವ ಬದಲು ಆ ಸುದ್ದಿಯನ್ನು ರಾರಾಜಿಸಿ ಪ್ರಚೋದನೆ ಮಾಡುವ ಮಟ್ಟಕ್ಕೆ ಮಾಧ್ಯಮಗಳು ಪ್ರಚಾರ ಮಾಡುತ್ತವೆ. ಹಿಂದೆಯೆಲ್ಲ ಕೋಮುಗಲಭೆಗೆ ಜಾಸ್ತಿ ಒತ್ತು ಕೊಡದೆ ಅದನ್ನು ಅಷ್ಟಕ್ಕೆ ಬಿಡುತ್ತಿದ್ದರು. ಆದರೆ ಇತ್ತೀಚಿನ ವರ್ಷದಲ್ಲಿ breaking news ಕೊಡುವ ತವಕದಲ್ಲಿ ಸುದ್ದಿವಾಹಿನಿಗಳು ಕೋಮುಗಲಭೆಯನ್ನು ಅತಿರಂಜಿತವಾಗಿ ತೋರಿಸಿ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ. ಉದಾಹರಣೆಗೆ: ಹಿಂದೂ-ಮುಸ್ಲಿಂ ಸಮಸ್ಯೆಯನ್ನು ರಸವತ್ತಾಗಿ ತೋರಿಸಿದರೆ ಎಲ್ಲಡೆ ಇದರ ದುಷ್ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಎಷ್ಟೋ ಊರುಗಳಲ್ಲಿ ಕಾರಣವಿಲ್ಲದೆಯೇ ಗಲಭೆ ಸಂಭವಿಸುತ್ತದೆ.

ಇತ್ತೀಚೆಗೆ ಉಡುಪಿ ಶಾಸಕರ ಪತ್ನಿ ಯಾರೊಡನೆಯೋ ಊರುಬಿಟ್ಟು ಹೋದರು, ಅದಕ್ಕೆ ಮಾಧ್ಯಮದವರು ದೇಶಾದ್ಯಂತ ಪ್ರಚಾರ ಕೊಟ್ಟರು, ಶಾಸಕರಪತ್ನಿ ಕೊನೆಗೆ ನೇಣಿಗೆ ಶರಣಾದರು. ನಾನು ಈ ಸುದ್ದಿಯನ್ನು ಬಿತ್ತರಿಸಿದ್ದು ತಪ್ಪೆಂದು ಹೇಳುತ್ತಿಲ್ಲ ಆದರೆ ಅದನ್ನು ಅಷ್ಟು ಪ್ರಚಾರ ಕೊಟ್ಟು ತೋರಿಸುವ ಅವಶ್ಯಕತೆ ಇರಲಿಲ್ಲ ಎಂದು ಭಾವಿಸುತ್ತೇನೆ. ಇದರ ಮಧ್ಯೆ ನಮ್ಮ ಗೃಹ ಸಚಿವರು ವಿಎಸ್ ಆಚಾರ್ಯ ಅವರು ಮಾಧ್ಯಮಗಳಿಗೆ Ombudsman ಜಾರಿಗೆ ತರುವುದಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡರು.

ಮೊನ್ನೆ ಮೈಸೂರಿನಲ್ಲಿ ನಡೆದ ಮತೀಯ ಗಲಭೆ ಈ ಲೇಖನ ಬರೆಯುವುದಕ್ಕೆ ಪ್ರಮುಖ ಪ್ರೇರಣೆ. ಈ ಗಲಭೆಯನ್ನು ಮಾಧ್ಯಮಗಳು ವಿನಾಕಾರಣ ಸುದ್ದಿಯನ್ನು ರಂಜಿಸದೆ ಕೋಮುಗಲಭೆ ಎಂದು ತೋರಿಸಿದರು. ಈ ಸುದ್ದಿ ಎಷ್ಟೋ ಜನಕೆ ಅರಿವಿಲ್ಲದಿರುವುದು ಸುದ್ದಿ ಹರಡದಿರಲು ಸಹಕಾರಿಯಾಯಿತು. ಮೈಸೂರು ದಾಟಿ ಈ ಸಮಸ್ಯೆ ಎಲ್ಲೂ ಪರಿಣಾಮ ಬೀರಲಿಲ್ಲ. ಎಲ್ಲ ಪ್ರಮುಖ ಸುದ್ದಿವಾಹಿನಿಗಳು TV9, ಸುವರ್ಣ, ನ್ಯಾಷನಲ್ ನ್ಯೂಸ್ ಚಾನೆಲ್ ಗಳಾದ Times Now ಕೂಡ ಕೋಮುಗಲಭೆ ಎಂದು ತೋರಿಸಿದರೆ CNN ಮಾತ್ರ "ಮಂದಿರ-ಮಸೀದಿ ಸಮಸ್ಯೆ ಮತ್ತೆ ಶುರು" ಎಂದು ಬಿತ್ತರಿಸಿತು. ಅದೃಷ್ಟವಶಾತ್ ಈ ಸಮಸ್ಯೆ ಅಲ್ಲಿಗೆ ಮುಗಿಯಿತು. ಹೀಗೆಯೇ ಮಾಧ್ಯಮದವರು ತಮ್ಮ ಜವಾಬ್ದಾರಿಯನ್ನು ಅರಿತು ಸುದ್ದಿ ಅರುಹಿದರೆ ಎಷ್ಟೋ ಸಮಸ್ಯೆಗಳು ಹುಟ್ಟುವಲ್ಲಿಯೇ ಸತ್ತುಹೋಗುತ್ತವೆ. ಅಲ್ಲವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X