ಬೆಂಗಳೂರು ಗೋ ಗ್ರೀನ್...
* ಅರ್ಚನಾ ಹೆಬ್ಬಾರ್, ಬೆಂಗಳೂರು
ಪರಿಸರ ದಿನಾಚರಣೆಯ ಮುಂದುವರಿದ ಕಾರ್ಯಕ್ರಮವಾಗಿ ಒರಾಕಲ್ ಸಂಸ್ಥೆಯ ಪರಿಸರ ಪ್ರೇಮಿ ಉದ್ಯೋಗಿಗಳು 'ಇಕೋ ವಾಚ್' ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 600 ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಬಳಿಯ ಆವಲಹಳ್ಳಿ ಕೆರೆಯಲ್ಲಿ ಜೂನ್ 15ರ ನಂತರದ ವಾರಾಂತ್ಯದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರನ್ನು ಹಸಿರಾಗಿಸಲು ಇದೊಂದು ಪುಟ್ಟ ಹೆಜ್ಜೆ. ಇಕೋ ವಾಚ್ ಸಂಸ್ಥೆ 'ಗೋ ಗ್ರೀನ್' ಯೋಜನೆಯ ಅಂಗವಾಗಿ ಮೊದಲ ಹಂತದ ಗಿಡ ನೆಡುವ ಕಾರ್ಯಕ್ರಮವನ್ನು ಜೂನ್ 6ರಂದು ಹಮ್ಮಿಕೊಂಡಿದ್ದರು. ಕಳೆದ ಶನಿವಾರ ಆಲ್ ಇಂಡಿಯಾ ರೇಡಿಯೋದ 'ಇಕೋ ಎಜ್ಯುಕೇಶನ್ ಸೆಂಟರಿನಲ್ಲಿ ಸುಮಾರು 100 ಗಿಡಗಳನ್ನು ನೆಡುವ ಮೂಲಕ 'ಗೋ ಗ್ರೀನ್' ಯೋಜನೆಗೆ ಚಾಲನೆ ನೀಡಲಾಯಿತು. ಈ ಗಿಡನೆಡುವ ಕಾರ್ಯಕ್ರಮದಲ್ಲಿ ಒರಾಕಲ್ ಕಂಪನಿಯ 40ಕ್ಕೂ ಹೆಚ್ಚಿನ ಉದ್ಯೋಗಿಗಳು ಸಂಸಾರ ಸಮೇತರಾಗಿ ಭಾಗವಹಿಸಿದ್ದರು. ಮುಂಬರುವ ವಾರಾಂತ್ಯಗಳಲ್ಲಿ ಮತ್ತಷ್ಟು ಗಿಡಗಳನ್ನು ನೆಡುವ ಉದ್ದೇಶ ಇಕೋ ವಾಚ್ ಸಂಸ್ಥೆ ಹೊಂದಿದೆ.
ಶನಿವಾರದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಕೋ ವಾಚ್ ಮುಖ್ಯಸ್ಥರಾಗಿರುವ ಚಿತ್ರನಟ ಮತ್ತು ಪರಿಸರವಾದಿ ಸುರೇಶ ಹೆಬ್ಳೀಕರ್ ಅವರು "ಬಹಳಷ್ಟು ಸಂಸ್ಥೆಗಳು ಪರಿಸರ ಸ್ನೇಹಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿವೆ. ಪರಿಸರ ರಕ್ಷಣೆಗೆ ಇದು ಅತ್ಯಗತ್ಯ. ಇದಕ್ಕೆ ಪ್ರತಿಯೊಬ್ಬರ ಸಹಕಾರದ ಅವಶ್ಯಕತೆಯಿದೆ. ಪರಿಸರದಲ್ಲಿ ನಾವು ಬಹು ಮುಖ್ಯವಾಗಿ ಕಾಯ್ದುಕೊಂಡು ಬರಬೇಕಾದ್ದು ನೀರು ಮತ್ತು ಜೀವ ವೈವಿಧ್ಯ. ಈ ನಿಟ್ಟಿನಲ್ಲಿ ಬೆಂಗಳೂರು ಮತ್ತು ಸುತ್ತಮುತ್ತ ಒಂದು ಮಿಲಿಯನ್ ಗಿಡ ನೆಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ" ಎಂದು ನುಡಿದರು.