ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥೆ ಬರಿಯದೆಯೇ ಕನಸು ಕಟ್ಟಿಕೊಟ್ಟ ಪುಟ್ಟಣ್ಣ

By * ಕೆ.ಆರ್.ರವೀಂದ್ರ
|
Google Oneindia Kannada News

Creativity personified Puttanna Kanagal
ಸಿನಿಮಾ ಒಂದು ಕ್ರಿಯೆಟೀವ್ ಫೀಲ್ಡ್ ಎಂದು ಪ್ರತಿಯೊಬ್ಬರು ಹೇಳುತ್ತಾರೆ. ಆದರೆ, ಅದು ಎಷ್ಟರಮಟ್ಟಿಗೆ ಈ ದಿನ ಕ್ರಿಯಾಶೀಲವಾಗಿದೆ ಎಂಬುವುದೆ ಪ್ರಶ್ನೆ? ಪುಟ್ಟಣ್ಣನವರು ತಮ್ಮ ಯಾವುದೇ ಸಿನಿಮಾಗೆ ಕತೆನೇ ಬರೆದವರಲ್ಲ, ಬದಲಾಗಿ ಸಾಮಾಜಿಕ ಕಾದಂಬರಿಗಳನ್ನು ಸಿನಿಮಾವಾಗಿಸಿ ಅದಕ್ಕೊಂದು ಹೊಸ ಆಯಾಮ ನೀಡಿದವರು. ಪುಟ್ಟಣ್ಣನವರಂಥ ಕನಸುಗಾರ, ತ.ರಾ.ಸು ಅವರ ಕನಸಿನ ನಾಗರಹಾವು ಕಾದಂಬರಿಯನ್ನು ನಾಗರಹಾವು ಚಿತ್ರವಾಗಿಸಿ ಅದನ್ನು ತ.ರಾ.ಸು ಅವರಿಗೆ ತೋರಿಸಿದಾಗ, ತ.ರಾ.ಸು ಹೇಳಿದ್ದು ಇದು ನಾಗರಹಾವಲ್ಲ, ಕೆರೆಹಾವು... ಅಂತ. ಅಂದರೆ ಇಲ್ಲಿ ನಾವು ಗಮನಿಸಬೇಕಾದ ಅಂಶ ತ.ರಾ.ಸು ತಮ್ಮ ಕಾದಂಬರಿಯಲ್ಲಿ ಕಟ್ಟಿಕೊಂಡಿದ್ದ ಕನಸುಗಳು, ಅವರ ತುಡಿತ ಎಲ್ಲಿ ಹೇಗಿತ್ತು, ಅದನ್ನು ದೃಶ್ಯರೂಪಕದಲ್ಲಿ ಪಾತ್ರಗಳನ್ನು ನೋಡಿದಾಗ ಅವರ ಆಲೋಚನೆಗೆ ಹೊರತಾದ ರೂಪದಲ್ಲಿ ಅದನ್ನು ಕಂಡಾಗ ಅದು ಎಷ್ಟರಮಟ್ಟಿಗೆ ಅವರ ಭಾವುಕತೆ ವಿರುದ್ದವಾಗಿ ಕಂಡಿಬರಬಹದು? ಇಲ್ಲದೆ ಹೋದರೆ ನಾಗರಹಾವು ಎಂಬ ಒಂದು ಇಂದಿಗೂ ಅದ್ಭುತವಾದ ಪುಟ್ಟಣ್ಣನವರ ಸಿನಿಮಾ ಲೇಖಕನ ಕಣ್ಣಲ್ಲಿ ಕೆರೆಹಾವಾಗಿ ಕಾಣುವಂತಾಗಲು ಸಾಧ್ಯವೆ?

ಒಂದು ಕಾದಂಬರಿಯನ್ನು ಸಿನಿಮಾ ಮಾಡುವುದು ಅಷ್ಟೊಂದು ಸುಲಭದ ಸಂಗತಿ ಅಲ್ಲ. ಅದನ್ನು ಓದುಗನಾಗಿ ಸ್ವೀಕರಿಸಿದ ಜನರು, ಅಲ್ಲಿ ಬರುವ ಪಾತ್ರಗಳಿಗೆ ಅವರದೇ ಆದ ಒಂದು ಬಣ್ಣ, ರೂಪ, ಆಕಾರ ನೀಡಿರುತ್ತಾರೆ. ಅದನ್ನು ಸಿನಿಮಾ ಮಾಡಿದಾಗ ಅದನ್ನು ನೋಡುಗನಾಗಿ ಅನುಭವಿಸುವಾಗ ಅವನಿಗೆ ತಾನು ಓದಿದ್ದಾಗ ಕಣ್ಣ ಮುಂದೆ ನಡೆದಾಡಿದ ದೃಶ್ಯಕ್ಕಿಂತ ಭಿನ್ನವಾಗಿ ಕಂಡಾಗ ಮಾತ್ರ ಅದು ಅವನಿಗೆ ಇಷ್ಟವಾಗುತ್ತೆ. ಇಲ್ಲದೆ ಹೋದರೆ ಅದು ಅವನಿಗೆ ರುಚಿಸುವುದಿಲ್ಲ. ಅಂದರೆ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಒಂದು ರೂಪದಲ್ಲಿ ವಸ್ತುವನ್ನು ನೋಡುತ್ತಾರೆ. ಆದರೆ ಅಂತಿಮವಾಗಿ ಅದಕ್ಕೆ ಜೀವ ನೀಡಿದಾಗ ಅದು ಆಡುವ ಭಾಷೆ, ಭಾವುಕತೆ ಅದು ಅಲ್ಲಿ ಮುಖ್ಯವಾಗುತ್ತೆ.

ಇದು ಕೇವಲ ಕಾದಂಬರಿ ಆಧಾರಿತ ಸಿನಿಮಾಗಳಿಗೆ ಮಾತ್ರ ಅನ್ವಯಿಸಿ ಹೇಳುತ್ತಿಲ್ಲ, ಒಂದು ಕತೆಯನ್ನು ನಿರ್ದೇಶಕರೇ ಹೆಣೆದು ಸಿನಿಮಾ ಮಾಡಿದರೂ ಅಲ್ಲಿ ಅಂತಹದೊಂದು ಕನಸು, ಆಶಯ ಅಭಿವ್ಯಕ್ತವಾಗಲೇಬೇಕು. ಸಿನಿಮಾವನ್ನು ನೋಡುವ ಪ್ರತಿಯೊಬ್ಬ ಒಬ್ಬ ವಿಮರ್ಶಕನೇ ಸರಿ (ಹಾಗೇಯೆ ಪ್ರತಿಯೊಬ್ಬ ಓದುಗ ಒಬ್ಬ ವಿಮರ್ಶಕನೇ). ಸಿನಿಮಾ ನೋಡಿ ಹೊರಬಂದಮೇಲೆ ಪ್ರತಿಯೊಬ್ಬರು ಅವರವರ ಆಲೋಚನೆಗಳಿಗೆ ಅನುಗುಣವಾಗಿ ವಿಮರ್ಶೆ ಮಾಡುತ್ತಾರೆ. ಆದರೆ, ನಾವು ಒಂದು ವಿಮರ್ಶೆ ಮಾಡಿದಷ್ಟು ಸುಲಭವಾಗಿ ಸಿನಿಮಾ (ಅಥವಾ ಕತೆ) ಮಾಡಲು ಸಾಧ್ಯವಿಲ್ಲ. ವಿಮರ್ಶೆ ಮಾಡಿದಷ್ಟು ಸುಲಭವಾಗಿ ನೀವೊಂದು ಕನಸನ್ನು ಕಂಡು, ಅದಕ್ಕೊಂದು ರೂಪ ನೀಡಿ, ಮತ್ತೊಬ್ಬರ ಮುಂದಿಟ್ಟು ಗೆಲ್ಲಲಾಗದು.

ಖಾಲೀದ್ ಮಹಮ್ಮದ್ ಎಂಬ ಖ್ಯಾತ ಹಿಂದಿ ಸಿನಿಮಾ ವಿಮರ್ಶಕ, ಅನೇಕ ಸಿನಿಮಾಗಳನ್ನು ಅತ್ಯಂತ ಅರ್ಥಪೂರ್ಣವಾದ ರೀತಿಯಲ್ಲಿ ವಿಮರ್ಶಿಸಿದ. ಖಾಲೀದ್‌ಗೆ, ಒಬ್ಬ ವಿಮರ್ಶೆ ಮಾಡಿದಷ್ಟು ಸಲಭವಲ್ಲ ಒಂದು ಸಿನಿಮಾ ಮಾಡುವುದು ಎಂದರು. ಖಾಲೀದ್ ಕೊನೆಗೊಂದು ಸಿನಿಮಾ ಮಾಡಿದರು, ಅದರಲ್ಲಿ ಜಯಾಬಚ್ಚನ್, ಕರೀಷ್ಮಾ ಕಪೂರ್ ಹಾಗೂ ಹೃತಿಕ್ ರೋಷನ್ ನಟಿಸಿದರು, ಅದೇ ಸಿನಿಮಾ ಫೀಜಾ (Fiza) ಒಂದು ಮುಸ್ಲಿಂ ಕುಟುಂಬದ ತಾಯಿ, ಅವಳ ಇಬ್ಬರುಮಕ್ಕಳ ಸುತ್ತಲೂ ಹೆಣೆಯಲಾದ ಕಥಾವಸ್ತುವಿನ ಆ ಸಿನಿಮಾ ಫ್ಲಾಪ್‌ಆಯಿತು. ಖಾಲೀದ್ ಇದುವರಿಗೆ ನಿರ್ದೇಶಿಸಿದ ನಾಲ್ಕು ಚಿತ್ರಗಳು ಕೂಡ ಫ್ಲಾಪ್ ಆಗಿವೆ.

ಒಬ್ಬ ವಿಮರ್ಶಕನಾಗಿ ಸದಾ ಗೆಲ್ಲುತ್ತಿದ್ದ ಮಹಮ್ಮದ್ ಒಬ್ಬ ನಿರ್ದೇಶಕನಾಗಿ ಸೋತ. ಅಂದರೆ ವಿಮರ್ಶೆ ಬಹಳ ಸುಲಭ, ಅದೇ ಒಂದು ಕನಸಿಗೆ (ಕತೆಗೆ) ಜೀವ ತುಂಬುವುದು ಬಹಳ ಪ್ರಯಾಸದ ಕೆಲಸ. ನನ್ನ ದೃಷ್ಟಿಯಲ್ಲಿ ಒಂದು ಒಳ್ಳೆ ಓದುಗ, ಒಬ್ಬ ಪ್ರೇಕ್ಷಕ ಒಳ್ಳೆ ವಿಮರ್ಶಕರಾಗಬಹುದೆ ಹೊರತು, ಒಳ್ಳೆ ಕತೆಗಾರ ಅಥವಾ ಕನಸುಗಾರ (ನಿರ್ದೇಶಕ) ಆಗಲಾರ. ಒಬ್ಬ ಖ್ಯಾತ ನಿರ್ದೇಶಕರ ಬಳಿಗೆ ಸಹಾಯಕನಾಗಿ ಕೆಲಸಕ್ಕೆ ಸೇರಿದ ಒಬ್ಬನಿಗೆ, ಕೆಲವೊಂದು ದಿನಗಳು ನಿರ್ದೇಶನ ಕಲಿತೆ ಮೇಲೆ, ಅವನಿಗೆ ಒಂದು ಶಾಟ್ ತೆಗೆಯಲು ಸೂಚಿಸಿದರು. ಅದರಂತೆ ಅವನು ಮಾಡಿದ. ಗುರುಗಳ ಹತ್ತಿರ ಹೋಗಿ ಹೇಗಿದೆ ಗುರುಗಳೆ ನಾನು ತೆಗೆದ ಶಾಟ್ ಎಂದು ಕೇಳಿದ. ಆಗ ಆ ನಿರ್ದೇಶಕರು ನೀನು ಒಂದು ದೃಶ್ಯ ತೆಗೆಯಲು ತಾಂತ್ರಿಕ ಅಂಶಗಳನ್ನು ಮಾತ್ರ ನಾನು ಕಲಿಸಬಹುದೆ ಹೊರತು, ಅದಕ್ಕೆ ಬೇಕಾದ ತುಡಿತ ಅದು ನಿನ್ನಲ್ಲೇ ಬರಬೇಕು. ಅದು ನಿನ್ನ ಕನಸಲ್ಲಿ ಅರಳಬೇಕು. ನೀನೊಂದು ಶಾಟ್ ತೆಗೆದರೆ ಅದು ನೀನು ಸತ್ತ ಮೇಲೆ ಕೂಡ ಬೇರೆಯವರು ನೆನಸಿಕೋಬೇಕು, ಅದಕ್ಕೆ ಬೇಕಿರುವುದು ಒಂದು ತುಡಿತ ಎಂದರು. ಅಲ್ಲವೇ, ನಾವು ಯಾಕೆ ಪುಟ್ಟಣ್ಣನವರ ಪ್ರತಿಸಿನಿಮಾದ ಒಂದೊಂದು ದೃಶ್ಯವನ್ನು ನೋಡುವಾಗ ಏನೋ ಹೊಸತನವನ್ನು ಕಾಣುತ್ತಲೇ ಇರುತ್ತೇವೆ. ಏಕೆಂದರೆ ಪುಟ್ಟಣ್ಣನವರು ಸಿನಿಮಾವನ್ನು ಸಿನಿಮಾದಂತೆ ನೋಡಿಲಿಲ್ಲ, ಬದಲಾಗಿ ಅದೊಂದು ನಡೆದಾಡುವ ಜೀವದಂತೆ ಅನುಭವಿಸಿದರು. ಸಿದ್ದಲಿಂಗಯ್ಯನವರ ಭೂತಯ್ಯನ ಮಗ ಅಯ್ಯುವಿನ ಕ್ಲೈಮಾಕ್ಸ್ ನಮ್ಮನ್ನು ಯಾಕೆ ಅಷ್ಟೊಂದು ಕಾಡುತ್ತೆ..., ಬಂಗಾರದ ಮನುಷ್ಯ ಅನೇಕರ ಜೀವನವನ್ನು ಯಾಕೆ ಬದಲಾಯಿಸುವಲ್ಲಿ ಯಶಸ್ವಿ ಆಯಿತು...ಇದಕ್ಕೆಲ್ಲಾ ಈ ನಿರ್ದೇಶಕರಲ್ಲಿನ ತುಡಿತ, ಕಲಾವಿದರಲ್ಲಿನ ಭಾವುಕತೆ, ಸಮಾಜಮುಖಿಯಾದ ಆಲೋಚನೆಗಳು ಇದೆಲ್ಲಾ ಒಂದರ್ಥದಲ್ಲಿ ಕನಸಿನ ಚಿತ್ರಗಳು. ಅವು ಎಂದು ಮಾರಾಟದ ಕಲ್ಪನೆಯಲ್ಲಿ(ವ್ಯಾಪಾರಿ ಮನೋಭಾವದಲ್ಲಿ) ಅರಳಿದ ಹೂವುಗಳಲ್ಲ. ಹಿಂದಿನ ಕನ್ನಡದ ಅನೇಕ ಸಿನಿಮಾಗಳು ಸಮಾಜಮುಖಿ ಚಿತ್ರಗಳಾಗಿರುವುದಕ್ಕೆ ಕಾರಣ ಆಗಿನ ನಿರ್ದೇಶಕರಲ್ಲಿ ಸಿನಿಮಾ ಕಡೆಗಿದ್ದ ಅವರ ತುಡಿತ, ಸಮಾಜದಡೆಗೆ ಅವರು ಹೊಂದಿದ್ದ ನಿಲುವುಗಳೇ ಕಾರಣವೆಂದು ಹೇಳಿದರೆ ತಪ್ಪಗಾಲಾರದು.

ಕನಸುಗಳು ಎಂದಿಗೂ ಮಾರಾಟದ ವಸ್ತುವಾಗಲು ಸಾಧ್ಯವಿಲ್ಲ. ಮಾರಾಟಗಾರನಲ್ಲಿ ಕನಸುಗಳು ಇರಬಹುದು, ಆದರೆ, ಕನಸುಗಳೆಂದು ಮಾರಾಟದ ಪರಿಕಲ್ಪನೆಯಲ್ಲಿ ಹುಟ್ಟುವುದ್ದಕ್ಕೆ ಸಾಧ್ಯವೆ ಇಲ್ಲ. ಕನಸುಗಳು ಹುಟ್ಟುವುದೆ ಬದುಕಿನ ಆಲೋಚನೆಗಳಿಂದ. ಕನಸುಗಳ ಆಶಯ ಬದುಕಿಗೊಂದು ಅಥವಾ ಭಾವನೆಗೊಂದು ನಿರ್ದಿಷ್ಟವಾದ ಗುರಿಯನ್ನು ನೀಡಿ, ಅದನ್ನು ಸಫಲವಾಗಿಸುವುದು. ಕನಸು ಕಾಣುವವರು ಜಗತ್ತಿಗೆ ಬೇಕು, ಅದಕ್ಕಿಂತ ಹೆಚ್ಚಾಗಿ ಕನಸುಗಳನ್ನು ಬದುಕಿಸಿಕೊಳ್ಳುವ ಮನೋಭಾವನೆ ನಮ್ಮದಾಗಬೇಕು. ಆಗಲೇ, ಯಾವುದೆ ಕ್ಷೇತ್ರದಲ್ಲಿ ಆದರು ನಮ್ಮಗಳ ದಾರಿಗೊಂದು ಅರ್ಥ ದೊರೆಯುವುದು. ಕನಸು ಕಾಣುವುದೆ ಜೀವನ, ಆದರೆ ಅದನ್ನು ಸಫಲವಾಗಸಿಕೊಂಡರೆ ಮಾತ್ರ ಕನಸಿಗೊಂದು ಅರ್ಥ. ಇಲ್ಲದೆ ಹೋದರೆ ಆಗ ಜೀವನ ಕೂಡ ವ್ಯರ್ಥ.

ತುಂಬು ಬೆಳದಿಂಗಳ ಹುಣ್ಣೆಮೆಯಲ್ಲಿ ಚಂದ್ರಿರ ನಕ್ಕ
ಅರ್ಧರಾತ್ರಿಯಲ್ಲೂ ಅಂದವೆಲ್ಲಾ ತನ್ನದೆಂದ ನಕ್ಷತ್ರ ನಿಂತಿತ್ತು ಪಕ್ಕ
ಅದು ಸರಸ-ವಿರಸದ ವಿಹಂಗಮ ದೃಶ್ಯರೂಪಕ...
ನೋಡುತ್ತ ನಿಂತಿದ್ದ ನನ್ನನ್ನೇ ಪ್ರಶ್ನಿಸಿದಂತಿತ್ತು...
ಕೋಟಿ ಕೊಟ್ಟರು ಇಚ್ಛೆಯಿಲ್ಲದೆ ಸವಿಯಲಾರೆ ಜಗದ ಸೌಂದರ್‍ಯವ

« ಲೇಖನದ ಮೊದಲ ಭಾಗ : ಕನಸುಗಳು ಮಾರಾಟದ ವಸ್ತುವೆ?

English summary
Young movie director Ravindra Kotaki says only a creative director like Puttanna Kanagal can give better movies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X