ಬಿಜೆಪಿಗೆ ಇನ್ನಾದರೂ ಜ್ಞಾನೋದಯವಾದೀತೇ?
ಅಂತೂ ಇಂತೂ ಚುನಾವಣಾ ಯುದ್ಧ ಮುಗಿದು, ಹೊಸ ವೇಷದಲ್ಲಿ ಹಳೇ ಸರ್ಕಾರ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತಕ್ಕೆ ನಿಂತಿದೆ. ಸಂಪುಟ ರಚನೆ ಎಂಬ ದೊಂಬರಾಟದಲ್ಲಿ ಮುಳುಗಿದೆ. ಪರಾಭವಗೊಂಡಿರುವ ಭಾರತೀಯ ಜನತಾ ಪಕ್ಷದಲ್ಲಂತೂ ಆತ್ಮಾವಲೋಕನ ಎಂಬುದಡಿ ಮತ್ತದೇ ಸಮಯ ಹರಣದ ಹಾಗೂ ಕೆಸರೆರಚಾಟದ ಕಾರ್ಯಕ್ರಮ!
ಈ ಸಲದ ಚುನಾವಣೆ ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮತದಾರನಿಗೆ ಬುದ್ಧಿ ಕಲಿಸುವ ಬುದ್ಧಿ ಬಂದಿದೆ ಎಂಬುದನ್ನ ಸಾಬೀತು ಮಾಡಿದೆ. ಚುನಾವಣೆಯಲ್ಲಿ ಒಂದು ಪಕ್ಷ ಸೋತರೆ, ಇದರರ್ಥ ಜನತೆಗೆ ಆ ಪಕ್ಷ ಬೇಕಾಗಿಲ್ಲ ಎಂಬುದಕ್ಕಿಂತ, ಆ ಪಕ್ಷ ತನ್ನ ಅಡಳಿತದಲ್ಲಿ ಜನತೆಗೆ ಮೋಸ ಮಾಡಿದೆ ಎಂದರೆ ಹೆಚ್ಚು ಸಮಂಜಸ.
ಅತ್ಯಂತ ಹೆಚ್ಚಿನ ಸಾಮರ್ಥ್ಯ ಇದ್ದಂತಹ, ಹೆಚ್ಚಿನ ವಿದ್ಯಾವಂತರು (ಮತ ಹಾಕದವರು ಎಂದು ಓದಿಕೊಳ್ಳಬಹುದು) ಸಹಜವಾಗಿಯೇ ಅಪೇಕ್ಷೆ ಪಡುವಂತಹ, ಕಿಂಚಿತ್ತಾದರೂ ರಾಷ್ಟ್ರೀಯ ಬದ್ದತೆಯ ಧೋರಣೆ ಹೊಂದಿರ್ತಕ್ಕಂತಹ ಭಾರತೀಯ ಜನತಾ ಪಕ್ಷ ನೆಲಕಚ್ಚಿದ್ದು ಆಶ್ಚರ್ಯವೋ, ಸಹಜವೋ? ಮಾಧ್ಯಮಗಳನ್ನು ಸರಿಯಾಗಿ ಬಳಸಿಕೊಳ್ಳದ, ರಾಷ್ಟ್ರೀಯ ಸುದ್ಧಿವಾಹಿನಿಗಳ ಹಾಗೂ ಎಲ್ಲ ಮಾಧ್ಯಮಮಿತ್ರರೊಡನೆ ಉತ್ತಮ ಸಂಬಂಧವಿರಿಸಿಕೊಳ್ಳದ ಒಂದು ಪಕ್ಷವನ್ನು ರಾಷ್ಟ್ರೀಯ ಪಕ್ಷ ಎಂದು ಕರೆಯಬಹುದಾ? ಎನ್ನುವುದೇ ನನ್ನ ಪ್ರಶ್ನೆ.
ಭಯೋತ್ಪಾದನೆಯಂತಹ ಅತಿ ಮುಖ್ಯವಾದ ಹಾಗೂ ಹೆಚ್ಚು ಮಹತ್ವವಾದ ವಿಷಯವನ್ನೇ ಚುನಾವಣೆಯಲ್ಲಿ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದ ಬಿಜೆಪಿಗೆ ಇನ್ಯಾವ ವಿಷಯವನ್ನೂ ಬಳಸಿಕೊಳ್ಳಲು ಸಾಧ್ಯವಿಲ್ಲ. ತಾನು ಸಮಗ್ರ ಭಾರತದ ಕಲ್ಪನೆಯನ್ನಿಟ್ಟುಕೊಂಡು ಅದನ್ನು ಜನತೆಗೆ ನೀಡುವಲ್ಲಿ ಶಕ್ತರಾಗದ ಬಿಜೆಪಿ ಹೇಗೆ ತಾನೆ ಗೆಲುವಿನ ಕನಸು ಕಂಡಿತು? ಶಿಸ್ತಿಗೆ ಹೆಸರಾಗಿದ್ದಂತಹ ಪಕ್ಷ ಅದನ್ನೇ ಕಳೆದುಕೊಳ್ಳುವತ್ತ ಸಾಗಿರುವಾಗ ತನ್ನ ಸ್ಥಾನವನ್ನು ಹೇಗೆ ತಾನೇ ಭದ್ರಪಡಿಸಿಕೊಂಡೀತು? ಬೆಜೆಪಿಗೆ ನೀಡುವ ಬೆಂಬಲವನ್ನ ದೇಶದ ಕೆಲಸ ಎಂದೇ ನಂಬಿರುವ ಲಕ್ಷಾಂತರ ಪ್ರಜೆಗಳಲ್ಲಿ ಯಾವ ನಂಬಿಕೆಯನ್ನುಳಿಸಿದೆ ಬಿಜೆಪಿ? ಮತದಾನ ಮಾಡದ ವಿದ್ಯಾವಂತರನ್ನು ಆಕರ್ಷಿಸಲು ಅಸಮರ್ಥವಾದ ಬಿಜೆಪಿಗೆ ಜ್ಞಾನೋದಯ ಯಾವಾಗ?
ಇನ್ನಾದರೂ ಭಾರತೀಯ ಜನತಾ ಪಕ್ಷ ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೂ ನಷ್ಟ, ಜನತೆಗೂ ದ್ರೋಹ, ಪಕ್ಷದ ಅಸ್ತಿತ್ವಕ್ಕೂ ಧಕ್ಕೆ. 2014ರ ಚುನಾವಣೆಯ ನಂತರ ಆತ್ಮಾವಲೋಕನದ ಸಭೆ ಬಿಜೆಪಿಗೆ ಕಟ್ಟಿಟ್ಟ ಬುತ್ತಿ!