ನಮ್ಮ ಪಕ್ಷಗಳು ಸೆಕ್ಯುಲರೋ ಸಿಕ್ಯುಲರೋ?
* ಪ್ರಕಾಶ್ ಉಪಾಧ್ಯಾಯ, ಚಿಕ್ಕಮಗಳೂರು
ಭಾರತೀಯ ಜನತಾ ಪಕ್ಷ ಕೋಮುವಾದಿ ಪಕ್ಷ, ಅಧಿಕಾರದಿಂದ ದೂರವಿಡಲು ಜಾತ್ಯತೀತ(?) ಶಕ್ತಿಗಳೆಲ್ಲ ಒಂದಾಗಬೇಕು ಎಂದು ಬೊಗಳುವ ಜಾತ್ಯತೀತ ನಾಯಕರುಗಳು, ಬಾಬ್ರಿ ಮಸೀದಿ ಧ್ವಂಸವಾಗಿ 17 ವರ್ಷ ಕಳಿದ ಮೇಲೆ ಬಾಬ್ರಿ ಮಸೀದಿ ಧ್ವಂಸಕ್ಕೆ ಕಾಂಗ್ರೆಸ್ನ ಪಕ್ಷದ ಪಾಲು ಸಹ ಇದೆ ಎಂದು ಹೇಳಿಕೆ ನೀಡಿರುವ ಲಾಲೂ ಪ್ರಸಾದ ಯಾದವ್, ಹಿಂದುಸ್ತಾನ ಹಿಂದೂಗಳದಲ್ಲ ಎಂದು ಯಾವಾಗಲೂ ಪಠಿಸುವ ದೇವೇಗೌಡರು, ಮಾತಿಗೆ ಮುಂಚೆ ಮೀಸಲಾತಿ ಎಂದು ಒಡೆದು ಆಳುವ ನಾಯಕರು, ಜಾತ್ಯತೀತ ಲೇಬಲ್ ಅಂಟಿಸಿಕೊಂಡಿರುವ ಈ ನಾಯಕರು ನಿಜವಾಗಿಯು SECULARO ಅಥವಾ SICKULARO?
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದಾಗ ಪ್ರಧಾನಿಯಾಗಿದ್ದ ನೆಹರೂ, ಅಲ್ಪಸಂಖ್ಯಾತರ ಹಾಗೂ ದಲಿತರ ಕಲ್ಯಾಣಕ್ಕಾಗಿ ಮೀಸಲಾತಿ ಕೊಡಬೇಕು ಎಂದು ನಿರ್ಧರಿಸಿದರು. ಅವರ ಚಿಂತನೆಯಲ್ಲಿ ಯಾವರಾಜಕಾರಣನೂ ಇರಲಿಲ್ಲ, ತದನಂತರ ಬಂದ ರಾಜಕಾರಣಿಗಳು ಜಾತ್ಯತೀತ ಎಂಬ ಮುಖವಾಡದೊಂದಿಗೆ ಜಾತಿ ಆಧಾರಿತ ರಾಜಕಾರಣ ಮಾಡುತ್ತಾ ದೊಡ್ಡ ಸಮಸ್ಯೆಯಾಗಿ ನಿಂತಿದ್ದಾರೆ. ಬಿ.ಜೆ.ಪಿ. ಕೋಮುವಾದಿಗಳಾದರೆ ಬೇರೆಪಕ್ಷಗಳೇನು? ಮತಬ್ಯಾಂಕ್ ರಾಜಕಾರಣ - ಕೊಮುವಾದಕ್ಕೂ ಇರುವ ವ್ಯತ್ಯಾಸವಾದರೂ ಏನು? ವಿಭೂತಿ ಹಚ್ಚುವವರು ಮೂಢರು ಎಂದು ಕರುಣಾನಿಧಿ ಹೇಳಿದರೆ ಅದು ಕೋಮುವಾದ ಅಲ್ಲವೇ?
ಸುಮಾರು 15 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಮಂಡಲ್ ಕಮಿಷನ್ ವರದಿಯನ್ನು ವಿ.ಪಿ.ಸಿಂಗ್ 1991ರಲ್ಲಿ ಜಾರಿಗೆ ತಂದು ದೇಶವನ್ನೇ ಒಡೆದದ್ದು ಕೋಮುವಾದವಲ್ಲವೇ? ಅದನ್ನು ಇಂದಿರಾ ಗಾಂಧಿಯವರು ಕೂಡಾ ಜಾರಿ ತಂದಿರಲಿಲ್ಲ ಏಕೆಂದರೆ ಅವರಿಗೂ ಅದರಿಂದಾಗುವ ದುಷ್ಪರಿಣಾಮದ ಅರಿವಿತ್ತು. ಇನ್ನು ಕುಮಾರಿ ಮಾಯಾವತಿ 1984ರಲ್ಲಿ ಮೇಲ್ವರ್ಗದವರಿಗೆ ಚಪ್ಪಲಿಯಲ್ಲಿ ಹೊಡಿಯಿರಿ ಎಂದು ಹೇಳಿಕೆ ನೀಡಿದ್ದು ಕೋಮುವಾದಾಲ್ಲವೇ? ಇಲ್ಲಿ ಯಾವ ಒಂದು ಪಕ್ಷದ ಪರವಾಗಿಯೂ ನಾನು ಮಾತನಾಡುತ್ತಿಲ್ಲ, ಇಲ್ಲಿ ಎಲ್ಲಾ ಪಕ್ಷಗಳು ಕೋಮುವಾದಿಗಳೇ, ಎಲ್ಲರೂ ಒಡೆದು ಆಳುವ ರಾಜಕಾರಣವನ್ನೇ ಮಾಡುತ್ತಿರುವುದು.
ಆದರೆ ಪ್ರಜ್ಞಾವಂತ ಮತದಾರರದ ನಾವು ಇಂತ ರಾಜಕೀಯವನ್ನು ಬದಲಾಯಿಸಬಹುದು, ರಾಜಕಾರಣಿಗಳು ನಮ್ಮ ಮುಂದೆ ಜಾತಿ ಮಂತ್ರ ಬಿಟ್ಟು ಅಭಿವೃದ್ಧಿಯ ಮಂತ್ರ ಹೇಳುವವರಿಗೆ ಮಾತ್ರ ನಾವು ಮತನೀಡಿದಾಗ ಅದು ಸಾಧ್ಯ. ಜಾತಿರಾಜಕಾರಣವನ್ನು ನಾವು ಮೊದಲು ಬಿಡೋಣ ಆಮೇಲೆ ರಾಜಕಾರಿಣಿಗಳೇ ಅದನ್ನು ಬಿಡುತ್ತಾರೆ ಅಲ್ಲವೇ?
ಅಲ್ಲದೆ, ನಮ್ಮ ದೇಶದಲ್ಲಿ ಇರುವ 543 ಕ್ಷೇತ್ರಗಳಲ್ಲಿಯೂ ಜಾತಿ ಆಧಾರದ ಮೇಲೆಯೇ ಮತಗಳನ್ನು ಕೀಳಲಾಗುತ್ತದೆ ಎಂಬುದನ್ನು ಯಾವ ರಾಜಕಾರಣಿಯೂ ಅಲ್ಲಗಳೆಯಲಾರ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಯಾರೇ ಆಗಲಿ ಜಾತಿ ಹಣೆಪಟ್ಟಿ ಕಟ್ಟಿಕೊಂಡೇ ಮತಬ್ಯಾಂಕಿಗೆ ಕೈಹಾಕೋದು. ಕೋಮುವಾದಿತನ, ಕುಟುಂಬ ರಾಜಕಾರಣ, ಗುಲಾಮಗಿರಿತನ ಪ್ರತಿಯೊಂದು ಪಕ್ಷದಲ್ಲಿ ಇದ್ದೇ ಇದೆ. ಹೀಗಿದ್ದ ಮೇಲೆ ಇಂಥದೇ ಪಕ್ಷವನ್ನು ಕೋಮುವಾದಿ ಮತ್ತೊಂದೆಂದು ಹಣೆಪಟ್ಟಿ ಕಟ್ಟುವುದರಲ್ಲಿ ಅರ್ಥವೇ ಇಲ್ಲ.