ಮಂದಿರದಲಿ ‘ನಿತ್ಯೋತ್ಸವ’
ದಟ್ಸ್ಕನ್ನಡ ಬ್ಯೂರೊಭಾರತೀಯ ವಿಜ್ಞಾನ ಮಂದಿರ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ವಿದ್ಯಾರ್ಥಿ ಬಳಗದ ಸಂಘಟನೆಯಾದ ‘ನಿತ್ಯೋತ್ಸವ’ದ ಉದ್ಘಾಟನಾ ಸಮಾರಂಭ ನವಂಬರ್ 1ರ ಶನಿವಾರ ನಡೆಯಲಿದೆ. ನಿತ್ಯೋತ್ಸವ -ಕನ್ನಡ ವಿದ್ಯಾರ್ಥಿಗಳ ಬಳಗ ಎಲ್ಲ ಕನ್ನಡಾಭಿಮಾನಿಗಳನ್ನೂ ಕಾರ್ಯಕ್ರಮಕ್ಕೆ ಪ್ರೀತಿಪೂರ್ವಕವಾಗಿ ಆಹ್ವಾನಿಸುತ್ತದೆ.
ವಿಶ್ವಕನ್ನಡ.ಕಾಮ್ ಖ್ಯಾತಿ ಖ್ಯಾತಿಯ ಡಾ।। ಯು. ಬಿ. ಪವನಜ ಕಾರ್ಯಕ್ರಮದ ಮುಖ್ಯ ಅತಿಥಿ. ಪ್ರೊ।। ಎಮ್. ಆರ್. ಎನ್. ಮೂರ್ತಿ (ಎಮ್ ಬಿ ಯು ವಿಭಾಗ, ಭಾರತೀಯ ವಿಜ್ಞಾನ ಮಂದಿರ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
‘ನಿತ್ಯೋತ್ಸವ’ ಬಳಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ರಸಗವಳವೂ ಇದೆ. ನಂದಶ್ರೀ ಅವರ ನೃತ್ಯದ ಸೊಗಸು, ‘ಕುಮಾರ ಸಂಭವ’ ಪ್ರಸಂಗದ ಗೊಂಬೆಯಾಟದ ಸಾಂಸ್ಕೃತಿಕ ಸಿರಿ, ನಾಡಗೀತೆಯ ಝರಿ- ಇವೆಲ್ಲಾ ‘ನಿತ್ಯೋತ್ಸವ’ದಲ್ಲುಂಟು. ಕಾರ್ಯಕ್ರಮದ ನಡುವೆ ಲಘು ಉಪಹಾರವೂ ಉಂಟು.
‘ಕುಮಾರ ಸಂಭವ’ ಪ್ರಸಂಗದ ಗೊಂಬೆಯಾಟವನ್ನು ಪ್ರಸ್ತುತ ಪಡಿಸುವ ತಂಡದ ಮುಖ್ಯಸ್ಥರಾದ ದತ್ತಾತ್ರೇಯ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದರು. ಗೊಂಬೆಯಾಟ ಕನ್ನಡ ನಾಡಿನ ವಿಶಿಷ್ಟ ಕಲಾ ಪ್ರಕಾರಗಳಲ್ಲೊಂದು. ‘ನಿತ್ಯೋತ್ಸವ’ದ ಅರಳು ಕಾರ್ಯಕ್ರಮದಲ್ಲಿ ಗೊಂಬೆಯಾಟದಂಥ ಸಾಂಸ್ಕೃತಿಕ ನೆನಪುಗಳ ಪ್ರದರ್ಶನ ಅರ್ಥಪೂರ್ಣ.
ನೆನಪಿಟ್ಟುಕೊಳ್ಳಿ-
ಸಮಾರಂಭದ
ಆರಂಭ:
ಸಂಜೆ
5:30ಕ್ಕೆ,
ನವಂಬರ್
1ನೇ
ತಾರೀಖು,
ಶನಿವಾರ.ಸ್ಥಳ
:
ಸತೀಶ್
ಧವನ್
(CSIC)
ಸಭಾಭವನ
*
ಭಾರತೀಯ ವಿಜ್ಞಾನ ಮಂದಿರದಲ್ಲಿ ಈಗಾಗಲೇ ಕನ್ನಡ ಸಂಘಟನೆಯಾಂದುಂಟು. ಆದರೆ, ನಿತ್ಯೋತ್ಸವ ಬಳಗ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡಿರುವ ಕನ್ನಡ ಸಂಘಟನೆ. ಶೈಕ್ಷಣಿಕ, ಭಾಷಿಕ ಹಾಗೂ ಸಾಂಸ್ಕೃತಿಕವಾಗಿ ನಿತ್ಯೋತ್ಸವ ಬಳಗ ಉತ್ತಮ ಉದ್ದೇಶಗಳನ್ನು ಹೊಂದಿದೆ. ಅವುಗಳನ್ನು ಸೂತ್ರರೂಪವಾಗಿ ಹೇಳುವುದಾದರೆ:
- ಸಂಸ್ಥೆಯ ಒಳಗಿನ ಹಾಗೂ ಹೊರಗಿನ ವಿದ್ಯಾರ್ಥಿಗಳಿಗೆ ಸಹಾಯ.
- ಬಳಗವನ್ನು ನೂತನ ಹಾಗೂ ಹಿರಿಯ ವಿದ್ಯಾರ್ಥಿಗಳ ಪರಸ್ಪರ ಸಂಪರ್ಕ ಸಾಧನವನ್ನಾಗಿಸುವುದು.
- ಹೊಸ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆವರಣದ ಪರಿಚಯ ಮಾಡಿಕೊಡುವುದು. ಗಣಕಯಂತ್ರಗಳ ಬಳಕೆಯ ಅತಿ ಮೂಲಭೂತ ಅಂಶಗಳನ್ನು ತಿಳಿಹೇಳುವುದು. ಗ್ರಂಥಾಲಯದ ಸೌಕರ್ಯಗಳನ್ನು ಪರಿಚಯಿಸುವುದೇ ಮೊದಲಾದ ಚಿಕ್ಕ ಆದರೆ, ಉಪಯುಕ್ತವಾದ ಕೆಲಸಗಳನ್ನು ಹಮ್ಮಿಕೊಳ್ಳುವುದು.
- ಹೊರಗಿನ ವಿದ್ಯಾರ್ಥಿಗಳಿಗೆ GATE/IISc Entrance Test/CEED/KVPY ಮುಂತಾದ ಸ್ಪರ್ಧಾತ್ಮಕ ಪರಿಕ್ಷೆಗಳ ಬಗೆಗೆ ಮಾಹಿತಿ ಹಾಗೂ ಸಲಹೆಗಳನ್ನು ಕೊಡುವುದು.
- ಹೊರ ವಿದ್ಯಾರ್ಥಿಗಳಿಗೆ Summer Training/Projectಮುಂತಾದ ಮಾಹಿತಿ ಕೊಡುವುದು.
- ಕೆಲಸದ ವಿಷಯದಲ್ಲಿ ಅಪೇಕ್ಷಿತರಿಗೆ ಸಾಧ್ಯವಾದಷ್ಟು ಸಹಾಯ ಮತ್ತು ಮಾರ್ಗದರ್ಶನ ಒದಗಿಸುವುದು.
- ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳೊಡನೆ ಸಂಪರ್ಕ ಬೆಳಸಿಕೊಂಡು ಅವರಿಂದ ಸಹಾಯ ಮತ್ತು ಪ್ರಯೋಜನಗಳನ್ನು ಪಡೆಯುವುದು.
- ಗ್ರಂಥಾಲಯದ ಕನ್ನಡ ಪುಸ್ತಕಗಳನ್ನು ವ್ಯವಸ್ಥಿತವಾಗಿ ಕಾಪಾಡುವುದು.
- ವಿದ್ಯಾರ್ಥಿಗಳು ಮತ್ತು ಇತರ ಆಸಕ್ತರು ಕನ್ನಡದಲ್ಲಿ ಬರೆಯುವ ವಿಜ್ಞಾನ, ಗಣಿತ, ಕಲೆ ಇತ್ಯಾದಿ ವಿಷಯಗಳ ಬಗೆಗಿನ ಲೇಖನಗಳನ್ನು ಬಿತ್ತರಿಸುವುದು (ಅಂತರ್ಜಾಲದ ಮೂಲಕ ಕೂಡ).
- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು , ರಾಜ್ಯ ಗಣಕ ಪರಿಷತ್ತು ಮುಂತಾದ ಸಂಸ್ಥೆಗಳೊಂದಿಗೆ ಸಂಪರ್ಕ ಬೆಳೆಸಿ, ಅವರ ಜೊತೆಗೂಡಿ ಕನ್ನಡದ ಕೆಲಸ ಮಾಡುವುದು.
- ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಲಿಚ್ಛಿಸುವವರಿಗೆ ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕನ್ನಡದ ಕೆಲಸಗಳ ಬಗೆಗೆ ಮಾಹಿತಿಕೊಟ್ಟು ಪ್ರೇರೇಪಿಸುವುದು.
- ಕನ್ನಡೇತರರಿಗೆ ನಾಡು, ನುಡಿಗಳ ಪರಿಚಯ ಮಾಡಿಸಲು ಕನ್ನಡದ ತರಗತಿಗಳನ್ನು ನಡೆಸುವುದು.
- ಬಳಗವನ್ನು ಸಂಸ್ಥೆಯ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ವೇದಿಕೆಯನ್ನಾಗಿಸುವುದು.
- ಸಂಗೀತ, ನಾಟಕ, ನೃತ್ಯ, ಚಿತ್ರಕಲೆ ಇತ್ಯಾದಿ ವಿವಿಧ ಅಭಿರುಚಿಗಳನ್ನುಳ್ಳ ಉತ್ಸಾಹೀ ತಂಡಗಳನ್ನು ಪ್ರೋತ್ಸಾಹಿಸುವುದು.
- ಹೊರಗಿನಿಂದ ಕಲಾವಿದರು, ಪರಿಣಿತರು, ಸಾಹಿತಿಗಳನ್ನು ಕರೆಸಿ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜಿಸುವುದು.
- ರಾಜ್ಯೋತ್ಸವ ಆಚರಣೆ, ಪ್ರವಾಸ, ಚಾರಣ ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.