ಜಾಗತೀಕರಣದ ಸೆಡ್ಡಿಗೆ ಎದೆಗೊಡಿ : ಅನಂತಮೂರ್ತಿ
ಶಿವಮೊಗ್ಗ : ಜಾಗತೀಕರಣ ಆತಂಕ ಮತ್ತು ಭರವಸೆ ಎರಡನ್ನೂ ಸೃಷ್ಟಿಸಿದೆ. ಇದಕ್ಕೆ ತೆರೆದುಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿ ಸರ್ಕಾರ- ವಿದ್ಯಾಸಂಸ್ಥೆ ಹಾಗೂ ರಾಜಕಾರಣಿಗಳಿದ್ದಾರೆ. ನಮ್ಮ ಬೇರುಗಳನ್ನು ಕಳಕೊಳ್ಳದೆ ನಿಂತಲ್ಲೇ ಜಾಗತೀಕರಣವನ್ನು ಎದುರಿಸುವ ಪರ್ವ ಕಾಲದಲ್ಲಿ ನಾವಿದ್ದೇವೆ ಎಂದು ಡಾ. ಯು.ಆರ್.ಅನಂತಮೂರ್ತಿ ಅಭಿಪ್ರಾಯ ಪಟ್ಟರು.
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯ ‘ಜ್ಞಾನ ಸಹ್ಯಾದ್ರಿ’ಯಲ್ಲಿ ಜನವರಿ 28, ಮಂಗಳವಾರ ನಡೆದ 13ನೇ ಘಟಿಕೋತ್ಸವದಲ್ಲಿ ಅನಂತ ಮೂರ್ತಿ ಭಾಷಣ ಮಾಡಿದರು. ಜಾಗತೀಕರಣದ ನೆವದಲ್ಲಿ ಬಲಿಷ್ಠ ರಾಷ್ಟ್ರಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಎಲ್ಲರೂ ಕೆಲಸ ಮಾಡುವಂಥ ಹೇರಿಕೆ ಹಾಕುತ್ತಿವೆ. ಇದರಿಂದ ವೈಯಕ್ತಿಕ ಆಸೆ- ಆಕಾಂಕ್ಷೆಗಳಿಗೂ ಚ್ಯುತಿ ಬರುವ ಅಪಾಯವಿದೆ. ಈ ನೆಲದಲ್ಲಿ ಊರಿಕೊಂಡೇ ನಾವು ಜಾಗತೀಕರಣದ ಸವಾಲನ್ನು ಎದುರಿಸಬೇಕಾಗಿದೆ ಎಂದರು.
ಅಸೆಂಬ್ಲಿ ಚರ್ಚೆಗಳಲ್ಲಿ ವಾಕ್ಶಕ್ತಿಗಿಂತ ಕಿರುಚಾಟವೇ ಅಧಿಕವಾಗುತ್ತಿದೆ. ನಾವು ಸಿನಿಕರಾಗುತ್ತಿದ್ದೇವೆ. ನೈತಿಕ ಪ್ರಜ್ಞೆ ಪಾತಾಳ ಮುಟ್ಟಿದೆ. ನಮ್ಮ ಬದುಕು ನಮ್ಮ ಕೈಲೇ ಇಲ್ಲದ ಈ ದಿನಗಳಲ್ಲಿ ನಮ್ಮ ಹಿತಕ್ಕೆ ತಕ್ಕ ಹಾಗೆ ಜಾಗತೀಕರಣವನ್ನು ನಿರ್ವಹಿಸುತ್ತೇವೆ ಎಂಬ ಭರವಸೆ ಹುಟ್ಟುವುದಾದರೂ ಹೇಗೆ ಎಂದು ಅನಂತಮೂರ್ತಿ ಪ್ರಶ್ನಿಸಿದರು.
ಕಾಲೇಜುಗಳಲ್ಲಿ ವಿಜ್ಞಾನವನ್ನು ಹೇಳಿಕೊಡುವಷ್ಟು ಶ್ರದ್ಧೆಯಿಂದ ಮಾನವಿಕ ಶಾಸ್ತ್ರಗಳನ್ನು ಹೇಳಿಕೊಡುತ್ತಿಲ್ಲ. ಚರಿತ್ರೆ, ಸಾಹಿತ್ಯ, ಸಮಾಜ ಶಾಸ್ತ್ರಗಳನ್ನು ಸೃಜನಶೀಲವಾಗಿ ಕಲಿಸುವ ಕಾಲೇಜುಗಳೇ ಕರ್ನಾಟಕದಲ್ಲಿ ಕಂಡು ಬರುತ್ತಿಲ್ಲ ಎಂದು ವಿಷಾದಿಸಿದ ಅನಂತ ಮೂರ್ತಿ, ಕುವೆಂಪು ವಿವಿಯಾದರೂ ವೈಚಾರಿಕತೆ ಆಧಾರಿತ ಶಿಕ್ಷಣಕ್ಕೆ ಒತ್ತು ಕೊಡಲಿ ಎಂದು ಕರೆ ಕೊಟ್ಟರು.
ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಟಿ.ಎನ್.ಚತುರ್ವೇದಿ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. 10,662 ಪದವಿಧರರಿಗೆ ಪದವಿಗಳನ್ನು ಘೋಷಣೆ ಮಾಡಿದ್ದಲ್ಲದೆ. ವಿವಿಧ ವಿಭಾಗಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪದಕಗಳನ್ನು ಪ್ರದಾನ ಮಾಡಿದರು.
(ಇನ್ಫೋ ವಾರ್ತೆ)