ಜಿ.ಬಿ. ಜೋಶಿ ಶತಮಾನೋತ್ಸವ ಹಾಗೂ ಸರಕಾರದ ಸುಣ್ಣ
- ಎಂ. ವಿನೋದಿನಿ
ಕನ್ನಡದಲ್ಲಿ ಒಳ್ಳೆಯ ಕೃತಿಗಳು ಬರುತ್ತಿಲ್ಲ ಎನ್ನುವ ಬೇಜಾರು ಕುರ್ತಕೋಟಿ ಅವರದ್ದಲ್ಲ . ಅಸಲಿಗೆ ಸಾಹಿತ್ಯಕ್ಕೂ ಕುರ್ತಕೋಟಿ ಅವರ ಬೇಜಾರಿಗೂ ಸಂಬಂಧವೇ ಇಲ್ಲ . ಕುರ್ತಕೋಟಿ ಬೇಜಾರಾಗಿರುವುದು ರಾಜ್ಯ ಸರಕಾರದ ಬಗ್ಗೆ . ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವ ಸರಕಾರದ ನೀತಿಯ ಬಗ್ಗೆ .
ವಿಷಯ ಇಷ್ಟು -
ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪು ಅವರ ಜನ್ಮ ಶತಮಾನೋತ್ಸವಕ್ಕಾಗಿ ಸರಕಾರ ಒಂದು ಕೋಟಿ ರೂಪಾಯಿ ತೆಗೆದಿರಿಸಿದೆ. ಕುವೆಂಪು ಅವರೊಬ್ಬರೇ ಅಲ್ಲ , ಕನ್ನಡದಲ್ಲಿ ಸಾಕಷ್ಟು ಮಂದಿ ಪ್ರತಿಭಾವಂತ ಸಾಹಿತಿಗಳಿದ್ದಾರೆ. ಅವರಿಗೆ ಜ್ಞಾನಪೀಠ ಬರದೇ ಇರಬಹುದು. ಆದರೆ ಕನ್ನಡ ಸಾಹಿತ್ಯ-ಸಂಸ್ಕೃತಿಗೆ ಗುರುತರ ಕೊಡುಗೆ ನೀಡಿದವರಿದ್ದಾರೆ. ಅವರನ್ನು ಸರಕಾರ ಮರೆತಿರುವುದಾದರೂ ಯಾಕೆ ? ಕುವೆಂಪು ಶತಮಾನೋತ್ಸವಕ್ಕೆ ಕೋಟಿ ರುಪಾಯಿ ನೀಡುವ ಸರಕಾರ ಇತರ ಸಾಹಿತಿಗಳಿಗೆ ಚಿಕ್ಕಾಸು ನೀಡುವುದಿಲ್ಲ ಏಕೆ? ಇದು ಕುರ್ತಕೋಟಿಯವರ ತಕರಾರು.
ಮೊನ್ನೆ ಮೊನ್ನೆ ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುರ್ತಕೋಟಿ ಸರಕಾರದ ಮಲತಾಯಿ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜುಲೈ 29ರಿಂದ ಶ್ರೀರಂಗ, ಗೊರೂರು ರಾಮಸ್ವಾಮಿ ಐಯ್ಯಂಗಾರ್, ಜಿ. ಬಿ. ಜೋಶಿಯವರ ಜನ್ಮ ಶತಮಾನೋತ್ಸವ ಸಮಾರಂಭ ಆರಂಭವಾಗಲಿದೆ. ಸರಕಾರಕ್ಕೆ ಈ ವಿಷಯ ಗೊತ್ತೇ ಇಲ್ಲವೇ ? ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಸಾಹಿತಿಗಳ ನಡುವೆ ಹೀಗೆ ಭೇದ ಭಾವ ಮಾಡುವುದು ಸರಿಯಲ್ಲ ಎಂದು ಕುರ್ತಕೋಟಿ ಸಂಸ್ಕೃತಿ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು. ಆದರೆ, ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ಇಲಾಖೆಗೆ ಈ ವಿಷಯ ಅರ್ಥವಾಗುವುದಾದರೂ ಹೇಗೆ ?
ಜಾಣ ಮರೆವಿನ ರಾಣಿಯಮ್ಮ !
ಕುರ್ತಕೋಟಿಯವರು ಜಿ. ಬಿ. ಜೋಶಿ ಸ್ಮಾರಕ ಟ್ರಸ್ಟ್ನ ಅಧ್ಯಕ್ಷರು. ಜೋಶಿ ಅವರ ಶತಮಾನೋತ್ಸವ ಕಾರ್ಯಕ್ರಮದ ಸಲುವಾಗಿ 10 ಲಕ್ಷ ರೂಪಾಯಿ ಬಿಡುಗಡೆ ಮಾಡುವಂತೆ ಕುರ್ತಕೋಟಿ ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದರು. ಜಿ. ಬಿ. ಜೋಶಿ ಸ್ಮರಣಾರ್ಥ ನಡೆಸುವ ಈ ಕಾರ್ಯಕ್ರಮದಲ್ಲಿ ಜೋಶಿಯವರ ಸಮಗ್ರ ಕೃತಿಯನ್ನು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊರ ತರುವ ಯೋಜನೆಯೂ ಸೇರಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿ ರಾಣಿ ಸತೀಶ್ ಕೈ ತೊಳೆದುಕೊಂಡಿದ್ದಾರೆ. ಇಲಾಖೆಯ ನಿರ್ದೇಶಕ ಮುದ್ದು ಕೃಷ್ಣ ಫೋನ್ ಮುಖಾಂತರ ಕಾರ್ಯಕ್ರಮಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಏನೇನೂ ಪ್ರಯೋಜನವಿಲ್ಲ. ಭರವಸೆಗಳು ಕಾರ್ಯರೂಪಕ್ಕೆ ಬಂದಿಲ್ಲ . ಏನಿದರ ಅರ್ಥ ? ಉತ್ತರ ಕರ್ನಾಟಕಕ್ಕೆ ಪ್ರಾದೇಶಿಕ ಅನ್ಯಾಯ ಮಾತ್ರವಲ್ಲ - ಸಾಹಿತ್ಯಿಕವಾಗಿಯೂ ಪಕ್ಷಪಾತ ತೋರಲಾಗುತ್ತಿದೆ ಎಂದಲ್ಲವೇ ? ಕುರ್ತಕೋಟಿ ಪ್ರಶ್ನೆ ಮುಂದಿಡುತ್ತಾರೆ.
ಕುವೆಂಪು ಅವರ ರಾಮಾಯಣ ದರ್ಶನಂ ಹಸ್ತಪ್ರತಿಯ ನಕಲುಗಾರಿಕೆಗೆ ಸರಕಾರ 30 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಜೊತೆಗೆ ರಾಜ್ಯ ಬಜೆಟ್ನಲ್ಲಿಯೇ 1 ಕೋಟಿ ರೂಪಾಯಿಯನ್ನು ಕುವೆಂಪು ಜನ್ಮಶತಮಾನೋತ್ಸವಕ್ಕೆ ಮೀಸಲಿಡಲಾಗಿದೆ. ಆದರೆ ಉತ್ತರ ಕರ್ನಾಟಕದ ಸಾಹಿತಿಗಳು ಕನ್ನಡಕ್ಕೆ ನೀಡಿದ ಕೊಡುಗೆಯನ್ನೇಕೆ ಸರಕಾರ ಗಮನಿಸಬಾರದು ? ಕುವೆಂಪು ಹೊರತುಪಡಿಸಿ ಇತರ ಸಾಹಿತಿಗಳ ಜನ್ಮ ಶತಮಾನೋತ್ಸವ ಸರಕಾರದ ಕಣ್ಣಿಗೇಕೆ ಕಾಣಿಸುವುದಿಲ್ಲ ?
ಕುವೆಂಪು ಅವರಿಗೆ ಸಲ್ಲುವ ಪುರಸ್ಕಾರದ ಬಗ್ಗೆ ನಮಗೇನೂ ಬೇಜಾರಿಲ್ಲ. ಆದರೆ ಪಕ್ಷಪಾತ ಧೋರಣೆಯನ್ನು ನಾವು ಸಹಿಸುವುದಿಲ್ಲ ಎಂದು ಕುರ್ತಕೋಟಿ ಸಾತ್ವಿಕ ಸಿಟ್ಟನ್ನು ತೋಡಿಕೊಳ್ಳುತ್ತಾರೆ.
ಧಾರವಾಡದಲ್ಲಿ ಜೋಶಿ ಶತಮಾನೋತ್ಸವ
ಸರ್ಕಾರ ನೆರವು ಕೊಡದಿದ್ದರೇನಾಯಿತು, ಅಭಿಮಾನಿ ಸಹೃದಯರ ನೆರವಿನಿಂದ ಜೋಶಿ ಅವರ ಶತಮಾನೋತ್ಸವ ಕಾರ್ಯಕ್ರಮ ಧಾರವಾಡದಲ್ಲಿ ನಡೆಯುತ್ತಿದೆ. ಜುಲೈ 29ರ ಮಂಗಳವಾರದಿಂದ ಧಾರವಾಡದಲ್ಲಿ ಆರಂಭವಾಗುವ ಜಿ. ಬಿ.ಜೋಶಿ ಜನ್ಮ ಶತಮಾನೋತ್ಸವಕ್ಕೆ 1.30 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ. ಹಲವಾರು ಬರಹಗಾರರು ಕಾರ್ಯಕ್ರಮಕ್ಕಾಗಿ ಉದಾರ ಕೊಡುಗೆ ನೀಡಿದ್ದಾರೆ.
ಜಿ. ಬಿ.ಜೋಶಿ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಜಲಸಂಪನ್ಮೂಲ ಸಚಿವ ಎಚ್ಕೆ ಪಾಟೀಲ್ ಜು.29ರಂದು ಉದ್ಘಾಟಿಸುವರು. ಕಾಸು ಬಿಚ್ಚದ ಮಾತಿನ ಮಂತ್ರಿ- ಅರ್ಥಾತ್ ಕನ್ನಡ ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್, ಡಾ. ಗಿರೀಶ್ ಕಾರ್ನಾಡ್, ಡಾ. ಯು. ಆರ್. ಅನಂತ ಮೂರ್ತಿ, ಕೆ. ವಿ. ಸುಬ್ಬಣ್ಣ, ಡಾ.ಚಂದ್ರಶೇಖರ ಕಂಬಾರ, ಚೆನ್ನವೀರ ಕಣವಿ, ಡಾ. ಜಿ . ಎಸ್. ಅಮೂರ, ಗುರುಲಿಂಗ ಕಾಪಸೆ, ಆರ್. ನಾಗೇಶ್, ಗಿರಡ್ಡಿ ಗೋವಿಂದರಾಜು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಜನ್ಮಶತಮಾನೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಮುಂದಿನ ಜುಲೈ 29 (2004)ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯಲಿವೆ ಎಂದು ಮನೋಹರ ಗ್ರಂಥಮಾಲೆಯ ರಮಾಕಾಂತ್ ಜೋಶಿ ತಿಳಿಸಿದ್ದಾರೆ.