ಹೊರನಾಡ ಕನ್ನಡಿಗರು ಹಾಗೂ ಸಂಸ್ಕೃತಿ ರಾಯಭಾರ
ನವದೆಹಲಿ : ಹೊರನಾಡ ಕನ್ನಡಿಗರು ಕರ್ನಾಟಕದ ರಾಯಭಾರಿಗಳಂತೆ ತಾವಿದ್ದ ಕಡೆ ಕನ್ನಡ ಸಂಸ್ಕೃತಿಯನ್ನು ಪಸರಿಸಬೇಕು ಎಂದು ರಾಜ್ಯ ವಯಸ್ಕ ಶಿಕ್ಷಣ ಖಾತೆ ಸಚಿವ ಬಾಬುರಾವ್ ಚವ್ಹಾಣ್ ಹೊರನಾಡ ಕನ್ನಡಿಗರಿಗೆ ಕರೆ ನೀಡಿದ್ದಾರೆ.
ಏಪ್ರಿಲ್ 5 ಮತ್ತು 6ರಂದು ದೆಹಲಿ ಕನ್ನಡ ಪತ್ರಿಕೆ ಆಯೋಜಿಸಿದ್ದ ರಾಷ್ಟ್ರೀಯ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿ ಬಾಬುರಾವ್ ಚವ್ಹಾಣ್ ಮಾತನಾಡುತ್ತಿದ್ದರು. ಎರಡು ದಿನಗಳ ಕಾಲ ನಡೆದ 20ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕನ್ನಡಕ್ಕೆ ಸಂಬಂಧಿಸಿದ ವಿಚಾರ ಸಂಕಿರಣಗಳು, ಕವಿಗೋಷ್ಠಿ, ಮಹಿಳಾ ಉತ್ಸವ, ಸಂಗೀತ, ನೃತ್ಯ, ನಾಟಕ, ಪುಸ್ತಕ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮಾಜಿ ಪ್ರಧಾನ ವಾರ್ತಾಧಿಕಾರಿ ಐ. ರಾಮಮೋಹನ ರಾವ್ ಅವರು ದೆಹಲಿ ಕನ್ನಡಿಗ ಸಮ್ಮೇಳನ ಸಂಚಿಕೆ ಬಿಡುಗಡೆ ಮಾಡಿದರು. ಮಾಹೆಯ ಕುಲಪತಿ ಪ್ರೊ. ಬಿ. ಎಂ. ಹೆಗಡೆ ಕನ್ನಡ ಭಾಷೆ ಹೆಚ್ಚು ಮಡಿವಂತಿಕೆ ತೋರದೆ ಅನ್ಯ ಭಾಷೆ ಪದವನ್ನು ಸ್ವೀಕರಿಸಬೇಕು ಎಂದು ಕರೆ ನೀಡಿದರು.
ಸಮ್ಮೇಳನದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಡಾ. ಆರ್. ನಟರಾಜನ್ ಅವರಿಗೆ ಶ್ರೇಷ್ಠ ಹೊರನಾಡ ಕನ್ನಡಿಗ, ಕರ್ನಾಟಕ ಸರಕಾರದ ಕಾರ್ಯದರ್ಶಿ , ದಿಲ್ಲಿ ನಿವಾಸಿ ಆಯುಕ್ತ ಸುಧಾಕರ ರಾವ್ ಅವರಿಗೆ ಶ್ರೇಷ್ಠ ದಿಲ್ಲಿ ಕನ್ನಡಿಗ, ಬ್ಯಾಂಕ್ ಆಫ್ ಬರೋಡದ ಅಧ್ಯಕ್ಷ ಪಿ. ಎಸ್. ಶೆಣೈ ಅವರಿಗೆ ಟಿ. ಎ. ಪೈ. ಸ್ಮಾರಕ ಶ್ರೇಷ್ಠ ಬ್ಯಾಂಕರ್ ಪ್ರಶಸ್ತಿ ನೀಡಲಾಯಿತು. ಬಾ. ಸಾಮಗ ಅವರು ಸಮ್ಮೇಳನದ ಸಂಚಾಲಕರಾಗಿದ್ದರು.
(ಇನ್ಫೋ ವಾರ್ತೆ)