ಕನ್ನಡಕ್ಕಾಗಿ ಒಂದಾದ ಕಲಿತ ಕನ್ನಡಿಗರು !
ಪ್ರಿಯ ಕನ್ನಡಿಗ ಸ್ನೇಹಿತರೇ,
ಇತ್ತೀಚೆಗೆ ನಾವೆಲ್ಲ (ಈ- ಕವಿ, ಬೆಂಗಳೂರು) ಕೆಂಪು ತೋಟ (ಲಾಲ್ಬಾಗ್)ದಲ್ಲಿ ಸೇರಿದ್ದ ಸಭೆ ಯಶಸ್ವಿಯಾಯಿತು. ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಕನ್ನಡ ಸ್ನೇಹಿತರಿಗೆ ಧನ್ಯವಾದಗಳು. ಮುಂದೆ ಕೂಡ ನಾವೆಲ್ಲ ಹೀಗೇ ಸೇರುತ್ತಾ ಗುಂಪನ್ನು ದೊಡ್ಡದಾಗಿ ಬೆಳೆಸಲು ಪ್ರಯತ್ನ ಮಾಡಬೇಕು.
ನಾವೆಲ್ಲ ಅಂದುಕೊಂಡ ಹಾಗೆ 30 ಜನ ಸೇರಿದ್ದು ಎಲ್ಲರಿಗೂ ಖುಷಿ ತಂದಿದೆ. ಮುಂದಿನ ನಮ್ಮ ಸಭೆಗೆ ಬರುವವರ ಸಂಖ್ಯೆ 100 ದಾಟುತ್ತದೆ ಎಂಬ ವಿಶ್ವಾಸ ನಮ್ಮದು. ಎಲ್ಲರೂ ತಿಳಿಸಿದ ಹಾಗೆ ಅವತ್ತು ಚರ್ಚೆಗೆ ಸಮಯ ಸಾಲದೆ ಹೋದುದು ನಿಜ. ಇನ್ನು ಮುಂದೆ ನಾವು ಪರಿಚಯ ಮಾಡಿಕೊಳ್ಳುವಾಗ ಹೆಚ್ಚು ಸಮಯ ತೆಗೆದುಕೊಳ್ಳದೆ ಬೇಗ ಬೇಗ ಹೇಳಿ ಮುಗಿಸಿ, ಚರ್ಚೆಗಳಿಗೆ ಹೆಚ್ಚು ಆವಕಾಶ ಮಾಡಿಕೊಟ್ಟರೆ ಒಳ್ಳೆಯದು.
ಮೊನ್ನೆಯ ಸಭೆಯಲ್ಲಿ ಎಲ್ಲರೂ ತುಂಬಾ ಹುಮ್ಮಸ್ಸಿನಿಂದ ಮಾತನಾಡಿದರು. ಕನ್ನಡ ಪತ್ರಕರ್ತ ಹಾಗೂ ಕನ್ನಡ ಸಂಘರ್ಷ ಸಮಿತಿಯ ರಾಮಣ್ಣ ಕೋಡಿಹೊಸಳ್ಳಿ ಹಾಗೂ ಸಂಪಿಗೆ ಶ್ರೀನಿವಾಸ್ ಸಭೆಯಲ್ಲಿ ನಮ್ಮೊಟ್ಟಿಗೆ ಮಾತಾಡಿದ್ದು ಹೆಮ್ಮೆಯ ವಿಷಯ.
ರಾಮಣ್ಣ ಅವರು ತಮ್ಮ ಅಮೂಲ್ಯವಾದ ಸಲಹೆ ಕೊಟ್ಟು, ನಮ್ಮ ಉಮೇದಿಗೆ ಪ್ರೊತ್ಸಾಹ ನೀಡಿದರು. ನಾವೆಲ್ಲರೂ ಅವರ ಪತ್ರಿಕೆಯ ಚಂದಾದಾರರಾದರೆ ಅವರಿಗೂ ಸಹಾಯವಾದ ಹಾಗೆ ಆಗುತ್ತೆ . ಪ್ರತಿಯಾಗಿ ಅವರಿಂದ ನಮಗೂ ಮಾರ್ಗದರ್ಶನ ಸಿಕ್ಕ ಹಾಗೆ ಆಗುತ್ತೆ. ನಮಗೆಲ್ಲರಿಗೂ ಇಂಥ ವ್ಯಕ್ತಿಗಳ ಸಹಾಯ ಹಾಗೂ ಮಾರ್ಗದರ್ಶನ ಸಿಕ್ಕಿದರೆ ಸರಿಯಾದ ಕಾರ್ಯಕ್ರಮ ಹಮ್ಮಿಕೊಂಡು ಮುಂದೆ ಹೋಗಲಿಕ್ಕೆ ಸಹಾಯವಾಗುತ್ತೆ.
ಈಗಾಗಲೇ ತೀರ್ಮಾನ ಮಾಡಿರುವ ಹಾಗೆ ಮುಂದಿನ ನಮ್ಮ ಸಭೆ ಜನವರಿ 18 ರಂದು ಕೆಂಪುತೋಟದ ಆಶೋಕ ವೃಕ್ಷದ ಹತ್ತಿರ ನಡೆಯಲಿದೆ. ಇನ್ನು ಮುಂದೆ ಎಲ್ಲರೂ ಕನ್ನಡ ನಾಡಿನ, ನುಡಿಯ ಹಾಗೂ ಜನರ ಉಳಿವಿಗಾಗಿ ಚಿಂತನೆ ಮಾಡಬೇಕು. ಅದನ್ನು ಹೇಗೆ ಮಾಡಬೇಕು ಎಂದು ಸಲಹೆ ನೀಡಿ ನಮ್ಮ ಗುಂಪಿನ ಸದಸ್ಯರ ಮುಂದೆ ಚರ್ಚೆಗೆ ಇಡಬೇಕು. ಎಲ್ಲರ ಅಭಿಪ್ರಾಯ ಪಡೆದು ಅದನ್ನು ಸರ್ವರೂ ಅಳವಡಿಸಿಕೊಳ್ಳಬೇಕು. ಇದೆಲ್ಲವನ್ನು ನಮ್ಮ ಸಭೆಯಲ್ಲಿ ಮಾಡುವುದು ಒಳ್ಳೆಯದು.
ಸಭೆಯಲ್ಲಿ ತೀರ್ಮಾನ ಮಾಡಿರುವ ಹಾಗೆ ಹೊಸದೊಂದು ಈ-ಗುಂಪು ಮಾಡೊಣ. ಆ ಗುಂಪಿಗೆ ಯಾವ ಹೆಸರು ಇಡಬೇಕು ಎನ್ನುವುದನ್ನು ನೀವೇ ತಿಳಿಸಬೇಕು. ನೀವು ಸೂಚಿಸುವ ಹೆಸರನ್ನು ಈ-ಪತ್ರದ ಮೂಲಕ ಚರ್ಚೆಗೆ ಹಾಕಿ. ಆಮೆಲೆ ಆ ಹೆಸರ ಮೇಲೆ ಒಂದು ಗುಂಪನ್ನು ರೂಪಿಸಿ, ಸದಸ್ಯರನ್ನು ಮಾಡರೆಟರ್ಗಳು ಹೆಸರಿಸುವ ಹಾಗೆ ಮಾಡಬಹುದು. ಹೆಸರು ಸೂಚಿಸಲು ಕೊನೆಯ ದಿನ ಜನವರಿ 5, 2004.
ಇನ್ನೊಂದು ವಿಷಯ- ಡಿಸೆಂಬರ್ 29 ರಂದು ನಡೆಯಲಿರುವ ನಾಡಗೀತೆ ಅಳವಡಿಕೆ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸಬೇಕಾಗಿ ವಿನಂತಿ. ಪ್ರತಿಯಾಬ್ಬರೂ ನಮ್ಮ ನಾಡಗೀತೆಯನ್ನು ಕಲಿತರೆ ಒಳ್ಳೆಯದು. ನಾಡಗೀತೆಯ ಸಾಹಿತ್ಯ ಇದೋ ಇಲ್ಲಿದೆ-ಜಯ ಭಾರತ ಜನನಿಯ ತನುಜಾತೆ. ಇದಾದ ಮೇಲೆ ಕನ್ನಡ ಬಾವುಟವನ್ನು ವಿದಾನಸೌಧದ ಮೇಲೆ ಹಾರಿಸುವ ನಿರ್ಧಾರ ಮಾಡೋಕೆ ಸರ್ಕಾರವನ್ನು ಪ್ರೇರೇಪಿಸುವ ಕೆಲಸ ನಮ್ಮ ಮುಂದಿರುತ್ತದೆ. ಹಾದಿ ದೊಡ್ಡದಿದೆ. ಇರಾದೆ ಬಲಗೊಳ್ಳಲಿ.
ಅಂದಹಾಗೆ, ಅವತ್ತು ಸಭೆಯಲ್ಲಿ ಭಾಗವಹಿಸಿದ ಸದಸ್ಯರ ಹೆಸರುಗಳು ಇಂತಿವೆ :
ಸಂಪಿಗೆ ಶ್ರೀನಿವಾಸ, ವಿನಯ್ ಕುಮಾರ್ ವೈ. ಎನ್ , ಜಯಂತ್.ಬಿ , ಅರವಿಂದ್ ಬಾಬು ಆರ್ , ಎಸ್. ಮಧುಸೂದನ, ಎನ್.ಜನಾರ್ಧನ್, ಎಲ್.ದಿನೇಶ್, ಸುರೇಶ್, ಎಂ.ಪಿ.ಅನಿಲ ಕುಮಾರ, ರಮೇಶ ಕಟಾವಕರ, ಅನ್ನದಾನೇಶ ತೆಗ್ಗಿನಮನಿ, ರಾಕೇಶ ಐನಾಪೊರ್, ಸೋಮಶೇಖರ್ ಹೊಸಮನಿ, ಟಿ. ಸಿ.ಸುರೇಶ್, ರೇಣುಕ ಉಮೇಶ್, ಉಮೇಶ್ ನಿ.ರ. , ಕೆ. ಎಸ್. ಪ್ರಭು, ಎನ್. ಚಂದ್ರಶೇಖರ, ಎಸ್. ಗುರುಪ್ರಸಾದ್, ಜಿ.ಎಸ್.ಪ್ರಕಾಶ್, ವಿ. ಎಸ್. ನರಸಿಂಹ, ಕೆ.ಟಿ. ಸತೀಶ್, ಕೆ. ಎಸ್.ನವೀನ್, ಬಿ.ವಿ.ಜಗದೀಶ್ ಬಾಬು, ಟಿ. ಎಸ್. ಸತ್ಯಜಿತ್, ಬಿ.ಎನ್.ವಿಜಯ್, ವಿ. ಎಸ್.ಗಿರೀಶ್, ಎಂ. ಎಸ್. ವೆಂಕಟೇಶ್, ಬಿ.ಕೆ. ಎಸ್. ಚರಣ, ಆರ್. ಗಂಗಾಧರ್, ಭುಜಂಗ ಹಾಗು ಟಿ.ಪಿ. ಸತೀಶ್.
ಉಮೇಶ್ ಅವರ ಪತ್ನಿ ರೇಣುಕಾ ಉಮೇಶ್ ನಮ್ಮ ಸಭೆಯಲ್ಲಿ ಭಾಗವಹಿಸಿದ ಏಕೈಕ ಮಹಿಳೆ. ಅವರಿಗೆ ಎಲ್ಲರ ಪರವಾಗಿ ಅಭಿನಂದನೆಗಳು. ಮುಂದೆ ಮಹಿಳೆಯರು ಕೂಡ ನಮ್ಮ ಸಭೆಗೆ ಸೇರಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.