ಆತ್ಮ ಸಂಗಾತಕ್ಕೆ ಅವನುಂಟೆ ?
- ಸಂಘಮಿತ್ರ
ಈವ್- ಆ್ಯಡಮ್
ಗಂಡು- ಹೆಣ್ಣಿನ ಅವಿನಾಭಾವ ಸಂಬಂಧ ಸಾಧ್ಯವೆ ? ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಾಣದೊಂದು ಕನಸ ಕಾಣಲುಂಟೆ ?
ಗಂಡು ಹೆಣ್ಣಿನ ಸಂಬಂಧದಲ್ಲಿ ಒಂದು ಅಂತರ್ಗತ ವಿಷಮತೆ ಇದೆ ಅಂತ ನಿಮಗೆ ಯಾವಾಗಲಾದರೂ ಅನ್ನಿಸಿದ್ದಿದೆಯೆ ?
ಪ್ರಜ್ಞಾವಂತ ಲೇಖಕಿಯರು, ಕತೆಗಾರ್ತಿಯರು, ವಿಮರ್ಶಕರು, ಕವಿಯತ್ರಿಯರು ಸೇರಿದ್ದ ಕಡೆ ಹೀಗೊಂದು ಕೈಬಾಂಬ್ ಒಗೆದಾಗ ಎದ್ದ ಹೊಗೆ- ನಗೆ ಇಲ್ಲಿದೆ.
*
ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಗಂಡು-ಹೆಣ್ಣಿನ ಜೋಡಿಯಿಂದ ಜೋಡಿಗೆ ಇದು ಬದಲಾಗುತ್ತೆ ಅನ್ನಿಸುತ್ತೆ. ಹೆಣ್ಣಿನ ಬೌದ್ಧಿಕ ಮೇಲ್ಮೆಯನ್ನು ಒಪ್ಪಿಕೊಳ್ಳಲಾರದ ಕೃಪಣತೆ, ಆಕೆಯ ಕಾರ್ಯಕ್ಷಮತೆ, ಸಾಮರ್ಥ್ಯಗಳ ವಿನ್ಯಾಸ ಅರ್ಥಮಾಡಿಕೊಳ್ಳದ ಹುಂಬತನ, ನಾನು ಉಪದೇಶಿಸುತ್ತೇನೆ- ನೀನು ಕೇಳಿಕೊ ಎಂಬ ಧಾಷ್ಟ್ಯ ಇನ್ನೂ ಗಂಡಸಿನಲ್ಲಿದೆ. ನಾನು ವಿವಾಹಿತೆಯಲ್ಲದ ಕಾರಣ ನನಗೆ ಇದರ ಬಿಸಿ ತಟ್ಟದೇ ಇರಬಹುದು. ಆದರೆ ನನ್ನ ಸ್ನೇಹಿತೆಯರು- ಬಂಧು ವರ್ಗದವರು ಕಂಡುಕೊಂಡಿರುವ ಪ್ರಕಾರ ವಿಷಮತೆಯ ಸೂಕ್ಷ್ಮರೇಖೆ ಇದೆ. ಇದ್ದೇ ಇದೆ. ಗಂಡಸರು ಅವರ ಬುದ್ಧಿ ಬಿಡೊಲ್ಲ ! ಎಂಬ ಅಭಿಪ್ರಾಯವೇ ಗಾಳಿಯಲ್ಲಿ ಅಲೆದಾಡುತ್ತದೆ.
-
ಡಾ.ಬಿ.ಎನ್.
ಸುಮಿತ್ರಾಬಾಯಿ
ಸಂಸ್ಕೃತ
ಅಧ್ಯಾಪಕಿ,
ವಿಮರ್ಶಕಿ
*
ವಿಷಮತೆ ಇಲ್ಲ . ಸಂಬಂಧದ ಯಶಸ್ಸು ವ್ಯಕ್ತಿಗಳನ್ನು ಆಧರಿಸಿರುವುದರಿಂದ ಪರಸ್ಪರ ಅಭಿರುಚಿ, ಆಸಕ್ತಿಗಳನ್ನು ಗೌರವಿಸುವ ಗಂಡು-ಹೆಣ್ಣಿನದು ಆದರ್ಶ ಸ್ನೇಹ- ಪ್ರೀತಿಯಾಗಿರಲು ಸಾಧ್ಯ.
-
ಡಾ.ಎಲ್.ಸಿ.
ಸುಮಿತ್ರಾ
ಕನ್ನಡ
ಅಧ್ಯಾಪಕಿ,
ವಿಮರ್ಶಕಿ
*
ಹೆಣ್ಣನ್ನು ಸಮಾನ ಧರ್ಮದಿಂದ ನಡೆಸಿಕೊಳ್ಳಲು ಬಲ್ಲ ಪುರುಷರು ಇಲ್ಲ ಅಂತೇನಲ್ಲ . ಅವರ ಸಂಖ್ಯೆ ಬಹಳ ಕಡಿಮೆ. ಪಾಶ್ಚಾತ್ಯ ದೇಶಗಳಲ್ಲಿ ಹೆಣ್ಣು ಲಿಬರೇಟೆಡ್ ಆಗಿದ್ದಾಳೆ ಅಂದುಕೊಳ್ತೀವಿ. ಆದರೆ ಅಲ್ಲೂ ಅವರಿಗೆ ಸಮಸ್ಯೆಗಳಿವೆ. ಅವರಿಗೇ ವಿಶಿಷ್ಟವಾದ ಸಮಸ್ಯೆಗಳು.
-
ವೀಣಾ
ಶಾಂತೇಶ್ವರ
ಸಾಹಿತಿ,
ಪ್ರಾಂಶುಪಾಲರು
*
ಗಂಡು-ಹೆಣ್ಣಿನ ಸಂಬಂಧ ಅಂತಾನೇ ಅಲ್ಲ . ಒಂದೇ ಸೂರಿನಡಿ ದೀರ್ಘ ಕಾಲ ಜೀವಿಸುವ ಯಾವುದೇ ಆಪ್ತ ನಂಟಿನಲ್ಲೂ ಈ ವಿಷಮತೆಯ ಎಳೆ ಗೋಚರಿಸುತ್ತದೆ ಅಂತ ನನ್ನ ಭಾವನೆ. ಉದಾಹರಣೆಗೆ ಹದಿಹರೆಯದ ಮಗಳು ತಾಯಿಯನ್ನೇ ತನ್ನ ಪ್ರತಿಸ್ಪರ್ಧಿ ಎಂದು ಭಾವಿಸುವ ಸಂಗತಿ. ಅಧಿಕಾರ, ಆಸ್ತಿಯ ಕಾರಣ ಅಪ್ಪ- ಮಗನಲ್ಲಿ ಏರ್ಪಡುವ ಬಿರುಕು. ಬಲಿಷ್ಠವಾಗಿರುವ ದೊಡ್ಡ ಮಂಗ ವಿನಾಕಾರಣ ಸಣ್ಣದರ ಕಾಲು ಹಿಡಿದು ತಿರುಚುವುದು... ಹೀಗೆ.
-
ಸ.
ಉಷಾ
ಕನ್ನಡ
ಅಧ್ಯಾಪಕಿ,
ಕವಿ
*
ಇದೆಯಮ್ಮಾ ಇದೆ. ವಿದ್ಯೆ, ಬುದ್ಧಿ , ಸಂಸ್ಕಾರ ಎಲ್ಲ ಮೀರಿ ಗಂಡಸಿನಲ್ಲಿರುವ ‘ಅಹಂ’ ಕುಂಡಲಿನಿಯ ಹಾಗೆ ಇದ್ದಕ್ಕಿದ್ದ ಹಾಗೆ ಜಾಗೃತವಾಗಿಬಿಡುತ್ತೆ . ಎಷ್ಟೇ ಸಹಕಾರ ಕೊಡ್ತೀವಿ ಅಂತ ಮಾತಾಡಿದರೂ ಗಂಡಸಿಗೆ ಹೆಣ್ಣನ್ನು ಸಮಾನತೆಯಿಂದ ನಡೆಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ .
-
ಡಾ.
ಸುನೀತಿ
ಶೆಟ್ಟಿ
ಮುಂಬೈ
ವಿಶ್ವವಿದ್ಯಾಲಯ
ಕನ್ನಡ
ವಿಭಾಗದ
ಮಾಜಿ
ಮುಖ್ಯಸ್ಥೆ
*
ಎಲ್ಲಿಯತನಕ ನಾವು ವಿಧೇಯರಾಗಿ ನಿನ್ನದೇ ನನ್ನದು ಅನ್ನುವ ಮನೋಭಾವನೆಯಿಂದ ಇರುತ್ತೇವೆಯೋ ಅಲ್ಲಿಯತನಕ ಎಲ್ಲ ಚೆನ್ನ. ಒಂದು ಸಾರಿ ನಾನು, ನನ್ನದು, ನನ್ನ ಸಾಧನೆ ಅಂತ ಆರಂಭವಾದ ಕೂಡಲೆ ಈ ವಿಷಮತೆ ಅಥವಾ ಒಡಕು ಕಾಣಿಸುತ್ತದೆ. ಈ ಒಡಕನ್ನು ಕೆಲವರು ಕಂಡುಕೋತಾರೆ, ಕೆಲವರು ಕಂಡೂ ಕಾಣದಂತಿರುತ್ತಾರೆ !
ಎಚ್.ಎಲ್.ಪುಷ್ಪ
ಕನ್ನಡ
ಅದ್ಯಾಪಕಿ,
ಕವಿ
(ಸ್ನೇಹಸೇತು : ವಿಜಯ ಕರ್ನಾಟಕ)
ವಾದ ವಿವಾದ ಕೇಳಿದ್ರಲ್ಲಾ , ನೀವೇನಂತೀರಿ ?