ರಾಷ್ಟ್ರಕವಿ ಗೋವಿಂದ ಪೈ ಅವರ ಮನೆ ನೋಡಿದ್ದೀರಾ ?
- ಎಂ. ವಿನೋದಿನಿ
ನಂತರ, ಎಲ್ಲ ನಿರ್ಲಕ್ಷಿತ ಸ್ಮಾರಕಗಳಿಗೆ ಸಲ್ಲುವ ಗತಿಯೇ ಪೈಗಳ ಮನೆಗೂ ಸಂದಿತು. ಗೋವಿಂದ ಪೈಗಳ ಸ್ಮಾರಕ ಮನೆಯಲ್ಲಿ ಬಾವಲಿಗಳು ಓಡಾಡುತ್ತಿರುವುದು, ಇಲಿಗಳು ಮನೆ ಮಾಡಿಕೊಂಡಿದ್ದು ಎಲ್ಲ ನೆನಪಾಗಲಿಕ್ಕೆ ಕಾರಣ- ಮೊನ್ನೆ ಕಾಸರಗೋಡಿನಲ್ಲಿ ನಡೆದ ಪ್ರಜ್ಞ ಜ್ಯೋತಿ ಜಾಥಾದ ಸಂದರ್ಭ.
ಜಾಥಾ ಪೈಗಳ ಮನೆಯಿಂದ ಹೊರಡಬೇಕಿತ್ತು. ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಾಸರಗೋಡು ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಸ್. ಎನ್. ಲಲಿತಾ ಭಟ್, ಕಾದಂಬರಿಕಾರ ಕೆ. ಟಿ. ಗಟ್ಟಿ, ದ. ಕ. ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಜಾಥಾ ಉದ್ಘಾಟಿಸಲು ಬಂದಿದ್ದರು. ಇದೇ ಸುಸಮಯ ಎಂದುಕೊಂಡ ಲಲಿತಾ ಭಟ್ ಸ್ಮಾರಕದ ದಯನೀಯ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು. ಭಾನುವಾರ ಅ. 12ರಂದು ಕಾಸರಗೋಡಿನ ಎರಡನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಇದರ ಬಗ್ಗೆ ಮತ್ತಷ್ಟು ಚರ್ಚೆಗಳು ನಡೆದವು.
ಸ್ಮಾರಕ ಕಾಸರಗೋಡಿನಲ್ಲಿರುವುದರಿಂದ ಅಧಿಕಾರಿಗಳು ಕೇವಲ ಭರವಸೆಯನ್ನಷ್ಟೇ ನೀಡುತ್ತಾರೆ. ಕೇರಳದಲ್ಲಿರುವ ಕನ್ನಡ ಕವಿಯ ಸ್ಮಾರಕ ರಕ್ಷಿಸಲು ಕರ್ನಾಟಕ ಹಿಂದು ಮುಂದು ನೋಡುತ್ತಿರುವುದು ಇನ್ನೊಂದು ವಿಪರ್ಯಾಸ. ಸಮೇಳನದಲ್ಲಿ ಅಧ್ಯಕ್ಷ ಭಾಷಣಮಾಡಿದ ಕಾದಂಬರಿಕಾರ ಕೆ. ಟಿ. ಗಟ್ಟಿ ಕೂಡ ಇದೇ ಮಾತು ಹೇಳಿದರು. ಇಲ್ಲಿಯೂ ಸಲ್ಲದೆ, ಅಲ್ಲಿಯೂ ಸಲ್ಲದೆ ಬಿದ್ದು ಹೋಗುತ್ತಿರುವ ಈ ಸ್ಮಾರಕದ ರಕ್ಷಣೆಗೆ ಸರಕಾರವನ್ನು ಅವಲಂಬಿಸಬಾರದು. ಬದಲಾಗಿ ಕನ್ನಡಾಭಿಮಾನಿ ಜನರೇ ಸ್ಮಾರಕವನ್ನು ನೋಡಿಕೊಳ್ಳುವ ಹೊಣೆ ಹೊತ್ತುಕೊಳ್ಳಬೇಕು ಎಂದು ಗಟ್ಟಿ ಸಲಹೆ ಮಾಡಿದರು. ಅಷ್ಟಕ್ಕೇ ಮಾತು ಮುಗಿಸದೇ ಪೈಗಳ ಸ್ಮಾರಕವು ಕೇರಳದ ಕಲಾಮಂಡಲಂ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ತಮ್ಮ ಕನಸೊಂದನ್ನು ಹಂಚಿಕೊಂಡರು.
ಸಾಹಿತ್ಯ ಸಮ್ಮೇಳನದಲ್ಲಿ ಪೈಗಳ ಸ್ಮಾರಕದ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದವು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವುದಾಗಿ ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ಉಚಿತ ಭರವಸೆ ಕೊಟ್ಟರು. ಸಮ್ಮೇಳನದ ಸಲುವಾಗಿ ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.