ಧಾರವಾಡದಲ್ಲಿ 9 ದಿನಗಳ ಪುಸ್ತಕ ಪೂರ್ಣಿಮೆ
ಧಾರವಾಡ : ಟಿ.ವಿ. ದಾಸರಾಗಿರುವ ಕಾರಣ ನಮ್ಮಲ್ಲಿ ಪುಸ್ತಕ ಸಂಸ್ಕೃತಿ ಬೆಳೆಯುತ್ತಿಲ್ಲ ಎಂದು 70ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಪಾಟೀಲ ಪುಟ್ಟಪ್ಪ ವಿಷಾದಿಸಿದ್ದಾರೆ.
ನಗರದಲ್ಲಿ 9 ದಿನಗಳ ಅವಧಿಯ ಪುಸ್ತಕ ಪ್ರದರ್ಶನ ‘ಪುಸ್ತಕ ಪೂರ್ಣಿಮೆ- 2003’ನ್ನು ಭಾನುವಾರ ಉದ್ಘಾಟಿಸಿ ಪಾಪು ಮಾತಾಡಿದರು. ಸ್ಪೇನ್ ಒಂದು ಪುಟ್ಟ ದೇಶ. ಹಾಗಿದ್ದೂ ಅಲ್ಲಿ ಪ್ರತಿ ವರ್ಷ 22,000 ಪುಸ್ತಕಗಳು ಪ್ರಕಟವಾಗುತ್ತಿವೆ. ನಮ್ಮಲ್ಲಿ ಅಬ್ಬಬ್ಬಾ ಅಂದರೆ 15- 16 ಸಾವಿರ ಪುಸ್ತಕಗಳು ಪ್ರತಿವರ್ಷ ಹೊರಬರುತ್ತಿವೆ. ದೇಶದಲ್ಲಿ 290 ವಿಶ್ವವಿದ್ಯಾಲಯಗಳು, ಸಹಸ್ರಾರು ಕಾಲೇಜುಗಳು, ಅಸಂಖ್ಯ ಗ್ರಂಥಾಲಯಗಳಿದ್ದರೂ ಓದುವ ಸಂಸ್ಕೃತಿ ಮಾತ್ರ ಬೆಳೆಯದಿರುವುದು ಆತಂಕದ ವಿಷಯವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಪ್ರತಿಯಾಬ್ಬರೂ ಪುಸ್ತಕ ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಗಷ್ಟೆ ಲೇಖಕರು ಬದುಕಲು ಸಾಧ್ಯ ಎಂದು ಪಾಪು ಕರೆ ಕೊಟ್ಟರು.
ಭಾರತೀಯ ವಿದ್ಯಾಭವನ, ನ್ಯಾಷನಲ್ ಬುಕ್ ಟ್ರಸ್ಟ್, ಪ್ರಿಸಂ ಬುಕ್ಸ್ ಪ್ರೆೃ. ಲಿ, ಮನೋಹರ ಗ್ರಂಥಮಾಲಾ, ಬೆಂಗಳೂರಿನ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಕಂಪನಿ ಲಿಮಿಟೆಡ್- ಇವು 9 ದಿನಗಳ ಪುಸ್ತಕ ಪೂರ್ಣಿಮೆ ಮೇಳದಲ್ಲಿ ಭಾಗವಹಿಸಿವೆ. ಪುಸ್ತಕಗಳ ಖರೀದಿಯಲ್ಲಿ 50 ಪ್ರತಿಶತ ರಿಯಾಯಿತಿ ಉಂಟು.
(ಇನ್ಫೋ ವಾರ್ತೆ)