ಕವಿ ಚಂದ್ರಶೇಖರ ಕಂಬಾರರಿಗೆ ಕೊನೆಗೂ ಸಿಕ್ಕ ಪಿಂಚಣಿ
ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ। ಚಂದ್ರಶೇಖರ ಕಂಬಾರರನ್ನು ನಿವೃತ್ತ ಪ್ರೊಫೆಸರ್ ಎಂದು ಪರಿಗಣಿಸಿ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ರಾಜ್ಯ ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರು ವಿಶ್ವವಿದ್ಯಾನಿಲಯ ತಮಗೆ ವಿಸಿಟಿಂಗ್ ಕನ್ನಡ ಪ್ರೊಫೆಸರ್ ಸ್ಥಾನ-ಮಾನ ನೀಡಿತ್ತು. ಆದರೆ ರೀಡರ್ ವೇತನಕ್ಕೆ ಅನುಗುಣವಾಗಿ ಪಿಂಚಣಿ ಸೌಲಭ್ಯ ನಿಗದಿಪಡಿಸಿದೆ ಎಂದು ವಿಶ್ವವಿದ್ಯಾಲಯದ ಆದೇಶದ ಕ್ರಮಬದ್ಧತೆಯನ್ನು ಕಂಬಾರರು ಹೈಕೋರ್ಟ್ನಲ್ಲಿ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆದ ನ್ಯಾಯಪೀಠ, ಕಂಬಾರರಿಗೆ ಪ್ರೊಫೆಸರ್ ವೇತನಕ್ಕೆ ಅನುಗುಣವಾಗಿ ಪಿಂಚಣಿ ನೀಡುವಂತೆ ಬೆಂಗಳೂರು ವಿವಿಗೆ ಸೂಚಿಸಿದೆ.
ಕಂಬಾರರನ್ನು ಬರೀ ರೀಡರ್ ಎಂದು ಪರಿಗಣಿಸುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯ ತಪ್ಪಾಗಿ ನಡೆದುಕೊಂಡಿದೆ. ಕಂಬಾರರು ನಿವೃತ್ತಿಯಾದ ದಿನದಿಂದ(1997 ಜನವರಿ 1) ನೀಡಬೇಕಾಗಿರುವ ಬಾಕಿ ಪಿಂಚಣಿಯನ್ನು ವಾರ್ಷಿಕ ಶೇ. 12ರಷ್ಟು ಬಡ್ಡಿ ದರದೊಂದಿಗೆ ತುಂಬಿಕೊಡುವಂತೆ ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಕಂಬಾರರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ್ದ ನ್ಯಾಯಮೂರ್ತಿ ಪೆರೋಡಿ ವಿಶ್ವನಾಥ ಶೆಟ್ಟಿ ಅವರು, ಕಂಬಾರರಿಗೆ ರೀಡರ್ ವೇತನಕ್ಕೆ ಅನುಗುಣ ಪಿಂಚಣಿ ಸೌಲಭ್ಯ ಕಲ್ಪಿಸಿ ಬೆಂಗಳೂರು ವಿಶ್ವವಿದ್ಯಾನಿಲಯ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ್ದಾರೆ.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಜಾನಪದದ ಗುಂಗಿನಿಂದ ಹಿಡಿದು ಕನ್ನಡ ಕೀಬೋರ್ಡ್ವರೆಗೆ