ಮಾಂತ್ರಿಕ ಲೇಖಕ ಮಾರ್ಕ್ವೆಜ್ನ ಸನ್ನಿಧಿಯಲ್ಲಿ
- ಎಸ್.ದಿವಾಕರ್, ಚೆನ್ನೈ
ಕಳೆದ ವರ್ಷ ನಾನು ಅಯೋವಾ ವಿಶ್ವ ವಿದ್ಯಾಲಯಕ್ಕೆ ಹೋಗಿದ್ದಾಗ ಹಲವು ದೇಶಗಳಿಂದ ಅಲ್ಲಿಗೆ ಬಂದಿದ್ದ ಲೇಖಕರು ಮಾರ್ಕ್ವೆಜ್ ಹೆಸರೆತ್ತಿದರೆ ಸಾಕು, ಸಂಭ್ರಮಿಸುತ್ತಿದ್ದರು. ಒಬ್ಬನಂತೂ ಆತ ಕ್ಯಾನ್ಸರ್ನಿಂದ ಬಳಲುತ್ತಿದ್ದಾನೆಂದು ಅತ್ತೇಬಿಟ್ಟ . ಅದೇ ಸಮಯದಲ್ಲಿ ಮಾರ್ಕ್ವೆಜ್ ನೆನಪುಗಳ ಮೊದಲ ಸಂಪುಟ ಕೊಲಂಬಿಯಾದಲ್ಲಿ ಬಿಡುಗಡೆಯಾದದ್ದೂ, ಎಂಟೇ ದಿನಗಳಲ್ಲಿ ಅದರ ಲಕ್ಷಾಂತರ ಪ್ರತಿಗಳು ಮಾರಾಟವಾದದ್ದೂ ಅಮೆರಿಕನ್ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು .
ಅದಕ್ಕಿಂತ ಮಿಗಿಲಾಗಿ ಕಂಡದ್ದೆಂದರೆ ಪುಸ್ತಕದ ಪ್ರತಿಗಳನ್ನು ತುಂಬಿಕೊಂಡ ಎರಡು ಟ್ರಕ್ಕುಗಳು ಅವುಗಳನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ಸಾಗಿಸುತ್ತಿದ್ದವಂತೆ. ಮಾರ್ಗ ಮಧ್ಯದಲ್ಲಿ ಬಂದೂಕು ಹಿಡಿದವರ ಗುಂಪೊಂದು ಆ ಟ್ರಕ್ಕುಗಳನ್ನು ಮುತ್ತಿಕೊಂಡು ಎಲ್ಲ ಪುಸ್ತಕಗಳನ್ನೂ ಕೊಳ್ಳೆ ಹೊಡೆಯಿತಂತೆ. ಅವರೆಲ್ಲ ಅವನ ಓದುಗರು. ಪುಸ್ತಕ ಕೊಳ್ಳಲಾರದ ಬಡವರು. ನಮ್ಮ ಕಾಲದಲ್ಲಿ ಒಬ್ಬ ಲೇಖಕನಿಗೆ ಸಲ್ಲಿಸುವ ಗೌರವವೆಂದರೆ ಇದಲ್ಲವೆ ?
ಕಳೆದ ಏಳೆಂಟು ವರ್ಷಗಳಲ್ಲಿ ಮಾರ್ಕ್ವೆಜ್ ಹೊರಗೆ ಕಾಣಿಸಿಕೊಂಡದ್ದೇ ಅಪರೂಪ. ಅವರ ಈಚಿನ ಚಿತ್ರ ಕೂಡ ಎಲ್ಲಿಯೂ ಕಾಣಿಸಿದಂತಿಲ್ಲ , ಅಲ್ಲವೆ ? ಇಂಥ ಎಲ್ಲರಂತಲ್ಲದ ಲೇಖಕ ಮಾರ್ಕ್ವೆಜ್ ಅವರನ್ನು ಇಂದ್ರನ್ ಮಾತಾಡಿಸಿ ಬಂದಿದ್ದಾರೆ. ಅಮೃತ ಘಳಿಗೆ ಎಂದರೆ ಅದಲ್ಲವೆ !?
(ಸ್ನೇಹ ಸೇತು : ವಿಜಯ ಕರ್ನಾಟಕ)