ಸಾಹಿತ್ಯ ಕ್ಷೇತ್ರದಲ್ಲಿ ‘ಬುಷ್ಭಾಷೆ’- ಬರಗೂರು ಆತಂಕ
ಬೆಂಗಳೂರು : ಅಂತರರಾಷ್ಟ್ರೀಯ ರಾಜಕಾರಣದಲ್ಲಿ ಮಾತ್ರವಲ್ಲದೆ, ಸ್ಥಳೀಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ‘ಬುಷ್’ಗಳಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಅಂತರರಾಷ್ಟ್ರೀಯ ವ್ಯಾಪಾರವಾದ ಯುದ್ಧ ಜನಪರವೂ ಅಲ್ಲ , ಪ್ರಜಾಸತ್ತಾತ್ಮಕವೂ ಅಲ್ಲ ಎಂದು ಬರಗೂರು ಬಣ್ಣಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ (ಮೇ 2ರಂದು) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬರಗೂರು ರಾಮಚಂದ್ರಪ್ಪ ಮಾತನಾಡುತ್ತಿದ್ದರು.
ವಿಕಾರ ಹಾಗೂ ವ್ಯಾಪಾರಗಳಿಂದ ಕೂಡಿದ ‘ಬುಷ್ ಭಾಷೆ’ಯನ್ನು ಬಳಸುವ ಮಂದಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ವ್ಯಾಪಕವಾಗಿದ್ದಾರೆ. ಈ ‘ಬುಷ್ ಭಾಷೆ’ಗೆ ನಾವು ಗಾಂಧಿ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಭಾಷೆಯಲ್ಲಿ ಉತ್ತರ ನೀಡಬೇಕು. ‘ಬುಷ್ ಭಾಷೆ’ಯನ್ನು ಮೀರುವುದರಲ್ಲಿಯೇ ನಮ್ಮ ಸಾಹಿತ್ಯ- ಸಂಸ್ಕೃತಿಯ ಬೆಳವಣಿಗೆಯಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪುಸ್ತಕ ಸಂಸ್ಕೃತಿ ಎಲ್ಲಾ ಅಪಾಯಗಳನ್ನು ಮೀರಿ ಸಮರ್ಥವಾಗಿ ಬೆಳೆಯುತ್ತಿದೆ. ಟೀವಿ, ಕಂಪೂಟ್ಯರ್ ಮಾಧ್ಯಮಗಳಿಂದ ಪುಸ್ತಕ ಸಂಸ್ಕೃತಿ ನಶಿಸುತ್ತಿದೆ ಎನ್ನುವ ವಾದದಲ್ಲಿ ಹುರುಳಿಲ್ಲ . ಆರಂಭದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಪುಸ್ತಕಗಳು ಸ್ವಲ್ಪ ಮಟ್ಟಿಗಿನ ಅಪಾಯ ಎದುರಿಸಿದರೂ, ಆನಂತರ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿವೆ ಎಂದು ಬರಗೂರು ಹೇಳಿದರು.
ಪುಸ್ತಕ ಬಿಡುಗಡೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ- ‘ಶತಮಾನದ ನಾಟಕ’, ‘ಶಿವರಾಮ ಕಾರಂತ ಸಾಂಸ್ಕೃತಿಕ ಅನುಸಂಧಾನ’, ‘ಶಿವರಾಮಕಾರಂತ’, ‘ಎಂ.ಎನ್.ಕಾಮತ್ ವಾಚಿಕೆ’, ‘ದೀಪದಡಿಯ ಗದ್ದುಗೆ’ ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗುರುಲಿಂಗ ಕಾಪಸೆ, ಸಾಹಿತಿ ಕೆ.ಮರುಳಸಿದ್ಧಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಬಂಡಾಯದ ಬರಗೂರರ ಕಾಂಟೆಸ್ಸಾ ಮತ್ತು ಕಾವ್ಯ!
ಕೆಸೆಟ್ ಕವಿಗಳ ಸಾಲಿಗೆ ‘ಕಾಂಟೆಸ್ಸಾ ’ ಬರಗೂರು