ಕಡ್ಡಾಯ ಇಂಗ್ಲೀಷ್ನಿಂದ ಸಾಮಾಜಿಕ ನ್ಯಾಯ ಪರಿಕಲ್ಪನೆ- ವಿಶ್ವನಾಥ್
ಬೆಂಗಳೂರು : ಸಾಹಿತಿಗಳ ಆಕ್ರೋಶಕ್ಕೆ ಕಾರಣವಾಗಿರುವ ತಮ್ಮ ಕಡ್ಡಾಯ ಇಂಗ್ಲೀಷ್ ಶಿಕ್ಷಣ ನಿಲುವನ್ನು ಮತ್ತೆ ಸಮರ್ಥಿಸಿಕೊಂಡಿರುವ ಶಿಕ್ಷಣ ಸಚಿವ ಎಚ್.ವಿಶ್ವನಾಥ್, ತಮ್ಮ ಚಿಂತನೆಯನ್ನು ಸಾಹಿತಿಗಳು ತಿರುಚಿ ಅರ್ಥೈಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ ವರ್ಗಗಳು ಹಾಗೂ ಅಲ್ಪ ಸಂಖ್ಯಾಕರ ಮಕ್ಕಳಿಗೆ ಅನ್ಯಾಯವಾಗಬಾರದು ಎನ್ನುವ ಉದ್ದೇಶದಿಂದ ಕಡ್ಡಾಯ ಇಂಗ್ಲೀಷ್ ಶಿಕ್ಷಣ ಕುರಿತು ಯೋಚಿಸುತ್ತಿರುವುದಾಗಿ ವಿಶ್ವನಾಥ್ ಹೇಳಿದ್ದಾರೆ. ಅವರು ತಮ್ಮ ಹೇಳಿಕೆಯ ಕುರಿತು ಶುಕ್ರವಾರ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಬದಲಾದ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ವಾತಾವರಣದಲ್ಲಿ ಇಂಗ್ಲೀಷನ್ನು ಪರಿಣಾಮಕಾರಿಯಾಗಿ ಕಲಿಸಬೇಕಾದ ಅವಶ್ಯಕತೆಯಿದೆ. ಸರ್ಕಾರಿ ಶಾಲೆಗಳಲ್ಲಂತೂ ಈ ಅವಶ್ಯಕತೆ ಮತ್ತಷ್ಟು ಹೆಚ್ಚಾಗಿದೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಭಾಷೆ ಒಂದು ಮಹತ್ವದ ಭಾಷೆಯಾಗಿ ಪಾತ್ರ ವಹಿಸುತ್ತದೆ. ಇಂಗ್ಲೀಷ್ ಸಮಾನತೆಯ ಮಾಧ್ಯಮವಾಗಿ ಪರಿಣಾಮಕಾರಿ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ಭಾಷೆ ಗೊತ್ತಿಲ್ಲ ಅಥವಾ ಅದನ್ನು ಬಳಸುವ ಸಾಮರ್ಥ್ಯವಿಲ್ಲ ಎನ್ನುವ ಕಾರಣಕ್ಕಾಗಿ ಈ ವರ್ಗಗಳು ಮತ್ತೊಮ್ಮೆ ಸಾಮಾಜಿಕ ನ್ಯಾಯದಿಂದ ವಂಚಿತರಾಗಬೇಕಿಲ್ಲ . ಆದ ಕಾರಣ ಇಂಗ್ಲೀಷನ್ನು ಕಡ್ಡಾಯ ಭಾಷೆಯಾಗಿ ಬೋಧಿಸಲು ಸರ್ಕಾರ ಉದ್ದೇಶಿಸಿದೆ. ಸರ್ಕಾರದ ನೀತಿಯಂತೆ 1 ರಿಂದ 4 ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ವಿದ್ಯಾ ಸಂಸ್ಥೆಗಳು- 5 ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮ ಪ್ರಾರಂಭಿಸಲು ಅರ್ಹವಾಗಿವೆ. ಈ ಹಿನ್ನೆಲೆಯಲ್ಲಿ 5 ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಬಹುದಾಗಿದೆ ಎಂದು ವಿಶ್ವನಾಥ್ ಹೇಳಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು