ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಸ್ಕೂಲು ಯಾವ ಮಾಧ್ಯಮದ್ದು? ಸಾಹಿತಿ- ಶಿಕ್ಷಣ ಸಚಿವರ ಮಹಾಭಾರತ !

By Staff
|
Google Oneindia Kannada News

*ರವಿವರ್ಮ

ಸರ್ಕಾರದ ಭಾಷಾ ನೀತಿಯನ್ನೇ ವಿರೋಧಿಸುವ, ಮುಖ್ಯಮಂತ್ರಿಯನ್ನೇ ಪರೋಕ್ಷವಾಗಿ ಟೀಕಿಸುವ, ಸಾಹಿತಿಗಳ ಬಗ್ಗೆ ಹಗುರವಾಗಿ ಮಾತಾಡುವ ಶಿಕ್ಷಣ ಸಚಿವ ಎಚ್‌.ವಿಶ್ವನಾಥ್‌ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಸಂವಿಧಾನದ ಪ್ರಕಾರ ಹುಚ್ಚರು ಮಂತ್ರಿಮಂಡಲದಲ್ಲಿ ಮುಂದುವರೆಯುವಂತಿಲ್ಲ !
- ಸಾಹಿತಿಗಳ ವಿರುದ್ಧ ಯುದ್ಧ ಸಾರಿರುವ ಶಿಕ್ಷಣ ಸಚಿವರ ವಿರುದ್ಧ ಸಾಹಿತಿಗಳ ಪ್ರತ್ಯಸ್ತ್ರವಿದು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶಿಕ್ಷಣ ಸಚಿವ ಎಚ್‌.ವಿಶ್ವನಾಥ್‌ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸುವ ನಿರ್ಣಯವನ್ನು ಹಾಗೂ ಈ ನಿಟ್ಟಿನಲ್ಲಿ , ಮಾರ್ಚ್‌ 18ರಂದು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಸಾಹಿತಿಗಳು ಹಾಗೂ ಕನ್ನಡ ಪರ ಸಂಘಟನೆಗಳ ಮುಖ್ಯಸ್ಥರು ಕೈಗೊಂಡರು.

ಹೊಸದಾಗಿ 300 ಆಂಗ್ಲ ಶಾಲೆಗಳನ್ನು ತೆರೆಯಲು ಕೊಟ್ಟಿರುವ ಆದೇಶವನ್ನು ರದ್ದು ಪಡಿಸುವುದು, ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆಯನ್ನು ಕಡ್ಡಾಯ ಮಾಡಿ ಹೊರಡಿಸಿರುವ ಆದೇಶಕ್ಕೆ ನ್ಯಾಯಾಲಯ ನೀಡಿರುವ ತಡೆ ಆದೇಶವನ್ನು ತೆರವುಗೊಳಿಸುವುದೂ ಸೇರಿದಂತೆ ಶಿಕ್ಷಣದಲ್ಲಿ ಕನ್ನಡ ಹಿತಾಸಕ್ತಿ ಕುರಿತ ವಿವಿಧ ಬೇಡಿಕೆಗಳನ್ನು ಪರಿಷತ್ತು ಸರ್ಕಾರದ ಮುಂದಿಟ್ಟಿದೆ. ಇದರಲ್ಲಿ ಸಚಿವ ಎಚ್‌.ವಿಶ್ವನಾಥ್‌ ಅಸಂಬದ್ಧವಾಗಿ ಮಾತನಾಡುವ ಕಾರಣ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದೂ ಉಲ್ಲೇಖಿಸಲಾಗಿದೆ.

ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮಾರ್ಚ್‌ 17ರ ಗಡುವು. ಇಲ್ಲವಾದಲ್ಲಿ ಪ್ರತಿಭಟನೆ. ಇದು ಸಾಹಿತಿಗಳ ಠರಾವು.

ನಡೆದದ್ದಾದರೂ ಏನು?

ಆಂಗ್ಲ ಮಾಧ್ಯಮ ಶಾಲೆಗಳಿಗೆ ಕೊಟ್ಟಿರುವ ಅನುಮತಿ ವಿರೋಧಿಸಿ ಸಾಹಿತಿಗಳು ದನಿಯೆತ್ತಿದ್ದೇ ತಡ, ಸಚಿವ ವಿಶ್ವನಾಥ್‌ ಯಾರ್ಯಾರ ಮಕ್ಕಳು ಯಾವ ಸ್ಕೂಲಿನಲ್ಲಿ ಓದುತ್ತಿದ್ದಾರೆ ಎಂಬ ಅಂಕಿ- ಅಂಶ ಸಂಗ್ರಹಣೆ ಶುರುವಿಟ್ಟರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನಾಲ್ಕು ಮಕ್ಕಳು ಇಂಗ್ಲಿಷ್‌ ಶಾಲೆಗಳ ಕೂತಿವೆ ಅಂತ ನೇರವಾಗಿ ಸಭೆಯಾಂದರಲ್ಲಿ ಮಾಧ್ಯಮಗಳಿಗೆ ಹೇಳುವ ಮೂಲಕ ಸಾಹಿತಿಗಳನ್ನು ಕೆಣಕಿದರು. ಅನಂತಮೂರ್ತಿ ಮೊಮ್ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿವೆ ಹೇಳಿ ಅಂತ ಕೆಲವರನ್ನು ಪ್ರಶ್ನಿಸಿದ್ದೂ ಉಂಟು.

ಮಾನನಷ್ಟ ಮೊಕದ್ದಮೆ ಹೂಡಬಹುದು : ನನ್ನ ಮೂರು ಮಕ್ಕಳು ಕನ್ನಡ ಮಾಧ್ಯಮದಲ್ಲೇ ಓದಿರುವುದು. ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದ ಒಂದು ಮಗುವನ್ನು ಈಗ ಕನ್ನಡ ಮಾಧ್ಯಮಕ್ಕೇ ಸೇರಿಸಿದ್ದೇವೆ. ಶಿಕ್ಷಣ ಸಚಿವರು ಜವಾಬ್ದಾರಿಯಿಂದ ಮಾತನಾಡಬೇಕು ಎನ್ನುತ್ತಾರೆ ಪುನರೂರು. ಸಚಿವ ವಿಶ್ವನಾಥ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಅನ್ನುವುದು ಚಂಪಾ ಸಲಹೆ. ಆದರೆ, ಇಂಥವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎನ್ನುತ್ತಾರೆ ಪುನರೂರು.

ಚಂಪಾ ಹೇಳುವಂತೆ- 300 ಆಂಗ್ಲ ಮಾಧ್ಯಮ ಶಾಲೆಗಳ ತೆರೆಯಲು ಕೊಟ್ಟಿರುವ ಆದೇಶಕ್ಕೆ ಮತ್ತೆ ಜೀವ ಕೊಡಲಿಕ್ಕೆ ಸಚಿವರು ಈ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಕನ್ನಡ ಮಾಧ್ಯಮದ ಒಳ್ಳೆ ಶಾಲೆಗಳು ಮಾತ್ರ ಇದ್ದರೆ.. : ನಮ್ಮ ಮಕ್ಕಳು ಯಾವ ಮಾಧ್ಯಮದ ಶಾಲೆಯಲ್ಲಿ ಓದುತ್ತಾರೆ ಅನ್ನುವುದು ಈ ಸಂದರ್ಭದಲ್ಲಿ ಮುಖ್ಯವಲ್ಲ. ಸರ್ಕಾರದ ಭಾಷಾ ನೀತಿ ಎಂಥದು ಅನ್ನುವುದು ಮುಖ್ಯವಾಗುತ್ತದೆ ಎಂಬುದು ಹಿರಿಯ ಲೇಖಕ ಎಲ್‌.ಎಸ್‌.ಶೇಷಗಿರಿ ರಾವ್‌ ಅಭಿಪ್ರಾಯ.

ಈ ಮುನ್ನ ನನ್ನ ಮೊಮ್ಮಗುವನ್ನು ಕನ್ನಡ ಶಾಲೆಗೇ ಕಳುಹಿಸುತ್ತಿದ್ದೆ . ಶಾಲೆ ಚೆನ್ನಾಗಿತ್ತು . ಆದರೆ ಮನೆಯಿಂದ ಮೂರು ಕಿಲೋ ಮೀಟರ್‌ ದೂರ. ಅಲ್ಲದೆ ಬೆಳಗ್ಗೆ 7 ಕ್ಕೇ ಶಾಲೆ ಶುರು. ಸ್ಕೂಲ್‌ ಬಸ್ಸು ಬೇರೆ ಇಲ್ಲ . ಈ ತೊಂದರೆಗಳಿಂದ ಮಗುವನ್ನು ಹತ್ತಿರದ ಇಂಗ್ಲೀಷ್‌ ಮಾಧ್ಯಮಕ ಸ್ಕೂಲ್‌ಗೆ ಅನಿವಾರ್ಯವಾಗಿ ಸೇರಿಸಬೇಕಾಯಿತು. ಇಲ್ಲಿ ಅನುಕೂಲ ಮುಖ್ಯ ಎನ್ನುತ್ತಾರೆ ಶೇಷಗಿರಿ ರಾವ್‌.

ಇಲ್ಲಿ ಆಯ್ಕೆ ವಿಷಯ ಬಂದಾಗ ಒಳ್ಳೆಯ ಶಾಲೆಯ ಪ್ರಶ್ನೆ ಎದ್ದೇಳುತ್ತದೆ. ನಮ್ಮಲ್ಲಿ ಕನ್ನಡ ಮಾಧ್ಯಮದ ಒಳ್ಳೆಯ ಶಾಲೆಗಳು ಮಾತ್ರ ಇದ್ದರೆ, ಎಲ್ಲರೂ ತಂತಮ್ಮ ಮಕ್ಕಳನ್ನು ಆ ಶಾಲೆಗಳಿಗೇ ಕಳುಹಿಸುತ್ತಾರೆ. ಕನ್ನಡ ಮಾಧ್ಯಮದ ಕೆಟ್ಟ ಶಾಲೆ ಮತ್ತು ಇಂಗ್ಲಿಷ್‌ ಮಾಧ್ಯಮದ ಒಳ್ಳೆ ಶಾಲೆ ಎಂಬ ಆಯ್ಕೆ ಇದ್ದರೆ, ಎಲ್ಲರೂ ಒಳ್ಳೆಯ ಶಾಲೆಗೇ ಅಲ್ಲವೇ ಕಳುಹಿಸುವುದು? ಎಲ್ಲಾ ಶಾಲೆಗಳ ಗುಣಮಟ್ಟ ಏಕರೀತಿಯಾಗಬೇಕು. ತಮ್ಮ ಮೊಮ್ಮಕ್ಕಳನ್ನು ಆಂಗ್ಲ ಮಾಧ್ಯ್ಯಮ ಶಾಲೆಗಳಿಗೆ ಕಳುಹಿಸುತ್ತಿರುವುದನ್ನು ಸಾಹಿತಿ ಯು.ಆರ್‌.ಅನಂತ ಮೂರ್ತಿ ಸಮರ್ಥಿಸಿಕೊಂಡಿರುವುದು ಹೀಗೆ.

ಸಾಹಿತಿಗಳ ಸಭೆಯಲ್ಲಿ ಸಚಿವ ವಿಶ್ವನಾಥ್‌ ಬಗೆಗೆ ಅನುರಣಿಸಿದ ತರಾವರಿ ಮಾತುಗಳು ಹೀಗಿವೆ...

  • ಹುಚ್ಚುಹುಚ್ಚಾಗಿ ಮಾತಾಡುವ ವಿಶ್ವನಾಥ್‌ ಸಂಪುಟದಲ್ಲಿ ಮುಂದುವರೆಯಲು ಯೋಗ್ಯರಲ್ಲ, ತಕ್ಷಣವೇ ರಾಜೀನಾಮೆ ಕೊಡಲಿ.
  • ಸಾಹಿತಿಗಳ ಬಗ್ಗೆ ನಿಕೃಷ್ಟವಾಗಿ ಮಾತಾಡಿರುವ, ಕನ್ನಡ ಪರ ಹೋರಾಟಗಾರರಿಗೆ ಅವಮಾನ ಮಾಡಿರುವ ವಿಶ್ವನಾಥ್‌ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು.
  • ಐಎಎಸ್‌ ಅಧಿಕಾರಿಗಳ ಮರ್ಜಿಯಂತೆ ನಡೆದುಕೊಳ್ಳುವ ವಿಶ್ವನಾಥ್‌ ದಿನಕ್ಕೊಂದು ಸುಳ್ಳು ಹೇಳುವ ಮಂತ್ರಿ.
  • ಕನ್ನಡ ಎಂದರೆ ಕೇವಲ ಐವರು ಸಾಹಿತಿಗಳ ಸ್ವತ್ತಲ್ಲ. ಐದು ಕೋಟಿ ಕನ್ನಡಿಗರ ಆಸ್ತಿ ಎಂಬುದು ಮಂತ್ರಿಗಳಿಗೆ ಗೊತ್ತಿಲ್ಲ. ಸಂಪುಟದಲ್ಲಿ ಮುಂದುವರೆಯಲು ಅವರು ನಾಲಾಯಕ್ಕು.
ಈಗ ಇರುವ ಜಿಜ್ಞಾಸೆ 300 ಆಂಗ್ಲ ಮಾಧ್ಯಮಗಳ ಶಾಲೆ ತೆರೆಯಬೇಕೆ, ಬೇಡವೇ ಎಂಬುದು. ಸಚಿವರು ಇದರ ಪರ ಧೋರಣೆಯ ಕಾರಣ ಸಾಹಿತಿಗಳ ಮೇಲೆ ರಾಡಿ ಎರಚುತ್ತಿದ್ದಾರೆ. ತಮ್ಮ ಆದೇಶಕ್ಕೆ ಜೀವ ಕೊಡುವ ಯತ್ನದಲ್ಲಿ ಬಾಯಿಗೆ ಬಂದಂತೆ ಸಚಿವರು ಮಾತಾಡುತ್ತಿದ್ದಾರೆ ಎನ್ನುವುದು ಸಾಹಿತಿಗಳ ತಗಾದೆ. ಇವರಲ್ಲಿ ಯಾರು ಸರಿ, ಯಾರು ತಪ್ಪು? ಮುಂದೆ ಏನು ಮಾಡಬೇಕು ಅನ್ನುವುದನ್ನು ನೀವೇ ಹೇಳಿ?

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X