ಬೆಂಗಳೂರಿನಲ್ಲಿ ಇಂಗ್ಲಿಷೇ ಮಾತೃಭಾಷೆ : ಡಾ.ಅನಂತಮೂರ್ತಿ ವಿಷಾದ
ಬೆಂಗಳೂರು : ನಮ್ಮ ರಾಜ್ಯ ಕರ್ನಾಟಕ. ನಮ್ಮ ಭಾಷೆ ಕನ್ನಡ. ಹೇಳಿ ಕೇಳಿ ಇದು ಕನ್ನಡ ನಾಡು. ಆದರೂ, ನಮ್ಮ ನಾಡಿನ ರಾಜಧಾನಿ ಬೆಂಗಳೂರಿಗರ ಮಾತೃಭಾಷೆ ಮಾತ್ರ ಕನ್ನಡ ಅಲ್ಲ. ಇದು ಯಾರೋ ಹೇಳಿದ ಮಾತಲ್ಲ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರ ನೊಂದ ನುಡಿಗಳು.
ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಗೆಂಡಗಯ್ಯ ಒಳವು ಹಾಗೂ ಒಳದನಿ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಬೆಂಗಳೂರಿನಲ್ಲಿ ಕನ್ನಡ ಮಾತೃಭಾಷೆಯಾಗಿ ಉಳಿದಿಲ್ಲ. ಬದಲಿಗೆ ಇಲ್ಲಿ ಇಂಗ್ಲಿಷೇ ಮಾತೃಭಾಷೆಯಾಗಿದೆ ಎಂದು ವಿಷಾದಿಸಿದರು.
ಕನ್ನಡ ಇಂದು ಕರ್ನಾಟಕದಲ್ಲಿ ಉಳಿದಿರುವುದು, ಬೇರೆ ಭಾಷೆ ಕಲಿಯದ ವರ್ಗ ಹಾಗೂ ಅವಿದ್ಯಾವಂತರಿಂದಲೇ ಹೊರತು ವಿದ್ಯಾವಂತರಿಂದಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನಲ್ಲಿ ಈಹೊತ್ತು ಇಂಗ್ಲಿಷ್ ಮುಖ್ಯ ಸಂವಹನ ಭಾಷೆಯಾಗಿ ಮೆರೆಯುತ್ತಿದೆ. ಈ ನಿಟ್ಟಿನಲ್ಲಿ ವೈಚಾರಿಕ ನೆಲೆಯಲ್ಲಿ ಚಳವಳಿ ಹುಟ್ಟಿದರೆ ಅದು ಸಾರ್ಥಕವಾದೀತು ಎಂದರು.
ಓದು ನಮ್ಮನ್ನು ಬೆಳೆಸುತ್ತದೆ. ಜತೆಗೆ ಕನ್ನಡ ಕಾವ್ಯಗಳ ಬಗ್ಗೆ ನಂಬಿಕೆ ಉಳಿಯುತ್ತದೆ. ಇಂದಿನ ಕಾವ್ಯಕ್ಕಿಂತ ಹಿಂದಿನ ಕಾವ್ಯ ಚೆನ್ನಾಗಿತ್ತು ಎಂಬ ಹಳಹಳಿಕೆ ಒಳ್ಳೆಯದಲ್ಲ ಎಂದು ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಹೇಳಿದರು.
ಇಂದೂ ನಮ್ಮಲ್ಲಿ ಉತ್ತಮ ಕಾವ್ಯಗಳು ಹುಟ್ಟುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಕಿ.ರಂ. ನಾಗರಾಜು, ಡಾ. ಕೃಷ್ಣಮೂರ್ತಿ ಹನೂರು, ಪ್ರೊ. ಎಸ್. ಶಿವಾಜಿ ಜೋಯಸ್, ಪ್ರೊ. ಕೆ.ನ. ಶಿವತೀರ್ಥನ್ ಮೊದಲಾದವರು ಪಾಲ್ಗೊಂಡಿದ್ದರು.
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು