ಮಂದಿರ ಕಟ್ಟಿ ನಾವು ಸಾಧಿಸುವುದಾದರೂ ಏನು ?-ಅನಂತಮೂರ್ತಿ ಪ್ರಶ್ನೆ
ಬೆಂಗಳೂರು : ಗುಜರಾತಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸಲು ರಾಷ್ಟ್ರಪತಿಕೆ.ಆರ್. ನಾರಾಯಣನ್ ಮಧ್ಯಪ್ರವೇಶಿಸಿ ಅಲ್ಲಿ ಶಾಂತಿ ಸ್ಥಾಪಿಸಲು ಯತ್ನಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು.ಆರ್. ಅನಂತ ಮೂರ್ತಿ ರಾಷ್ಟ್ರಪತಿಯವರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.
ಗುಜರಾತ್ನ ಕೋಮು ಗಲಭೆಯಿಂದ ಆಗಿರುವ ಮನೋವ್ಯಥೆಯನ್ನು ವ್ಯಕ್ತಪಡಿಸಲು ಈ ಪತ್ರ ಬರೆಯುತ್ತಿದ್ದೇನೆ, ಅಲ್ಲಿ ಮುಗ್ಧರ ಕೊಲೆ, ಆಸ್ತಿ ಪಾಸ್ತಿ ಹಾನಿಯಾಗುತ್ತಿದ್ದರೂ ಪೊಲೀಸರು ಅಸಹಾಯಕರಾಗಿದ್ದಾರೆ. ಗುಜರಾತ್ ಸರಕಾರ ಸಾಮಾನ್ಯರಿಗೆ ರಕ್ಷಣೆ ಒದಗಿಸಲು ಅಸಮರ್ಥವಾಗಿರುವುದು ರುಜುವಾತಾಗಿದೆ ಎಂದು ಅನಂತಮೂರ್ತಿ ಪತ್ರದಲ್ಲಿ ವಿವರಿಸಿದ್ದಾರೆ.
ನಿಮಗೆ ತೋರಿದ ರೀತಿಯಲ್ಲಿ ಶಾಂತಿ ಸ್ಥಾಪಿಸಿ
ಕಳೆದ 15 ವರ್ಷಗಳಿಂದ ರಾಮಮಂದಿರ ನಿರ್ಮಾಣದ ವಿಷಯದಲ್ಲಿ ದೇಶದಲ್ಲಿ ಹಿಂಸೆ ವ್ಯಾಪಿಸುತ್ತಿದೆ. ನಾನು ಹಿಂದುವಾಗಿ, ಇಷ್ಟೊಂದು ರಕ್ತಪಾತಕ್ಕೆ ಕಾರಣವಾಗುವ ಯಾವುದೇ ದೇವಾಲಯ ಹಿಂದೂ ಸಮುದಾಯದ ಆಧ್ಯಾತ್ಮಿಕ ಭಾವನಯನ್ನು ಬಿಂಬಿಸಲಾರದು ಎಂದು ಭಾವಿಸಿದ್ದೇನೆ. ಹಿಂಸೆಯ ಮೂಲಕ ಮಂದಿರ ಕಟ್ಟಿ ನಾವು ಸಾಧಿಸುವುದಾದರೂ ಏನು ?
ಹಿಂದೂ ಓಟಿಗಾಗಿ ಅಥವಾ ಮುಸ್ಲಿಂ ಓಟಿಗಾಗಿ ಕೆಲವು ರಾಜಕಾರಣಿಗಳು ಈ ವಿವಾದವನ್ನು ಅವಕಾಶವವನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಆದರೆ ಜನಸಾಮಾನ್ಯರಿಗೆ ಅಲ್ಲಿ ಮಂದಿರ ಅಥವಾ ಮಸೀದಿ ನಿರ್ಮಾಣ ಅಪ್ರಸ್ತುತ ವಿಷಯ. ರಾಷ್ಟ್ರವೇ ತಲೆ ತಗ್ಗಿಸುವಂತಹ ಹಿಂಸಾ ಕಾರ್ಯಗಳು ನಡೆಯುತ್ತಿದೆ. ಆದ್ದರಿಂದ ನಿಮಗೆ ಸರಿ ತೋರಿದ ರೀತಿಯಲ್ಲಿ ನೀವು ಮಧ್ಯಪ್ರವೇಶಿಸಿ, ಶಾಂತಿ ಸಮಾಧಾನ ನೆಲೆಸುವಂತೆ ಮಾಡಿ ಎಂದು ಅನಂತ ಮೂರ್ತಿ ಪತ್ರದ ಮೂಲಕ ರಾಷ್ಟ್ರಪತಿಯವರನ್ನು ಪ್ರಾರ್ಥಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಗೂ ಪತ್ರವೊಂದನ್ನು ಬರೆದಿರುವ ಅನಂತ ಮೂರ್ತಿ, ಓಟಿನ ರಾಜಕಾರಣದಿಂದಾಗಿ ಈ ದುರಂತ ಆರಂಭವಾಗಿದೆ. ಈ ನರಮೇಧದಲ್ಲಿ ಸ್ವಾಮೀಜಿ ಪಾಲುದಾರರಾಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
(ಇನ್ಫೋ ವಾರ್ತೆ)