ರಾಷ್ಟ್ರೀಯ ನಾಟಕೋತ್ಸವಕ್ಕೆ ಸಿದ್ಧವಾಗುತ್ತಿರುವ ಮೈಸೂರಿನ ರಂಗಾಯಣ
ಮೈಸೂರು : ಈ ಬಾರಿಯ ರಾಷ್ಟ್ರೀಯ ನಾಟಕ ಉತ್ಸವ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆಯುತ್ತಿದ್ದು , ರಂಗಾಯಣದ ಸಭಾಂಗಣದಲ್ಲಿ ತಯಾರಿ ಕಾರ್ಯಗಳು ಭರದಿಂದ ಸಾಗಿವೆ. ಈ ಮೂಲಕ ದೆಹಲಿಯಾಚೆ ಪ್ರಥಮ ಬಾರಿಗೆ ನಾಟಕೋತ್ಸವ ಆಯೋಜಿಸುತ್ತಿರುವ ಕೀರ್ತಿ ಮೈಸೂರಿನ ರಂಗಾಯಣಕ್ಕೆ ಸಲ್ಲುತ್ತಿದೆ.
ಭೂಮಿಗೀತ ಮತ್ತು ಹೊರ ಸಭಾಂಗಣಗಳೂ ಸಿಂಗಾರಗೊಳ್ಳುತ್ತಿವೆ. ರಂಗಾಯಣದ ನಿರ್ದೇಶಕ ಪ್ರಸನ್ನ ಅವರ ಪ್ರಕಾರ ನಾಟಕೋತ್ಸವಕ್ಕೆ ಕನ್ನಡದ ಪ್ರಸಿದ್ಧ ವಚನಕಾರ್ತಿ ಅಕ್ಕಮಹಾದೇವಿಯ ಹೆಸರಿಡುವ ಪ್ರಸ್ತಾವನೆ ಇದೆ. ಭಾರತೀಯ ಮಹಿಳೆಯರಲ್ಲಿ ಸಾಧಕಳೆನಿಸಿಕೊಂಡ ಅಕ್ಕಳ ಹೆಸರಿಡುವುದು ಸೂಕ್ತವೆನಿಸುತ್ತದೆ ಎಂದು ಪ್ರಸನ್ನ ಹೇಳಿದ್ದಾರೆ.
ಪ್ರತಿ ಬಾರಿಯೂ ನಾಟಕೋತ್ಸವ ದೆಹಲಿಯಲ್ಲಿಯೇ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಆತಿಥ್ಯ ವಹಿಸುವ ಭಾಗ್ಯ ಮೈಸೂರಿಗೆ ಒದಗಿದೆ. ಆದರೆ ವ್ಯವಸ್ಥೆ ಮತ್ತು ಸೌಕರ್ಯದ ಬಗ್ಗೆ ಪ್ರಶ್ನೆಗಳು ಇದ್ದೇ ಇರುತ್ತವೆ. ರಂಗಾಯಣ ಕೇಂದ್ರವು ನಾಟಕೋತ್ಸವದಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ.
ನಾಟಕೋತ್ಸವದ ದೃಷ್ಠಿಯಿಂದ ಇಲ್ಲಿನ ಭೂಮಿಗೀತ ರಂಗಮಂದಿರವನ್ನು 27 ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುನಿಕಗೊಳಿಸಲಾಗುತ್ತಿದೆ. ಸಾಮಾನ್ಯವಾಗಿ ನಾಟಕೋತ್ಸವಕ್ಕೆ ಸುಮಾರು 40 ಲಕ್ಷ ರೂಪಾಯಿ ಖರ್ಚಾಗಲಿದೆ. ಅಲ್ಲದೆ ಮಹಿಳಾ ನಾಟಕ ತಂಡಗಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಕುರಿತ ನಾಟಕಗಳನ್ನು ಪ್ರದರ್ಶಿಸಲಾಗುವುದು. ಕೃಷ್ಣ ಸೋಬ್ತಿ, ಶಬಾನಾ ಅಜ್ಮಿ, ನಂದಿರ ಬಾಬರ್, ರತಿ ಬಾರ್ತಾಲೋಮಿಯೋ, ಮಾಲಾಶ್ರೀ ಹಶ್ಮಿ, ಬಿ. ಜಯಶ್ರೀ, ಪ್ರೇಮಾ ಕಾರಂತ್, ಅರುಂಧತಿ ನಾಗ್ ಮುಂತಾದ ಕಲಾವಿದರು ನಾಟಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ದೇಶದ ಪ್ರಸಿದ್ಧ ನಾಟಕ ತಂಡಗಳೆನಿಸಿಕೊಂಡಿರುವ, ದೆಹಲಿಯ ರಾಷ್ಟ್ರೀಯ ರಂಗಶಾಲೆ, ಪುಣೆಯ ನಾಟಕ ಅಕಾಡೆಮಿ, ಕಲ್ಕತ್ತಾದ ನಂದಿಕರ್, ಮುಂಬಯಿಯ ಏಕ್ ಜ್ಯೂಟ್, ದೆಹಲಿಯ ಜನನಾಟ್ಯ ರಂಗತಂಡಗಳು ಉತ್ಸವದಲ್ಲಿ ಭಾಗವಹಿಸುವುದು ಖಾತರಿಯಾಗಿದೆ.
(ಇನ್ಫೋ
ವಾರ್ತೆ)