ರೋಲ್ಕಾಲ್ ಟೈಂ ಬಂತಣ್ಣಾ, ರಾಜ್ಯೋತ್ಸವ ರಸಘಳಿಗೆಯಿದು ನೋಡಣ್ಣಾ!
*ಬಾ.ಶಂ.ಪ್ರ
ಸನ್ಮಾನ್ಯ ಕನ್ನಡಿಗರೆ,
ಮತ್ತೆ ನವೆಂಬರ್ 1 ಬಂದಿದೆ... ಇನ್ನು ಒಂದು ತಿಂಗಳು ಹಾಡುಗಳು ನಿಮ್ಮ ಕಿವಿಗೆ ಅಪ್ಪಳಿಸುತ್ತವೆ, ಕನ್ನಡ ಚರಿತ್ರೆ, ಸಂಸ್ಕೃತಿ ಬಗ್ಗೆ ಭಾಷಣ ಕೇಳಿ ಬರುತ್ತದೆ. ಗೂಂಡ- ಪೋಕ್ರಿಗಳಿಗೆ ಹಬ್ಬದ ಸುಗ್ಗಿ, ಇದೇ ಅಲ್ವ ಸ್ವಾಮಿ ರೋಲ್ ಕಾಲ್ ಮಾಡುವ ಟೈಮು.
ದೇಶ ವಿದೇಶದಲ್ಲೂ ಕನ್ನಡ ರಾಜ್ಯೋತ್ಸವ ಆಚರಿಸಿದ ಸುದ್ದಿ ಬರುತ್ತದೆ.....
ಕನ್ನಡ ಅಂದ್ರೆ ಬರೀ ನವೆಂಬರ್ ತಿಂಗಳು ಅಂತ ನಮ್ಮ ಜನರಲ್ಲಿ ಬೇರೂರಿದೆ. ವರ್ಷವೆಲ್ಲ ಆಂಗ್ಲ ಪರ ಭಾಷೆ ಹಾಡು, ಚಿತ್ರ ನೋಡುತ್ತಿದ್ದ ನಮ್ಮ ಧೀರ ಕನ್ನಡಿಗ ನವೆಂಬರ್ನಲ್ಲಿ ಮಾತ್ರ ಸಿರಿಗನ್ನಡಂ ಗೆಲ್ಗೆ ಅನ್ನುತ್ತಾನೆ. ಮತ್ತೆ ಆ ಕಂಬಗಳಲ್ಲಿ ಬಾವುಟ ಹಾರಿಸುತ್ತಾರೆ. ಇನ್ನು ಒಂದು ವರ್ಷ ಆ ಕಡೆ ತಲೆ ಹಾಕಿ ಮಲಗುವುದಿಲ್ಲ. ಇದೇನಾ ಕನ್ನಡ ರಾಜ್ಯೋತ್ಸವಾ .....?
ಕನ್ನಡ ಜನ ಸಹಿಷ್ಣುತೆ , ಸ್ನೇಹ ಪರಕ್ಕೆ ಹೆಸರು ಎಂದು ರಾಜಕಾರಣಿಗಳ ಕಿತ್ತು ಹೋದ ಭಾಷಣ ಕೇಳಿ ಕೇಳಿ ಕಿವಿತೂತು ಬಿದ್ದಿದೆ... ಇದಕ್ಕೆ ಒಳ್ಳೆಯ ಉದಾಹರಣೆ ಕನ್ನಡ ರಾಜ್ಯೋತ್ಸವದಂದು ಒಮ್ಮೆ ಬೆಂಗಳೂರಿಗೆ ಬನ್ನಿ ಸ್ವಾಮಿ. ಇಲ್ಲಿ ನಿಮಗೆ ಎಲ್ಲಾ ಸಂಸ್ಕೃತಿಗಳ ಪರಿಚಯವಾಗುತ್ತದೆ. ಆದರೆ ಕನ್ನಡ ಸಂಸ್ಕೃತಿ ಒಂದನ್ನು ಬಿಟ್ಟು... ಯಾಕೆ ಅಂದ್ರೆ ಅದು ಎಂದೋ ಕೊಚ್ಚಿಕೊಂಡು ಹೋಗಿದೆ. ಇದಕ್ಕಾ ಕನ್ನಡ ರಾಜ್ಯೋತ್ಸವ....
ಕೆಲವು ವರುಷದ ಹಿಂದೆ ಬೆಂಗಳೂರಿನಲ್ಲಿ ಮುಖ್ಯ ಕೆಲಸ (ಕೂಲಿ, ಮರಗೆಲಸ, ಮನೆ ಕಟ್ಟುವ ಕೆಲಸ..)ಗಳೆಲ್ಲ ತಮಿಳರ ಪಾಲಾಗಿತ್ತು, ತುಂಬ ಜನ ಅಲ್ಲಿಂದ ಇಲ್ಲಿಗೆ ಕೆಲಸಕ್ಕೆ ಬಂದರು. ಆದ್ರೆ ಯಾರೂ ವಾಪಾಸ್ ಹೋಗಲಿಲ್ಲ. ... ಈ 2 ಎರಡು ವರ್ಷಗಳಿಂದ ರಾಜಸ್ತಾನ, ಬಿಹಾರದಿಂದ ಬಂದ ಜನರ ಹಾವಳಿ ಹೆಚ್ಚಾಗಿದೆ... ಯಾವುದೇ ಬಿಎಂಟಿಸಿ ಬಸ್ಸು ಹತ್ತಿ ಎಲ್ಲಾ ಆಸನಗಳನ್ನು ಹೊಡೆದಾಡಿ ಬಡಿದಾಡಿ ಆಕ್ರಮಿಸಿಕೊಂಡಿರುತ್ತಾರೆ. ನಮ್ಮ ಧೀರ ಕನ್ನಡಿಗ ನಿಂತು ಪ್ರಯಾಣ ಮಾಡುತ್ತಾನೆ.
ಇದು ಬರೀ ಆರಂಭ ಅಷ್ಟೇ. ಕೆಲವು ವರ್ಷದ ಹಿಂದೆ ತಮಿಳು ಜನಗಳು ಹೀಗೆ ಮಾಡುತ್ತಿದ್ದರು. ...ಈಗ ಅವರು ನಮ್ಮ ನಗರ ಪಾಲಿಕೆ ಸದಸ್ಯರಾಗಿ ಅಲ್ಲಿ ಸ್ಥಾನ ಆಕ್ರಮಿಸಿಕೊಂಡಿರುತ್ತಾರೆ. ಮುಂದೆ ಏನು.. ಹಿಂದೆ ಎಷ್ಟೋ ಜನ ಕರ್ನಾಟಕದ ವಿಧಾನ ಸಭೆ ಕೂಡ ಪ್ರವೇಶಿಸಿದ್ದಾರೆ. ಇಂತಹ ಜನಗಳ ಕೈಗೆ ಅಧಿಕಾರ ಸಿಕ್ಕರೆ ಹೇಗೆ ತಾನೆ ಕನ್ನಡ ಸಂಸ್ಕೃತಿ ಉಳಿಯುತ್ತದೆ ?
ಈ ವಲಸೆ ನಿಲ್ಲದಿದ್ದರೆ ಕರ್ನಾಟಕ ಬೇರೆಯವರ ಪಾಲಾಗುವುದರಲ್ಲಿ ಸಂದೇಹವೇ ಇಲ್ಲ.(ಉದಾ: ಕಾಸರಗೋಡು, ಬೆಳಗಾಂ ಮತ್ತು ಹೊಸೂರು ಸಾಕು) ಸಾಲದ್ದಕ್ಕೆ ಸಂಸ್ಕೃತಿ ಕನ್ನಡ ಹಿತರಕ್ಷಣೆ ಸಮಿತಿ ಬೇರೆ ಇದೆ... ಇಷ್ಟೆಲ್ಲಾ ಜೊತೆಗೆ ನವೆಂಬರ್ 1 ಆಚರಿಸುವ ಅಗತ್ಯ ಇದ್ಯಾ?
ಜನಗಳಿಗೆ ವರ್ಷದಲ್ಲಿ ಯಾವ ‘ದಿನ’ ಇರುತ್ತದೋ ಆ ದಿನ ಅದನ್ನು ಮಾಡಬೇಕು / ಮಾಡಬಾರದು ಅನ್ನುವ ವಿಚಾರ ತಲೆ ಹೊಕ್ಕಿದೆ ಉದಾ. ಟೊಬಾಕೋ ದಿನ ಮಾತ್ರ ಬೀಡಿ ಸಿಗರೇಟು ಸೇದಬೇಡ, ಉಳಿದ ಪೂರ್ತಿ ವರ್ಷ ಹೊಗೆಯಲ್ಲಿ ಮಿಂದು ಪಾವನವಾಗು ಅನ್ನುವ ಹಾಗೆ ನವೆಂಬರ್ ಒಂದು ಆಗಿದೆ. ಈ ದಿನ ಮಾತ್ರ ಕನ್ನಡ (ಕಷ್ಟ ಪಟ್ಟು ) ಮಾತಾಡೋಣ ಅನ್ನುವ ಹಾಗಾಗಿದೆ.
ನಮ್ಮ ಮನೇಲಿ ನಮ್ಮ ಇರುವಿಕೆ ತೋರಿಸಬೇಕಾ ?
ಒಮ್ಮೆ ಕನ್ನಡ ಸಂಘ ನಡೆಸಿದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕಷ್ಟ ಪಟ್ಟು ಹೋದೆ. ಸಂಘದ ಅಧ್ಯಕ್ಷ ಕನ್ನಡ ಉಳಿಸಿ ಬೆಳೆಸಿ ಎಂದು ಆಂಗ್ಲದಲ್ಲಿ ಭಾಷಣ ಮಾಡುತ್ತಿದ್ದ... ಬೇಜಾರಾಗಿ, ಬಂದ ದಾರಿಗೆ ಸುಂಕವಿಲ್ಲವೆಂದುಕೊಂಡು ವಾಪಾಸ್ಸಾದೆ. ‘ಅಣ್ಣಾ ನಾವು ಕೂಡ ಬದುಕಿದ್ದೇವೆ...’ ಎಂದು ತಿಳಿಸೋಕ್ಕೇನು ಈ ಆಚರಣೆ? ನಮ್ಮ ಮನೇಲಿ ನಮ್ಮ ಇರುವಿಕೆ ತೋರಿಸಬೇಕಾ? ದೂರದಲ್ಲಿ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ...ಎಂಬ ಹಾಡು ಕೇಳಿ ಬರುತ್ತಿದೆ. ನಾನು ನಕ್ಕು , ‘ಸಿರಿಗನ್ನಡಂ ಗೆಲ್ಗೆ ’ ಅಂದೆ.
ಕೊಸರು : ನವೆಂಬರ್ 1 ಕ್ಕೆ ಕನ್ನಡದ ಮುಖ್ಯವಾಹಿನಿಯಲ್ಲಿ ಪರಭಾಷೆ ತಾರೆ (ಕರ್ನಾಟಕದಲ್ಲಿ ಇದ್ದು ಕನ್ನಡ ಬರದಿರುವ ತಾರೆಗಳು) ನಡೆಸಿಕೊಡುವ ವಿಶೇಷ ಕಾರ್ಯಕ್ರಮ ಬೇರೆ ಇದೆ Dont miss it
ವಾರ್ತಾ
ಸಂಚಯ
ಮುಖಪುಟ
/
ಸಾಹಿತ್ಯ
ಸೊಗಡು