ಉತ್ತರಕನ್ನಡ ಸಾಹಿತಿಗಳಿಗೆ ಮಲತಾಯಿಯಾದ ಸಾಹಿತ್ಯ ಪರಿಷತ್ತು
ಶಿರಸಿ: ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಕನ್ನಡ ಸಾಹಿತಿಗಳ ಬಗೆಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಲೇ ಬಂದಿದೆ ಎಂದು ಸಾಹಿತಿ ಶಾ.ಮಂ.ಕೃಷ್ಣರಾಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈವರೆಗೆ ನಡೆದಿರುವ 65 ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಸ್ಥಾನ ಒಂದು ಬಾರಿಯೂ ಉತ್ತರಕನ್ನಡದ ಸಾಹಿತಿಗಳಿಗೆ ಸಿಕ್ಕಿಲ್ಲ . ಉತ್ತರ ಕನ್ನಡದಲ್ಲಿ ಪ್ರತಿಭಾವಂತರಾದ ಹಿರಿಯ ಸಾಹಿತಿಗಳಿದ್ದರೂ ಬೆಂಗಳೂರು, ಮೈಸೂರು ಕೇಂದ್ರೀಕೃತವಾದ ಪರಿಷತ್ನ ಅಧ್ಯಕ್ಷರು ಉತ್ತರಕನ್ನಡದ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ ಎಂದು ಕೃಷ್ಣರಾಯ ಟೀಕಿಸಿದರು. ಹೆಗ್ಗರಣಿಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ಶೇಟ್ ಹಾರ್ಸಿಕಟ್ಟಾ ಅವರ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಪರಿಷತ್ ಸುಮಾರು 2 ಸಾವಿರ ಪುಸ್ತಕಗಳನ್ನು ಪ್ರಕಟಿಸಿದೆ. ಇದರಲ್ಲಿ ಉ್ತತರಕನ್ನಡದ ಲೇಖಕರ ನಾಲ್ಕೈದು ಪುಸ್ತಕಗಳಿರಬಹುದು. ಇನ್ನು ಮುಂದಾದರೂ ಉತ್ತರಕನ್ನಡ ಸಾಹಿತಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಪರಿಷತ್ತಿನ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಅವರಿಗೆ ಕೃಷ್ಣರಾಯರು ಮನವಿ ಮಾಡಿದರು.
40 ಸಾವಿರಕ್ಕೇರಿದ ಪರಿಷತ್ ಸದಸ್ಯರ ಸಂಖ್ಯೆ
ಕಳೆದ ಮೂರು ತಿಂಗಳಲ್ಲಿ 15 ಸಾವಿರ ಮಂದಿ ಪರಿಷತ್ತಿನ ಸದಸ್ಯತ್ವ ಪಡೆದಿದ್ದು, ಇದರೊಂದಿಗೆ ಪರಿಷತ್ತಿನ ಸದಸ್ಯರ ಸಂಖ್ಯೆ 1 ಲಕ್ಷಕ್ಕೇರಿದೆ. ಮೂರು ವರ್ಷಗಳಲ್ಲಿ ಸದಸ್ಯರ ಸಂಖ್ಯೆಯನ್ನು 1 ಲಕ್ಷಕ್ಕೆ ಮುಟ್ಟಿಸುವ ಗುರಿಯನ್ನು ಪರಿಷತ್ ಹೊಂದಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ತಾಲ್ಲೂಕು, ಹೋಬಳಿ ಸಾಹಿತ್ಯ ಸಮ್ಮೇಳನಗಳು ಪ್ರತಿವರ್ಷ ನಡೆಯಬೇಕು. ಜನರಲ್ಲಿ ಪುಸ್ತಕ ಕೊಂಡು ಓದುವ ಪ್ರವೃತ್ತಿ ಬೆಳೆಯಬೇಕು ಎಂದು ಪುನರೂರು ಆಶಿಸಿದರು. ಇದೇ ಸಂದರ್ಭದಲ್ಲಿ ಅತ್ತಿಮುರುಡು ವಿಶ್ವೇಶ್ವರ ಅವರ ನ್ಯಗ್ರೋಧ ಕೃತಿಯನ್ನು ಜಾನಪದ ಸಂಶೋಧಕ ಡಾ। ಎನ್. ನಾಯಕ ಬಿಡುಗಡೆ ಮಾಡಿದರು.
(ಇನ್ಫೋ ವಾರ್ತೆ)