ಮದ್ರಾಸ್ ವಿವಿ ವಜ್ರಮಹೋತ್ಸವದಲ್ಲಿ ರಾಷ್ಟ್ರೀಯ ಕನ್ನಡ ಮೇಳದ ರಂಗು
ಚೆನ್ನೈ: ಮದ್ರಾಸ್ ವಿಶ್ವವಿದ್ಯಾಲಯದ ವಜ್ರಮಹೋತ್ಸವದ ಅಂಗವಾಗಿ ಮಾರ್ಚ್ 21 ಮತ್ತು 22ರಂದು ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ರಾಷ್ಟ್ರೀಯ ಸಮಾವೇಶವನ್ನು ವಿವಿಯ ಕನ್ನಡ ವಿಭಾಗ ಆಯೋಜಿಸಿದೆ.
ವಿಶ್ವವಿದ್ಯಾಲಯದ ಮರಿನಾ ಕ್ಯಾಂಪಸ್ನಲ್ಲಿ ಸಮಾವೇಶವನ್ನು ಆಯೋಜಿಸಲಾಗಿದ್ದು, ಸಮ್ಮೇಳನದ ಮುಖ್ಯ ವಿಷಯ ‘20ನೇ ಶತಮಾನದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯ’ . ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಪ್ರೊ. ಹಂಪಾ ನಾಗರಾಜಯ್ಯ ಈ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸುವರು.
ಮರೀನಾ ಕ್ಯಾಂಪಸ್ನ ನಿರ್ದೇಶಕ ಮತ್ತು ಕನ್ನಡದ ಹಿರಿಯ ಕವಿ, ಪ್ರೊ. ನಿಸಾರ್ ಅಹ್ಮದ್ ಅವರು ಈ ಸಮ್ಮೇಳನದಲ್ಲಿ ವಿಶೇಷ ಭಾಷಣ ಮಾಡುವರು. ಮದ್ರಾಸ್ ವಿವಿಯ ಕುಲಪತಿ ಪ್ರೊ. ಪೊನ್ ಕೋದಂಡ ರಾಮಯ್ಯ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ನಾಲ್ಕು ಗೋಷ್ಠಿಗಳನ್ನು ಆಯೋಜಿಸಲಾಗಿದೆ. 20ನೇ ಶತಮಾನದಲ್ಲಿ ಕನ್ನಡ ಭಾಷೆ, ಕನ್ನಡದಲ್ಲಿ ತುಲನಾತ್ಮಕ ಸಾಹಿತ್ಯ, ಕನ್ನಡ ಸಾಹಿತ್ಯದಲ್ಲಿ ಆಧುನಿಕ ಪ್ರವೃತ್ತಿ, ಹಾಗೂ ಕನ್ನಡದಲ್ಲಿ ಜನಪದ ಅಧ್ಯಯನ ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಪ್ರೊ. ಹಂಪಾ ನಾಗರಾಜಯ್ಯ, ಪ್ರೊ. ಪಿ. ಎಸ್. ಶ್ರೀನಿವಾಸ, ಪ್ರೊ. ಜಿ.ಎಚ್. ನಾಯಕ್ ಮತ್ತು ಪ್ರೊ. ಎಚ್. ಎಸ್. ರಾಮಚಂದ್ರ ಗೌಡ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸುವರು.
(ಇನ್ಫೋ ವಾರ್ತೆ)