ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಚಿ. ಶ್ರೀನಿವಾಸರಾಜು
ಬೆಂಗಳೂರು : ಜ.25 ರಿಂದ ಮೂರು ದಿನಗಳ ಕಾಲ ಗೌರಿಬಿದನೂರು ತಾಲೂಕು ಹೊಸೂರಿನಲ್ಲಿ ನಡೆಯಲಿರುವ ಕೋಲಾರ ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ. ಚಿ. ಶ್ರೀನಿವಾಸ ರಾಜು ಆಯ್ಕೆಯಾಗಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನವನ್ನು ಹಿರಿಯ ಸಾಹಿತಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು ಉದ್ಘಾಟಿಸಲಿದ್ದಾರೆ. ಈ ವಿಷಯವನ್ನು ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಎನ್.ಎಚ್. ಶಿವಶಂಕರರೆಡ್ಡಿ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಜ.ಚ.ನಿ. ನಂಜುಂಡಾರಾಧ್ಯ, ಡಿ.ವಿ. ಗುಂಡಪ್ಪ, ಸು. ವೆಂಕಟಾಚಲಯ್ಯ, ಇಡಗೂರು ರುದ್ರಕವಿ ಹಾಗೂ ಜಿಲ್ಲೆಗೆ ಕೀರ್ತಿತಂದ ಸರ್. ಎಂ. ವಿಶ್ವೇಶ್ವರಯ್ಯನವರ ಜ್ಞಾಪಕಾರ್ಥವಾಗಿ ಸ್ವಾಗತ ಕಮಾನುಗಳು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮಂಟಪ ಹಾಗೂ ಯೋಗಿ ನಾರೇಯಣ ಮಂಟಪ ನಿರ್ಮಿಸಲಾಗುವುದು. ಈ ಮಂಟಪಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದು ಅವರು ವಿವರಿಸಿದರು.
ಸಮ್ಮೇಳನದ ಅಂಗವಾಗಿ ‘ಹೊಸಪಥ ’ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು ಎಂದು ಈ ಸಂದರ್ಭದಲ್ಲಿ ಹಾಜರಿದ್ದ ಪ್ರಧಾನ ಕಾರ್ಯದರ್ಶಿ ಕಾ.ನಾ. ಶ್ರೀನಿವಾಸ್ ತಿಳಿಸಿದರು. ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 17 ಮಂದಿಯನ್ನು ಸನ್ಮಾನಿಸಲಾಗುವುದು.
(ಇನ್ಫೋ ವಾರ್ತೆ)