ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಮಾಡಿಕೊಳ್ಳುವುದೂ ಒಂದು ಕಲೆ !

By Staff
|
Google Oneindia Kannada News

ನಾಡು ನುಡಿಗೆ ಗಮನಾರ್ಹ ಸೇವೆ ಸಲ್ಲಿಸಿದವರನ್ನು ಜನತೆ ಯಾವ ರೀತಿ ನೆನೆಯಬೇಕು? ಇಂಥ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸುಲಭವಲ್ಲ . ಸೇವೆ ಸಲ್ಲಿಸಿದವರಿಗೆಲ್ಲ ಪ್ರತಿಫಲ ದೊರಕಬೇಕೆಂದು ನಿರೀಕ್ಷಿಸುವುದೂ ಸಾಧ್ಯವಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿದ್ದವರಿಗೇ ಬೆಂಗಳೂರಿನಲ್ಲೊಂದು ಮನೆ ಇಲ್ಲದಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಂತಿರುವಾಗ ಜಾನಪದ ಜಂಗಮ ಎಸ್‌.ಕೆ.ಕರೀಂಖಾನ್‌ ಅವರಿಗೆ ಬೆಂಗಳೂರಿನಲ್ಲೊಂದು ಮನೆ ಇರಬೇಕಿತ್ತು ಎಂದು ನಿರೀಕ್ಷಿಸುವುದು ಹೇಗೆ?

ಕರೀಂಖಾನ್‌ ಅವರಿಗೆ ಮನೆಯಾಂದು ಇರಬೇಕಿತ್ತು ! ಎಂದು ಅವರ ಅಭಿಮಾನಿಗಳಿಗೆ ಅನ್ನಿಸಿರುವುದು ಇದೇ ಮೊದಲೇನಲ್ಲ . ಆದರೆ, ಮನೆ ಮಾಡಿಕೊಳ್ಳುವ ಕಲೆಗಾರಿಕೆ ಅವರಿಗಿಲ್ಲ , ಯಾರೇನು ಮಾಡುವುದು!? ಇಂಥ ಅನ್ನಿಸಿಕೆ ತೀವ್ರವಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕರೀಂಖಾನ್‌ರಿಗೆ ಮನೆ ಕೊಡುವ ಪ್ರಯತ್ನವನ್ನೂ ನಡೆಸಿದರು. ಆದರೆ, ಈ ಪ್ರಯತ್ನದಲ್ಲಿ ರಾಜಕೀಯದ ಎಳೆಗಳು ಸುಳಿದಾಡಿದಾಗ ಹಂಗಿನ ಅರಮನೆ ಒಲ್ಲೆನೆಂದರು, ಸ್ವಾಭಿಮಾನದ ಖಾನ್‌. ಆನಂತರವೂ ಕರೀಂಖಾನ್‌ ಅವರಿಗೆ ಮನೆಯಾಂದು ಬೇಕು ಎನ್ನುವ ಕೂಗು ಉಳಿದೇ ಇದೆ. ಅದರ ಸೊಲ್ಲು ಬುಧವಾರವೂ ಕೇಳಿಸಿಕೊಂಡಿತು.

ಬುಧವಾರ ಇಳಿಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಚಿತ್ರಕರ್ಮಿ ಜಿ.ವಿ. ಅಯ್ಯರ್‌ ಅವರು ಕರೀಂಖಾನ್‌ ಅವರಿಗೆ ಚಿ.ಉದಯಶಂಕರ್‌ ಪ್ರಶಸ್ತಿ (ಕನ್ನಡ ಚಿತ್ರೋದ್ಯಮದ ಪ್ರಶಸ್ತಿ) ಪ್ರದಾನ ಮಾಡಿ ಗೌರವಿಸಿದಾಗ ಅನೇಕರಿಗೆ ಖಾನ್‌ ಅವರಿಗೊಂದು ಮನೆಯಿಲ್ಲ ಎನ್ನುವುದು ನೆನಪಾಯಿತು. ಆದರೆ ಮನೆ ಕೊಡುವರಾರು? ಆ ಅದೃಷ್ಟ ಕನ್ನಡಿಗರಿಗೆಲ್ಲಿದೆ!?

ಉಳ್ಳವರು ಆಗ್ರಹಿಸುವರು !

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ.ಸರೋಜಾದೇವಿ ಭಾವವಶರಾಗಿದ್ದರು. ಮೇರು ಸಾಹಿತಿಗೆ ಇರಲಿಕ್ಕೊಂದು ಮನೆ ಬೇಡವೇ ಎಂದು ಥೇಟ್‌ ಕಿತ್ತೂರು ಚೆನ್ನಮ್ಮನ ಶೈಲಿಯಲ್ಲಿ ಅವರು ಪ್ರಶ್ನಿಸಿದರು. ಮನೆಯಾಂದನ್ನು ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ಕರೀಂಖಾನ್‌ ಎಲ್ಲವನ್ನೂ ತಮ್ಮ ಯಾವತ್ತಿನ ಮೌನದಿಂದಲೇ ಕೇಳಿಸಿಕೊಳ್ಳುತ್ತಿದ್ದರು. ಆ ಮೌನದಿಂದಾಗಿಯೇ ಅವರಿಗೆ ಈವರೆಗೂ ಮನೆ ಸಿಕ್ಕಿಲ್ಲ ಅನ್ನುವುದು ಸರೋಜಾದೇವಿ ಅವರಿಗೆ ಅರ್ಥವಾಗಲೇ ಇಲ್ಲ . ಸರ್ಕಾರದ ಮಾತು ಒತ್ತಟ್ಟಿಗಿರಲಿ, ದೇವಿ ಸೇರಿದಂತೆ ಚಿತ್ರೋದ್ಯಮ ಮನಸ್ಸು ಮಾಡಿದಲ್ಲಿ ಖಾನ್‌ ಅವರಿಗೆ ಮನೆ ದೊರಕುವುದು ಎಷ್ಟರ ಮಾತು? ಆದರೆ, ಆಗ್ರಹಿಸುವವರಿಗೆ, ಭಾಷಣ ಮಾಡುವವರಿಗೆ ಸರ್ಕಾರ ಮಾತ್ರ ಕಣ್ಣಿಗೆ ಬೀಳುತ್ತದೆ.

ಖಾನ್‌ರಿಂದ ಉದಯಶಂಕರ್‌ ಅವರತ್ತ ತಿರುಗಿದ ಸರೋಜಾದೇವಿ, ಉದಯಶಂಕರ್‌ ಅವರ ಕುಟುಂಬದವರಿಗೆ ಬೆಂಗಳೂರಲ್ಲೊಂದು ನೆಲೆ ಬೇಕೆಂದರು. ಚಿ. ಉದಯಶಂಕರ್‌ ರಚಿಸಿದ ಗೀತೆಗಳು ರಾಜ್ಯದ ಮನೆ ಮೂಲೆಗಳಲ್ಲಿ ನಿತ್ಯ ಅನುರಣಿಸುತ್ತಿರುವಾಗ ಅವರ ಕುಟುಂಬದವರಿಗೊಂದು ನೆಲೆ ಬೆಂಗಳೂರಿನಲ್ಲಿ ಬೇಡವೇ? ದೇವಿ ಏರಿದ ಕಂಠದಲ್ಲಿ ಪ್ರಶ್ನಿಸಿದರು. ಉದಯಶಂಕರ್‌ ಪತ್ನಿ ಶಾರದಾ ಕಾರ್ಯಕ್ರಮದಲ್ಲಿ ಹಾಜರಿದ್ದರು. ಪಾರ್ವತಮ್ಮ ರಾಜ್‌ಕುಮಾರ್‌ ವೇದಿಕೆಯಲ್ಲಿದ್ದರು.

ಸಾಹಿತಿ ಎಂದು ಕರೆದುಕೊಳ್ಳಬೇಡಿರೋ..

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರ ಮಾತಿನದು ಬೇರೆಯೇ ದಿಕ್ಕು. ಸಿನಿಮಾ ಸಾಹಿತಿಗಳನ್ನು ಚಿತ್ರ ಸಾಹಿತಿಗಳು ಎನ್ನಬೇಕೆ ಹೊರತು, ಸಾಹಿತಿಗಳು ಅನ್ನಬಾರದು ಎಂದರು ಬರಗೂರು. ಸಾಹಿತ್ಯದಲ್ಲಿ ಬಗೆಬಗೆ ಬಗೆಗಳಿವೆ. ಆ ಬಗೆಗಳಲ್ಲಿ ಸಿನಿಮಾ ಸಾಹಿತ್ಯವೂ ಒಂದು. ಚಿತ್ರ ಸಾಹಿತ್ಯ ಅನೇಕ ಒತ್ತಡಗಳ ನಡುವೆ ಹುಟ್ಟುತ್ತದೆ. ಆ ಕಾರಣವಾಗಿ ‘ಚಿತ್ರ ಸಾಹಿತಿ’ ಪದ ಪ್ರಯೋಗವೇ ಸರಿ ಎಂದು ತಮ್ಮ ಮಾತನ್ನು ಬರಗೂರು ಸಮರ್ಥಿಸಿಕೊಂಡರು. ಸಾಹಿತಿ, ಚಿತ್ರ ಸಾಹಿತಿ ಎಂದು ಎರಡೂ ಬಗೆಯಲ್ಲಿ ಕರೆಸಿಕೊಳ್ಳುವ ಆಸೆ ಬರಗೂರರಿಗೆ ಎಂದು ವೇದಿಕೆಯ ಹಿಂಭಾಗದಲ್ಲಿ ಸದ್ದಾದ ಸಣ್ಣದನಿ ಬರಗೂರರಿಗೇ ಕೇಳಿಸಲಿಲ್ಲ .

ಉದಯಶಂಕರ್‌, ಕರೀಂಖಾನ್‌ ಅಂಥವರೇ ತಮ್ಮ ಹಾಡುಗಳನ್ನು ಸಾಹಿತ್ಯ ಎಂದು ಕರೆದುಕೊಂಡಿಲ್ಲ . ಆದರೆ, ಇತ್ತೀಚಿನ ಕೆಲವು ಮಂದಿ ತಮ್ಮ ಗೀತೆಗಳನ್ನು ಸಾಹಿತ್ಯ ಎಂದು ಕರೆದುಕೊಳ್ಳುತ್ತಿದ್ದಾರೆ ಎಂದು ಬರಗೂರು ಟೀಕಿಸಿದರು.

ಆಕಾಶವೇ ಬೀಳಲಿ ಮೇಲೆ...

ಉದಯಶಂಕರರ ಗೀತೆಯನ್ನು ನೆನಪಿಸಿಕೊಳ್ಳುವ ಮೂಲಕ ಪಿ.ಬಿ.ಶ್ರೀನಿವಾಸ್‌ ಸಭಿಕರಿಗೆ ಮುಖಾಮುಖಿಯಾದರು. ಶಾರೀರ ಕೈಕೊಟ್ಟ ನಂತರ ಸಮಯೋಚಿತವಾಗಿ ಲೇಖನಿ ಕೈಗೆತ್ತಿಕೊಳ್ಳುವ ಪಿ.ಬಿ.ಶ್ರೀನಿವಾಸ್‌, ಉದಯಶಂಕರ್‌ ಹಾಗೂ ಕರೀಂಖಾನ್‌ ಇಬ್ಬರ ಬಗೆಗೂ ತಲಾ ಒಂದೊಂದು ಕವಿತೆಗಳನ್ನು ವಾಚಿಸಿದರು. ಸಭಿಕರು ಚಪ್ಪಾಳೆ ತಟ್ಟಿದರು.

ಕಾರ್ಯಕ್ರಮದಲ್ಲಿ ಇವರೂ ಹಾಜರಿದ್ದರು-
ಸಂಸದ ಅಂಬರೀಷ್‌, ಜಯಂತಿ (ಬಿ.ಎಸ್‌.ದೇವಿ ಕಾರಣದಿಂದಾಗಿ ಮಾತನಾಡುವ ಅವಕಾಶ ವಂಚಿತೆ), ಜಯಮಾಲ, ಎಸ್‌.ಎ.ಚಿನ್ನೇಗೌಡ ...

ವಾರ್ತಾ ಸಂಚಯ:
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X