‘ಶಿವರಾಮ ಕಾರಂತ ಸಾಹಿತ್ಯ ಸಾರಥಿ’ ಯೋಜನೆ : ಸರ್ಕಾರಕ್ಕೆ ಕೋರ್ಟ್ ನೋಟಿಸ್
ಬೆಂಗಳೂರು : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮಕಾರಂತರ ಕೃತಿಗಳನ್ನು ಖಾಸಗಿ ಪ್ರಕಾಶಕರ ನೆರವಿನಿಂದ ಹೊರತರುವ ರಾಜ್ಯ ಸರಕಾರದ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಹುಬ್ಬಳ್ಳಿಯ ಎಂ. ಎ. ಮಹೇಶ್ ಮತ್ತು ಬೆಂಗಳೂರಿನ ಬಿ. ಚಿಕ್ಕದೇವರಾಜು ಎಂಬಿಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ಮುಖ್ಯನ್ಯಾಯಾಧೀಶರಾದ ನ್ಯಾಯಮೂರ್ತಿ ಎನ್.ಕೆ. ಜೈನ್ ಹಾಗೂ ನ್ಯಾಯಮೂರ್ತಿ ಎನ್.ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಸರಕಾರಕ್ಕೆ ಹಾಗೂ ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿತು.
'ಶಿವರಾಮ ಕಾರಂತ ಸಾಹಿತ್ಯ ಸಾರಥಿ’ ಎಂಬ ಹೆಸರಿನಲ್ಲಿ ಡಾ. ಶಿವರಾಮ ಕಾರಂತರ ಸಮಗ್ರ ಕೃತಿಗಳನ್ನು 35 ಸಂಪುಟಗಳಲ್ಲಿ ಹೊರತಂದು ಸಾಹಿತ್ಯಾಸಕ್ತರಿಗೆ ಕಡಿಮೆ ದರದಲ್ಲಿ ಪೂರೈಸುವ ಸಲುವಾಗಿ ರಾಜ್ಯ ಸರಕಾರ ಯೋಜನೆಯಾಂದನ್ನು ರೂಪಿಸಿದ್ದು, ಅದನ್ನು ಎಸ್ಬಿಎಸ್ ಪ್ರಕಾಶನ ಸಂಸ್ಥೆಗೆ ವಹಿಸಿಕೊಟ್ಟಿದೆ.
ಈ ಮಹತ್ಕಾರ್ಯಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಐದು ಲಕ್ಷ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೂ ಪ್ರಕಾಶಕರು ಪ್ರತಿ ಸಂಪುಟದ ಮುಖ ಬೆಲೆಯನ್ನು 50 ರುಪಾಯಿ ಎಂದು ನಿರ್ಧರಿಸಿದ್ದಾರೆ. ಇದರಿಂದಾಗಿ ಸರ್ಕಾರದ ಯೋಜನೆಯ ಮೂಲ ಉದ್ದೇಶಕ್ಕೆ ಪೆಟ್ಟು ಬಿದ್ದಿದೆ, ಆದ ಕಾರಣ ಸರಕಾರ ಹಾಲಿ ಮುದ್ರಕರ ನೇಮಕ ರದ್ದು ಪಡಿಸಿ, ಬೇರೆ ಪ್ರಕಾಶಕರಿಗೆ ಈ ಯೋಜನೆ ವಹಿಸಿಕೊಡಬೇಕು ಎಂದು ಆದೇಶಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು