ಗುಂಪುಗಾರಿಕೆ, ಲಾಬಿ ಮಾಡುವವರಿಗೆ ಪ್ರಶಸ್ತಿ : ಸಿದ್ಧಲಿಂಗಯ್ಯ ವಿಷಾದ
ಬೆಂಗಳೂರು : ಗುಂಪುಗಾರಿಕೆ ಮಾಡುವವರಿಗೆ, ಲಾಬಿ ನಡೆಸುವವರಿಗೆ ಈ ಹೊತ್ತು ಅತ್ಯುನ್ನತ ಪ್ರಶಸ್ತಿಗಳು ದೊರಕುತ್ತಿವೆ. ಇದರಿಂದ ಪ್ರಶಸ್ತಿಗಳ ಮೌಲ್ಯವೇ ಕುಸಿಯುತ್ತಿದೆ ಎಂದು ಹಿರಿಯ ಕವಿ ಡಾ. ಜಿ.ಎಸ್. ಸಿದ್ಧಲಿಂಗಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.
ಡಾ. ಜಿಎಸ್ಎಸ್ ವಿಶ್ವಸ್ಥ ಮಂಡಳಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದ ಅವರು, ಮರ್ಯಾದೆಗೆ ಸಿಗುವ ಪ್ರಶಸ್ತಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ನೊಬೆಲ್ನಿಂದ ಹಿಡಿದು ಎಲ್ಲ ಪ್ರಶಸ್ತಿಗಳ ಕತೆಯೂ ಇದೇ ಆಗಿದೆ ಎಂದು ಅವರು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಕಲ್ಗುಡಿ ಅವರು, ತೀವ್ರವಾಗಿ ಅಳಿಯುತ್ತಿರುವ ಭಾಷೆಗಳ ಸಾಲಿನಲ್ಲಿ ಕನ್ನಡವೂ ಸೇರಿದೆ. 7 ಜ್ಞಾನಪೀಠ ಪ್ರಶಸ್ತಿ ಪಡೆದ ಸಿರಿವಂತ ಕನ್ನಡ ಭಾಷೆ ಇಂದು ಅವನತಿಯ ಅಂಚಿನಲ್ಲಿದೆ. ಕನ್ನಡ ಜನರೆಲ್ಲರೂ ಜಾಗೃತರಾಗದಿದ್ದರೆ, ಕನ್ನಡ ಅಪಾಯದ ಅಂಚನ್ನು ತಲುಪುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಂ, ಪ್ರೊ. ಕೆ.ಜಿ. ನಾಗರಾಜಪ್ಪ, ಪ್ರೊ. ಜಿ.ಎಸ್. ಶಿವರುದ್ರಪ್ಪ, ಡಾ. ಚಿದಾನಂದಮೂರ್ತಿ, ಅಗ್ರಹಾರ ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣ ಭಟ್ಟ ಮೊದಲಾದವರು ಪಾಲ್ಗೊಂಡಿದ್ದರು.
(ಇನ್ಫೋ ವಾರ್ತೆ)