ಫೆ.10ರಿಂದ ಹಂಪಿಯಲ್ಲಿ ಪುರಂದರ ಆರಾಧನೆ, ಹರಿದಾಸ ಸಮ್ಮೇಳನ
ಹೊಸಪೇಟೆ, ಜ.17 : 2002 ಫೆಬ್ರವರಿ 12 ಮಂಗಳವಾರ ಪುಷ್ಯ, ಬಹುಳ ಅಮಾವಾಸ್ಯೆ. ಅಂದು ದಾಸಶೇಷ್ಠರಾದ ಶ್ರೀಪುರಂದರದಾಸರ ಪುಣ್ಯದಿನ.
ಭಕ್ತಿಪಂಥದ ಆರಾಧಕರಾಗಿ, ಕರ್ನಾಟಕ ಸಂಗೀತ ಪಿತಾಮಹ ಎನಿಸಿಕೊಂಡ ಪುರಂದರದಾಸರು, ಡೊಂಕು ಬಾಲದ ನಾಯಕರನ್ನು ತಿದ್ದುವುದರಿಂದ ಹಿಡಿದು, ಪುರಂದರ ವಿಠ್ಠಲನ ಕಾಣುವ ಮಾರ್ಗವನ್ನು ಸರಳ ಸುಂದರ ಕನ್ನಡದಲ್ಲಿ ಜನಸಾಮಾನ್ಯರಿಗೂ ತಿಳಿಸಿಕೊಟ್ಟ ದಾಸಶ್ರೇಷ್ಠರು. ಹೀಗಾಗಿ ದಾಸರೆಂದರೆ ದಾಸರಯ್ಯ ಪುರಂದರ ದಾಸರು ಎಂದು ಜನ ಹಾಡಿಹೊಗಳಿದ್ದು.
ಇಂತಹ ಮಹಾನ್ ದಾಸಶ್ರೇಷ್ಠರನ್ನು ನಾಡಿನಾದ್ಯಂತ ಅವರ ಪುಣ್ಯದಿನದಂದು ಆರಾಧಿಸಲಾಗುತ್ತದೆ. ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರೂ ಪ್ರತಿವರ್ಷ ತಾವಿರುವಲ್ಲೇ ಪುರಂದರ ದಾಸರ ಆರಾಧನಾ ಮಹೋತ್ಸವ ಏರ್ಪಡಿಸಿ, ದಾಸರನ್ನು ಸ್ಮರಿಸುತ್ತಾರೆ. ಅವರಿಗೆ ಗಾನಾಂಜಲಿ ಅರ್ಪಿಸುತ್ತಾರೆ.
ಈ ಬಾರಿ ನಾಡಿನ ಪರಂಪರೆಯ ಪ್ರತೀಕವಾದ ಹಂಪಿಯಲ್ಲಿ ಫೆ.10ರಿಂದ 13ರವರೆಗೆ ಪುರಂದರ ದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಅಖಿಲ ಭಾರತ ಹರಿದಾಸ ಸಮ್ಮೇಳನ ಏರ್ಪಡಿಸಲಾಗಿದೆ.
ಫೆ.10ರಂದು ಸಮ್ಮೇಳನವನ್ನು ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಇತ್ತೀಚೆಗಷ್ಟೇ ದಶಮಾನೋತ್ಸವ ಆಚರಿಸಿಕೊಂಡ ಹಂಪಿ ಕನ್ನಡ ವಿಶ್ವವಿದ್ಯಾಲಯವೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಈ ವಿಷಯವನ್ನು ಪ್ರೊ. ನಾವಡಾ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಹರಿದಾಸ ಸಮ್ಮೇಳನದಲ್ಲಿ ಭಜನೆ, ದಾಸರ ಪದಗಳ ಕೀರ್ತನೆ, ಸಂಕೀರ್ತನೆ, ಉಪನ್ಯಾಸ, ಪವಮಾನ, ಧನ್ವಂತರಿ, ಹೋಮ- ಹವನವೇ ಮೊದಲಾದ ಕಾರ್ಯಕ್ರಮಗಳು ಜರುಗಲಿವೆ. ನಾಲ್ಕೂ ದಿನಗಳ ಕಾಲ ಖ್ಯಾತ ಸಂಗೀತ ವಿದ್ವಾಂಸರು ಇಲ್ಲಿ ಗಾನಾಮೃತವನ್ನೇ ಹರಿಸಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು